Bengaluru: ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ಬ್ಲಾಸ್ಟ್: 13 ಜನರಿಗೆ ಗಾಯ

Mar 3, 2023, 8:57 PM IST

ಬೆಂಗಳೂರು (ಮಾ.03): ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸ್ಪೋಟವಾಗಿದ್ದು, ಒಂದೇ ಕುಟುಂಬದ 13 ಜನರಿಗೆ ಗಾಯವಾಗಿ, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಜಾಜಿನಗರದ ಮರಿಯಪ್ಪನಪಾಳ್ಯದಲ್ಲಿ ನಡೆದಿದೆ. ಇಂದು ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಸಂಬಂಧಿಕರನ್ನ ಕರೆಸಿ ರಾತ್ರಿಯೆಲ್ಲ ಅಡುಗೆ ಮಾಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇವತ್ತು ಬೆಳಗ್ಗೆ ಶುಭ ಕಾರ್ಯ ನಡೆಯಬೇಕಿತ್ತು. ಆದರೆ ಬೆಳಗ್ಗೆ ಸುಮಾರು 6.10 ರ‌ ಸಮಯದಲ್ಲಿ ಹಾಲು ಕಾಯಿಸಲು ಹೋದಾಗ ಗ್ಯಾಸ್ ಲೀಕೇಜ್ ಆಗಿರೋದು ಗೊತ್ತೇ ಆಗಿಲ್ಲ .ಲೈಟರ್ ಆನ್ ಮಾಡಿದ್ದಾರಷ್ಟೆ, ಬೆಂಕಿಯ ಕಿಡಿಗೆ ಸಿಲಿಂಡರ್ ಬ್ಲಾಸ್ಟ್ ಆಗಿ ಮನೆಯಲ್ಲಿ ಮಲಗಿದ್ದ ಹದಿಮೂರು ಜನರು ‌ಗಾಯಗೊಂಡಿದ್ದಾರೆ. ಅದರಲ್ಲಿ ಆರು ಜನ ಮಹಿಳೆಯರು , ಮೂವರು ಮಕ್ಕಳು ಇದ್ದಾರೆ. ಇನ್ನೂ ಸ್ಟೋಟದ ಶಬ್ದಕೇಳಿದ ಸ್ಥಳೀಯರು ಓಡಿ ಬಂದು ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ರೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಕರೆ ಮಾಡಿ ಒಂದು‌ ಗಂಟೆಯಾದರೂ ಅಂಬ್ಯುಲೆನ್ಸ್ ಬಾರದೆ ಗಾಯಾಳುಗಳು ಪರದಾಡಿದ್ರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ರಾಜಾಜಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.