ಮಂಡ್ಯದಲ್ಲಿ ಗೆದ್ದ ಸುಮಲತಾ: ವಿಭಿನ್ನವಾಗಿ ಸಂಭ್ರಮಿಸಿದ ಅಂಬಿ ಅಭಿಮಾನಿ!

May 25, 2019, 12:32 PM IST

ಮಂಡ್ಯ[ಮೇ.25]: ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯೊಬ್ಬರು ಶಿವಮೊಗ್ಗದಲ್ಲಿ ನೆಂಟರಿಗೆ, ಸ್ನೇಹಿತರಿಗೆ ಬಾಡೂಟ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಶಿವಮೊಗ್ಗದ ಜೆ. ಹೆಚ್. ಪಟೇಲ್ ಬಡಾವಣೆಯ ಹನುಮಂತಪ್ಪ, ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿ. ಹದಿನೈದು ವರ್ಷದಿಂದ ಅಂಬರೀಷ್ ಅವರ ಹುಟ್ಟುಹಬ್ಬ ಆಚರಿಸುತ್ತ, ಸ್ನೇಹಿತರಿಗೆ ಸಿಹಿ ಹಂಚುತ್ತಿದ್ದ ಹನುಮಂತಪ್ಪ, ಸುಮಲತಾ ಅಂಬರೀಷ್ ಗೆದ್ದಿದ್ದಕ್ಕೆ, ಎರಡು ಕುರಿ ಕಡಿಸಿ, ಬಾಡೂಟ ಹಾಕಿಸಿದ್ದಾರೆ. ‘200 ರಿಂದ 250 ಜನರು ಬಂದು ಊಟ ಮಾಡಿ ಹೋಗಿದ್ದಾರೆ. 

ಜೆ.ಹೆಚ್.ಪಟೇಲ್ ಬಡಾವಣೆಯ ತಮ್ಮ ಮನೆ ಮುಂದೆ ಪೆಂಡಾಲ್ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಷ್ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸಿದ ನಟರಾದ ದರ್ಶನ್ ಮತ್ತು ಯಶ್ ಅವರ ಫೋಟೊಗಳು ಫ್ಲೆಕ್ಸ್’ನಲ್ಲಿ ಹಾಕಿಸಿರುವ  ಹನುಮಂತಪ್ಪನವರ ಅಭಿಮಾನ ಕಂಡು ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ