ನಿಮಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಶೆಟ್ಟರ್‌, ಸವದಿ ವಿರುದ್ಧ ಯತ್ನಾಳ್ ಕೆಂಡ

Apr 16, 2023, 6:18 PM IST

ವಿಜಯಪುರ (ಏ.16): ನೀವೆಲ್ಲಾ ಅಯೋಧ್ಯೆ, ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ನಿಮ್ಮನ್ನು ಬಿಜೆಪಿ ಸಚಿವರನ್ನಾಗಿ, ಉಪ‌ಮಖ್ಯಮಂತ್ರಿಗಳನ್ನಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್ ಗೆ ಹೋಗ್ತಿರಲ್ಲಾ, ನಿಮಗೆ ಮಾನ ಮರ್ಯಾದೆ, ಸ್ವಾಭಿಮಾನ ಇದೆಯಾ? ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ವಿರುದ್ಧ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಟಾಂಗ್ ನೀಡಿದರು. 

ಬಿಜೆಪಿ ಸರ್ಕಾರ ದಲಿತರಿಗೆ, ಮುಸ್ಲಿಂರಿಗೆ, ಮರಾಠರಿಗೆ, ಬ್ರಾಹ್ಮಣರಿಗೆ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿದೆ. ಎಸ್ ಡಿ ಪಿ ಐ ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಗೆ ಹೋಗಲು ನಿಮಗೆ ನಾಚಿಕೆ ಬರುತ್ತೋ ಇಲ್ವೊ ಎಂದರು. ಲಿಂಗಾಯತರ ಕಡೆಗಣನೆ ಆಗಿದೆ ಎಂದು ನೀವು ನಿಮ್ಮ ಸ್ವಾರ್ಥಕ್ಕಾಗಿ ಹೇಳ್ತಿದ್ದಿರಿ. ನಮ್ಮ ದೇಶ, ನಮ್ಮ ಸಿದ್ದಾಂತ, ನಮ್ಮ‌ ಪ್ರಮಾಣಿಕತೆ ಇದೆಲ್ಲ ನಿಮಗೆ ಇಲ್ಲ. ಪಕ್ಷಕ್ಕೆ ಅನ್ಯಾಯ ಮಾಡ್ತಿದ್ದಿರಿ, ದೇವರು ನಿಮಗೆ ಒಳ್ಳೇದು ಮಾಡಲ್ಲಾ ಎಂದು ಕಿಡಿಕಾರಿದರು.