ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವೇ? ಹಾಗಿದ್ದರೆ ಈ ಮೂರು ಅಭ್ಯಾಸಗಳ ಬಿಡಿ...

By Suvarna NewsFirst Published Jun 9, 2021, 5:04 PM IST
Highlights

ಜೀವನದಲ್ಲಾಗುವ ಕೆಲವು ತೊಂದರೆ- ತಾಪತ್ರಯಗಳಿಗೆ ನಮ್ಮ ಅಭ್ಯಾಸಗಳೇ ಕಾರಣವಾಗಿರುತ್ತವೆ. ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಮನೆಯಲ್ಲಿ ಅಶಾಂತಿ ಹೆಚ್ಚುವುದಲ್ಲದೆ, ಮನೆಯ ವಾತಾವರಣ ಕೆಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಲು ಮನೆಯಲ್ಲಿರುವ ಕೆಲವು ಸಾಮಾಗ್ರಿಗಳು ಮತ್ತು ಕೆಲವು ಕೆಟ್ಟ ಅಭ್ಯಾಸಗಳು. ಹಾಗಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಮತ್ತು ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲು ಯಾವೆಲ್ಲ ಅಭ್ಯಾಸಗಳನ್ನು ಬಿಡಬೇಕಾಗುತ್ತದೆ ಎಂಬುದನ್ನು ತಿಳಿಯೋಣ...

ಮನೆಯು ಪ್ರೀತಿ ಮತ್ತು ಬಾಂಧವ್ಯದ ತಳಹದಿಯ ಮೇಲೆ ಗಟ್ಟಿಯಾಗಿ ನಿಂತಿರುತ್ತದೆ. ನಗು-ಖುಷಿ ಎಲ್ಲವೂ ಇದ್ದು, ನೆಮ್ಮದಿಯಿಂದ ಇರುವ ಸ್ಥಳಕ್ಕೆ ಮನೆಯೆಂದು ಹೆಸರು. ಹಾಗಂತ ಮನೆಯಲ್ಲಿ ಬರೀ ಪ್ರೀತಿ ಇರುವುದಿಲ್ಲ, ಆಗಾಗ ಮುನಿಸು, ಜಗಳಗಳು ನಡೆಯುತ್ತಿರುತ್ತವೆ. ಒಂದು ಮನೆಯಲ್ಲಿ ನಾಲ್ಕು ಜನ ಇರಲಿ, ಇಲ್ಲವೇ ಎರಡೇ ಜನರಿರಲಿ, ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯವಾಗಿರುತ್ತದೆ. 

ಒಬ್ಬರಿಗೆ ಹೆಚ್ಚು ಮಾತನಾಡುವುದು ಇಷ್ಟವಾದರೆ, ಮತ್ತೊಬ್ಬರಿಗೆ ಮೌನವಾಗಿರುವುದು ಇಷ್ಟವಾಗಿರುತ್ತದೆ. ಒಂದೇ ವಿಷಯದ ಬಗ್ಗೆ ಒಬ್ಬೊಬ್ಬರ ಅಭಿಪ್ರಾಯ ಒಂದೊಂದಾಗಿರುತ್ತದೆ. ಹಾಗಾಗಿ ಅಭಿಪ್ರಾಯಗಳು ಬೇರೆಯಾದಾಗ ಭಿನ್ನಾಭಿಪ್ರಾಯಗಳು ಬರುತ್ತವೆ. ಕೆಲವೊಮ್ಮೆ ಈ ರೀತಿಯಾದರೆ ಸಹಜವೆಂದು ಹೇಳಬಹುದು, ಆದರೆ ಪದೆಪದೇ ಇದೇ ರೀತಿ ಆಗುತ್ತಿದ್ದರೆ ಅದಕ್ಕೆ ಬೇರೆಯದೇ ಕಾರಣವಿರುತ್ತದೆ. ಕೆಲವು ಬಾರಿ ಪ್ರತಿ ಮಾತಿಗೂ ಜಗಳ – ವಿವಾದವಾಗುತ್ತಿದ್ದರೆ ಅಥವಾ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದಾದರೆ ಅದಕ್ಕೆ ವಾಸ್ತು ದೋಷ ಕಾರಣವಾಗಿರಬಹುದು.

ಇದನ್ನು ಓದಿ: ಈ ನಾಲ್ಕು ರಾಶಿಯವರು ತುಂಬಾ ಸೆಲ್ಫಿಶ್‌, ನಿಮ್ಮ ಜೊತೆಗಿದ್ದಾರಾ ಅಂಥವರು? 

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತಿದೆ ಎಂದಾದರೆ ಅದಕ್ಕೆ ಮನೆಯ ಸದಸ್ಯರ ಕೆಲವು ಅಭ್ಯಾಸವೇ ಆಗಿರುತ್ತದೆ. ಮನೆಯಲ್ಲಿ ಅಶಾಂತಿ ಹೆಚ್ಚುತ್ತಿದೆ, ಸದಸ್ಯರೊಂದಿಗೆ ಪರಸ್ಪರ ಭಿನ್ನಾಭಿಪ್ರಾಯ ಉಂಟಾಗುತ್ತಿದೆ ಎಂದರೆ ಅದರ ಅರ್ಥ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತಿದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ಅಭ್ಯಾಸಗಳು ಮನೆಯಲ್ಲಿ ವಾಸ್ತುದೋಷಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಯೋಣ..

ಮನೆಯಲ್ಲಿ ಈ ವಸ್ತುಗಳನ್ನಿಡುವ ಅಭ್ಯಾಸ ಬಿಡಿ
ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಕೆಲವು ವಸ್ತುಗಳು ಮನೆಯಲ್ಲಿನ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಅವುಗಳೆಂದರೆ ಹಳೆಯ ಕೆಲಸಕ್ಕೆ ಬಾರದ ವಸ್ತುಗಳು, ಕೀಲಿಕೈಯಿರದ ಬೀಗ, ಹಾಳಾಗಿರುವ ವಿದ್ಯುತ್ ಉಪಕರಣಗಳು, ಬಲೆ ಕಟ್ಟಿರುವ ಸಾಮಗ್ರಿಗಳು, ಒಡೆದಿರುವ ಪೀಠೋಪಕರಣಗಳು, ಒಡೆದ ಗಾಜು, ಹಳೆಯ ಶೂ ಮತ್ತು ಚಪ್ಪಲಿಗಳು, ಹರಿದು ಹೋಗಿರುವ ಹಳೆ ಬಟ್ಟೆಗಳು, ಸರಿಯಿರದ ಗಡಿಯಾರಗಳು ಇತ್ಯಾದಿ ಅವಶ್ಯವಿರದ ವಸ್ತುಗಳು ಮನೆಯಲ್ಲಿರುವುದರಿಂದ ಸಕಾರಾತ್ಮಕ ಶಕ್ತಿಯ ನಾಶವಾಗುವುದಲ್ಲದೆ, ನಕಾರಾತ್ಮಕ ಶಕ್ತಿ ಹೆಚ್ಚಿ ಸಮಸ್ಯೆಗಳು ಎದುರಾಗುತ್ತವೆ.
 


ಇದರಿಂದಾಗಿಯೆ ಮನೆಯಲ್ಲಿ ವಾದ-ವಿವಾದಗಳಾಗುವುದು, ನೆಮ್ಮದಿ ನಾಶವಾಗುವುದು ಮತ್ತು ಆರ್ಥಿಕತೆಯಲ್ಲಿ ಹೆಚ್ಚಿನ ಕಷ್ಟಗಳನ್ನು ಎದುರಿಸಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಹಾಗಾಗಿ ಇಂತಹ ವಸ್ತುಗಳನ್ನು ಎಸೆಯುವುದು ಉತ್ತಮ.

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರಿಗೆ ಶುಕ್ರ ದೆಸೆ, ಐಷಾರಾಮಿ ಜೀವನ ನಡೆಸ್ತಾರೆ! 

ರಾತ್ರಿ ಎಂಜಲು ಪಾತ್ರೆ ತೊಳೆಯದಿರುವುದು
ಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಹಿರಿಯರು ಹೇಳಿದ ಮಾತುಗಳು ಎಷ್ಟು ನಿಜವೆಂದು ತಿಳಿಯುತ್ತದೆ. ರಾತ್ರಿ ಹೊತ್ತು ಎಂಜಲ ಪಾತ್ರೆಯನ್ನು ತೊಳೆಯದೆ ಮಲಗುವುದು ಮನೆಗೆ ಶ್ರೇಯಸ್ಸಲ್ಲವೆಂದು ನಮ್ಮ ಹಿರಿಯರು ಹೇಳುತ್ತಿದ್ದರು. ಈಗ ವಾಸ್ತು ಶಾಸ್ತ್ರದಲ್ಲಿಯೂ ಅದನ್ನೇ ಹೇಳಲಾಗಿದ್ದು. ಇದರಿಂದ ಅನೇಕ ರೀತಿಯ ನಷ್ಟಗಳನ್ನು ಎದುರಿಸಬೇಕಾಗುತ್ತದೆ, ಅಷ್ಟೇ ಅಲ್ಲದೆ ಲಕ್ಷ್ಮೀ ದೇವಿಯ ಅವಕೃಪೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಆರ್ಥಿಕ ಸಂಕಷ್ಟಗಳನ್ನು, ಮನೆಯ ಅಶಾಂತಿಯನ್ನು ನಿವಾರಿಸಿಕೊಳ್ಳಬೇಕೆಂದರೆ ರಾತ್ರಿ ಮಲಗುವ ಮುಂಚೆ ಎಂಜಲಾಗಿರುವ ಪಾತ್ರೆಗಳನ್ನು ತೊಳೆದು, ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಅವಶ್ಯಕವಾಗಿರುತ್ತದೆ.

ಇದನ್ನು ಓದಿ: ಸಾವಿನ ಮುನ್ಸೂಚನೆ ಕೊಡುತ್ತಂತೆ ಈ ಕನಸುಗಳು! 

ಮನೆಯ ಸಾಮಗ್ರಿಗಳ ಅಸ್ತವ್ಯಸ್ತವಾಗಿಟ್ಟುಕೊಳ್ಳುವುದು
ಮನೆಯ ವಾತಾವರಣ ನೆಮ್ಮದಿಯನ್ನು ಕೊಡಬೇಕೆಂದರೆ, ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತ ಸದಾ ಅದೇ ವಾತಾವರಣವಿರುವಂತೆ ನೋಡಿಕೊಳ್ಳಬೇಕು. ಹೀಗಿದ್ದಾಗ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಮನೆಯನ್ನು ಕೊಳಕಾಗಿ, ಅಸ್ತವ್ಯಸ್ತವಾಗಿಟ್ಟುಕೊಳ್ಳುವುದರಿಂದ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಅಶಾಂತಿ ಹೆಚ್ಚುವುದಲ್ಲದೆ, ಜಗಳಗಳು ಆಗುತ್ತಿರುತ್ತವೆ. ಹಾಗಾಗಿ ಮನೆಯನ್ನು ಚಂದ ಮತ್ತು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಸಾಮಗ್ರಿಗಳನ್ನು, ಬಟ್ಟೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳುವುದು ಉತ್ತಮ. ಇದರಿಂದ ಮನೆಯು ಅಭಿವೃದ್ಧಿ ಹೊಂದುವುದಲ್ಲದೆ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

click me!