ಮೋದಿ ಹೆಸರಲ್ಲಿ ಲೋಕಸಭೆ ಗೆಲುವು ಸುಲಭ, ರಾಜ್ಯದ್ದಲ್ಲ: ಬಿಜೆಪಿಗೆ ಬಿಎಸ್‌ವೈ ವಾರ್ನಿಂಗ್

Sep 20, 2021, 1:12 PM IST

ಬೆಂಗಳೂರು (ಸೆ. 20): ಬಿಜೆಪಿಯ ಕೆಲ ಪ್ರಭಾವಿ ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಆಡಳಿತ ಪಕ್ಷದ ಸುಮಾರು ಹದಿನೈದರಿಂದ ಇಪ್ಪತ್ತು ಮಂದಿಯನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಬಿಜೆಪಿಯ ಶಾಸಕರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. 

'ಹೈಕಮಾಂಡ್ ಅನುಮತಿ ಕೇಳಿದ್ದೇವೆ, ಇನ್ನುಂದು ತಿಂಗಳಲ್ಲಿ ಹಲವರು ಬಿಜೆಪಿ ಸೇರ್ತಾರೆ'

ಯಾವುದೇ ಕಾರಣಕ್ಕೂ ಯಾವುದೇ ಚುನಾವಣೆಯಲ್ಲೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ. ಹಾನಗಲ್‌, ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಕಾಂಗ್ರೆಸ್‌ ಪಕ್ಷ ಈಗಾಗಲೇ ಎದ್ದು ಕೂತಿದ್ದು, ತನ್ನದೇ ಆದ ಲೆಕ್ಕಾಚಾರ ಹಾಕುವ ಶಕ್ತಿ ಆ ಪಕ್ಷದವರಿಗಿದೆ. ಅಲ್ಲದೆ, ಬಿಜೆಪಿಯ ಅನೇಕ ಮುಖಂಡರನ್ನು ಸಂಪರ್ಕಿಸುವ ಜೊತೆಗೆ ತಮ್ಮ ಪಕ್ಷಕ್ಕೆ ಸೆಳೆಯುವ ಯತ್ನವನ್ನೂ ನಡೆಸಿದ್ದಾರೆಂಬ ಅರಿವು ಇರಲಿ. ಯಾವುದೇ ಕಾರಣಕ್ಕೂ ಭ್ರಮೆಯಲ್ಲಿ ಯಾರೂ ಇರಬೇಡಿ ಎಂದು ಎಚ್ಚರಿಸಿದ್ದಾರೆ.