ಚಾಮರಾಜನಗರ (ಸೆ.25): ಸರ್ಕಾರಿ ಸೇವೆಯಲ್ಲಿದ್ದು ಖಾಸಗಿ ಪ್ರಾಕ್ಟಿಸ್ ಮಾಡುವ ವೈದ್ಯರಿಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಖಡಕ್ ಸಂದೇಶ ರವಾನಿಸಿದರು. ಕೆಲವರು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಇಂಥ ವೈದ್ಯರ ಅಗತ್ಯವಿಲ್ಲ. ರಾಜಿನಾಮೆ ಕೊಟ್ಟು ಅಥವಾ ಸ್ವಯಂ ನಿವೃತ್ತಿ ಪಡೆದು ಹೋಗಲಿ ಎಂದು ಶ್ರೀರಾಮುಲು ಘರ್ಜಿಸಿದರು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವರ ಜೀವಮಾನದಲ್ಲಿ ಸರ್ಕಾರಿ ನೌಕರಿಯನ್ನು ಅವರ ಕುಟುಂಬದಲ್ಲೂ ಯಾರು ಕೇಳ್ಬಾರದು, ಆ ರೀತಿಯಲ್ಲಿ ಮಾಡ್ತೀನಿ ಎಂದು ಸಚಿವರು ಎಚ್ಚರಿಸಿದರು. ಎರಡನೇ ಬಾರಿಗೆ ಆರೋಗ್ಯ ಸಚಿವರಾಗಿ ನೇಮಕವಾಗಿರುವ ಶ್ರೀರಾಮುಲು, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ‘ಆಸ್ಪತ್ರೆ ವಾಸ್ತವ್ಯ’ವನ್ನು ಆರಂಭಿಸಿದ್ದಾರೆ. ರಾಜ್ಯದ ಗಡಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದ್ದರು.