ಮೊದಲ ಪೂಜೆಗಾಗಿ ದೇವರ ಮುಂದೆಯೇ ಕಿತ್ತಾಡ್ಕೊಂಡ BJP, JDS ಮುಖಂಡರು..!

Jan 17, 2020, 11:46 AM IST

ಮಂಡ್ಯ(ಜ.17): ಮೊದಲ ಪೂಜೆ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ದೇವರ ಮುಂದೆಯೇ ಕಿತ್ತಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಕೆ. ಆರ್. ಪೇಟೆ ಶಾಸಕ ನಾರಾಯಣ ಗೌಡ ಹಾಗೂ ಜೆಡಿಎಸ್ ತಾಲೂಕು ಪಂಚಾಯಿತಿ ಸದಸ್ಯ ರಾಜಹುಲಿ ದಿನೇಶ್ ಹಾಗೂ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.

ದೇವರ ಪೂಜೆ ಸಲ್ಲಿಸುವ ವಿಚಾರದಲ್ಲಿ ಜಗಳ ನಡೆದಿದ್ದು, ಜೆಡಿಎಸ್ ಹಾಗೂ ಬಿಜೆಪಿ‌ ಮುಖಂಡರ ನಡುವೆ ಮಾತಿಗೆ ಮಾತು ಬೆಳೆದಿದೆ. ಮೊದಲು ಪೂಜೆ ಸಲ್ಲಿಸುವ ವಿಚಾರಕ್ಕೆ ಜಗಳ ಆರಂಭವಾಗಿ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಮಂಡ್ಯ ಜಿಲ್ಲೆಯ ಕೆ. ಆರ್‌. ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯ ಗವಿರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗಲಾಟೆ ನಡೆದಿದೆ.

ನೀರಿಲ್ಲದ ಜಲಪಾತದಲ್ಲಿ ಜಲಪಾತೋತ್ಸವ, ವೈಭವ ಸೃಷ್ಟಿಸೋಕೆ KRS ನೀರು..?

ಗವಿರಂಗನಾಥಸ್ವಾಮಿಯ ರಥೋತ್ಸವದ ವೇಳೆ ಮೊದಲ ಪೂಜೆ ಸಲ್ಲಿಸುವ ವಿಚಾರಕ್ಕೆ ಜಗಳ ಆರಂಭವಾಗಿ ಬಿಜೆಪಿ ಶಾಸಕ ನಾರಾಯಣಗೌಡ ಮತ್ತು ಬೆಂಬಲಿಗರು ಹಾಗೂ ಜೆಡಿಎಸ್ ತಾಲೂಕು ಪಂಚಾಯಿತಿ ಸದಸ್ಯ ರಾಜಹುಲಿ ದಿನೇಶ್ ಹಾಗೂ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಮೊದಲು ನಾನು ಪೂಜೆ ಮಾಡಬೇಕು ಎಂದು ರಾಜಹುಲಿ ದಿನೇಶ್ ಹಾಗೂ ಬೆಂಬಲಿಗರು ತಗಾದೆ ತೆಗೆದಿದ್ದು, ಈ ಕ್ಷೇತ್ರದ ಶಾಸಕ ಮೊಲದ ಪೂಜೆ ಮಾಡಬೇಕು ಎಂದು ನಾರಾಯಣಗೌಡ ಹಾಗೂ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.

ಮೊದಲ ಪೂಜೆ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಂತರ ಪೊಲೀಸರು ಜಗಳದ ಮಧ್ಯ ಪ್ರವೇಶ ಮಾಡಿದ್ದಾರೆ. ಬಳಿಕ ರಾಜಹುಲಿ ದಿನೇಶ್‌ರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.