ಮತ್ತೆ ಬಂದ ಮಗಳು ಜಾನಕಿ: ಅಗಸ್ಟ್‌ನಿಂದ ನಿಮ್ಮ ಅಂಗೈಯಲ್ಲೇ ಟಿಎನ್‌ಎಸ್‌ ಕತೆ

By Suvarna NewsFirst Published Jun 13, 2022, 9:29 AM IST
Highlights
  • ಮತ್ತೆ ಬಂದ ಮಗಳು ಜಾನಕಿ
  • ಅಗಸ್ಟ್‌ನಿಂದ ನಿಮ್ಮ ಅಂಗೈಯಲ್ಲೇ ಟಿಎನ್‌ಎಸ್‌ ಕತೆ

ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸುವ ಧಾರಾವಾಹಿಗಳನ್ನು ನೀಡುವುದರಲ್ಲಿ ಸದಾ ಮುಂದಿರುವ ಟಿ ಎನ್‌ ಸೀತಾರಾಮ್‌ ಅವರ ‘ಮಗಳು ಜಾನಕಿ’ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಓಟಿಟಿ ಮೂಲಕ ಪ್ರೇಕ್ಷಕರ ಮುಂದೆ ದರ್ಶನವಾಗುತ್ತಿದೆ. ಅಂದರೆ ಭೂಮಿಕಾ ಟಾಕೀಸ್‌ ಹೆಸರಿನ ಯೂಟ್ಯೂಬ್‌ ಚಾನಲ್‌ನಲ್ಲಿ ಇನ್ನು ಮುಂದೆ ಸದರಿ ಧಾರಾವಾಹಿಯನ್ನು ನೋಡಬಹುದಾಗಿದೆ. ನೇರ ಓಟಿಟಿಯಲ್ಲಿ ಸಿನಿಮಾಗಳು ಬಿಡುಗಡೆ ಆಗುವ ರೀತಿ ಕಿರುತೆರೆಗಿಂತ ಮೊದಲು ಯೂಟ್ಯೂಬ್‌ನಲ್ಲಿ ‘ಮಗಳು ಜಾನಕಿ’ ಬರಲಿದ್ದಾಳೆ. ಈ ಹಿಂದೆ ಕಲರ್ಸ್‌ ಸೂಪರ್‌ನಲ್ಲಿ ಸದರಿ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಆದರೆ, ಕೋವಿಡ್‌ ಕಾರಣಕ್ಕೆ ಧಾರಾವಾಹಿಯನ್ನು ನಿಲ್ಲಿಸಲಾಗಿತ್ತು. ಈ ನಡುವೆ ಧಾರಾವಾಹಿಗೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕ ವರ್ಗ ಹುಟ್ಟಿಕೊಂಡಿದ್ದರು. ನಿರ್ದೇಶಕ ಟಿ ಎನ್‌ ಸೀತಾರಾಮ್‌ ಅವರು ಎಲ್ಲೇ ಹೋದರೂ ಇದೇ ಧಾರಾವಾಹಿ ಬಗ್ಗೆ ಕೇಳುತ್ತಿದ್ದರು. ಹೀಗಾಗಿ ಮತ್ತೆ ‘ಮಗಳು ಜಾನಕಿ’ ಧಾರಾವಾಹಿ ಸೆಟ್ಟೇರಿದೆ.

ಇಂದಿನಿಂದ (ಜೂ.13) ಚಿತ್ರೀಕರಣ ಶುರುವಾಗಲಿದ್ದು, ಅಗಸ್ಟ್‌ ತಿಂಗಳ ಕೊನೆಯ ಹೊತ್ತಿಗೆ ಭೂಮಿಕಾ ಟಾಕೀಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರ ಆಗಲಿದೆ. ‘ಪ್ರೇಕ್ಷಕರ ಒತ್ತಾಯದ ಮೇರೆಗೆ ಈ ಧಾರಾವಾಹಿ ಮರು ಜೀವ ಪಡೆದುಕೊಂಡಿದೆ. 300ಕ್ಕೂ ಹೆಚ್ಚು ಕಂತುಗಳಲ್ಲಿ ಧಾರಾವಾಹಿ ಮೂಡಿ ಬರಲಿದೆ. ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರ ಆಗುವುದರಿಂದ ಯಾವಾಗಬೇಕಾದರೂ ನೀವು ಇದ್ದಲಿಯೇ ಧಾರಾವಾಹಿಯನ್ನು ನೋಡಬಹುದಾಗಿದೆ. ಒಂದು ಕಂತಿನ ಅವಧಿ ಅರ್ಧ ಗಂಟೆ. ರವಿ ಮಂಡ್ಯ, ರಶ್ಮಿ, ಸುಧಾ ಬೆಳವಾಡಿ, ಮೇಧಾ ವಿದ್ಯಾಭೂಷನ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಅದೇ ತಾಂತ್ರಿಕ ತಂಡ ಮುಂದುವರಿಯಲಿದೆ. ವೆಬ್‌ ಸರಣಿ ಮಾಧರಿಯಲ್ಲಿ ಧಾರಾವಾಹಿ ಪ್ರಸಾರ ಆರಂಭಿಸಲಿದೆ’ ಎನ್ನುತ್ತಾರೆ ಟಿ ಎನ್‌ ಸೀತಾರಾಮ್‌.

ಮತ್ತೆ ಮನ್ವಂತರ!

ಸ್ಟಾರ್‌ ನಿರ್ದೇಶಕ, ಸೂಕ್ಷ್ಮ ಸಂವೇದನೆಯ ಬರಹಗಾರ, ಖ್ಯಾತ ನಟ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ಹೊಸ ಧಾರಾವಾಹಿ ‘ಮತ್ತೆ ಮನ್ವಂತರ’ ಚಿತ್ರೀಕರಣ ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭವಾಗಿತ್ತು. ಪ್ರಮುಖ ಪಾತ್ರದಲ್ಲಿ ಮಾಳವಿಕಾ ಅವಿನಾಶ್‌, ನಿರಂಜನ್‌ ದೇಶಪಾಂಡೆ, ಪ್ರಸಿದ್ಧ ಗಾಯಕ ವಿದ್ಯಾಭೂಷಣರ ಪುತ್ರಿ ಮೇಧಾ, ವೀಣಾ ಸುಂದರ್‌, ಮೇಘಾ ನಾಡಿಗೇರ್‌ ಅಭಿನಯಿಸಲಿದ್ದಾರೆ. ಎಲ್ಲಿ ಸಂಕಟ ಇರುತ್ತದೋ ಅದನ್ನು ಪರಿಹರಿಸಲು ಎಂದಿನಂತೆ ಸಿಎಸ್‌ಪಿ ಪಾತ್ರದಲ್ಲಿ ಟಿಎನ್‌ ಸೀತಾರಾಮ್‌ ಇರುತ್ತಾರೆ. ಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಟೈಟಲ್‌ ಸಾಂಗ್‌ ಬರೆದಿದ್ದು, ಪ್ರವೀಣ್‌ ರಾವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯಪ್ರಕಾಶ್‌ ಹಾಡಿದ್ದಾರೆ.ನಿರ್ದೇಶಕ ಟಿಎನ್‌ ಸೀತಾರಾಮ್‌, ‘ಈ ಸಲ ಮತ್ತೊಂದು ವಿಭಿನ್ನವಾದ ಕತೆ ಇದೆ. ಸದ್ಯ ಪೈಲೆಟ್‌ ಎಪಿಸೋಡ್‌ ಚಿತ್ರೀಕರಣ ಮಾಡುತ್ತಿದ್ದೇವೆ. ವಾಹಿನಿಯವರು ಒಪ್ಪಿಗೆ ಕೊಟ್ಟಮೇಲೆ ಒಂದೆರಡು ತಿಂಗಳ ನಂತರ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣ ಶುರು ಮಾಡಲಿದ್ದೇವೆ. ಭೂಮಿಕಾ ತಂಡ ಒಂದು ವರ್ಷ ಐದು ತಿಂಗಳ ನಂತರ ಮತ್ತೆ ಧಾರಾವಾಹಿ ಜಗತ್ತಿಗೆ ಪ್ರವೇಶ ಮಾಡುತ್ತಿದೆ’ ಎನ್ನುತ್ತಾರೆ.

ಕತೆ ಬರೆಯುವುದು ಬಿಟ್ಟು ಧಾರಾವಾಹಿಯತ್ತ ಹೊರಳಲು ಮುಖ್ಯ ಕಾರಣವೇನು ?
ಕತೆ ಬರೆದರೆ ನನಗೆ ದುಡ್ಡು ಬರುತ್ತಿರಲಿಲ್ಲ. ಬದುಕು ನನಗೆ ಮುಖ್ಯವಾಗಿತ್ತು. ಯಾರೋ ಧಾರಾವಾಹಿ ಮಾಡುವಂತೆ ಸಲಹೆ ನೀಡಿದರು. ನನಗೆ ದುಡ್ಡು ಬರುವುದೆಂದು ನಂಬಿಕೆ ಇರಲಿಲ್ಲ. ಆದರೆ ಮಾಡಿದ ಮೇಲೆ ನನಗೆ ನೆಮ್ಮದಿ ಸಿಗತೊಡಗಿತು. ಆದರೆ ಕತೆ ಬರೆಯುವ ವಿಚಾರದಲ್ಲಿ ನೆಮ್ಮದಿ ಹೋಯಿತು {ನಗು} ಮತ್ತೆ `ಮಾಯಾಮೃಗ'ದಂಥ ಹೊಸ ಧಾರಾವಾಹಿ ಯಾವಾಗ? ಮತ್ತೆ ಮಾಯಾಮೃಗದಂಥ ಧಾರಾವಾಹಿ ಅಲ್ಲ. ಅದೇ `ಮಾಯಾಮೃಗ'ವೇ ಈಗ ನಮ್ಮ `ಭೂಮಿಕಾ ಟಾಕೀಸ್' ಯೂಟ್ಯೂಬ್ ವಾಹಿನಿಯ ಮೂಲಕ ಪ್ರಸಾರವಾಗುತ್ತಿದೆ. ಈಗಾಗಲೇ ತುಂಬ ಅದ್ಭುತವಾದ ಪ್ರತಿಕ್ರಿಯೆಗಳೂ ದೊರಕುತ್ತಿವೆ. ಇಲ್ಲಿಯವರೆಗೆ ಬಿಡುಗಡೆಯಾಗಿರುವ ಕೆಲವೇ ಸಂಚಿಕೆಗಳು ಸೇರಿ ಒಟ್ಟು 2.5 ಮಿಲಿಯನ್ ಗಿಂತ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ಇದರ ನಡುವೆ ಹೊಸ ಧಾರಾವಾಹಿಯ ಕೆಲಸವೂ ಶುರುವಾಗಿದೆ. ಆದರೆ ಈ ಕೋವಿಡ್ ಸಮಸ್ಯೆ ಸಂಪೂರ್ಣವಾಗಿ ದೂರವಾದ ಬಳಿಕವಷ್ಟೇ ಅದರ ಪ್ರಸಾರದ ಕುರಿತು ಮಾಹಿತಿ ನೀಡುತ್ತೇನೆ.

click me!