
ಕನ್ನಡ ಕಿರುತೆರೆಯಲ್ಲಿ ಹಲವಾರು ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಧಾರಾವಾಹಿಯ ಚಿತ್ರೀಕರಣಕ್ಕಾಗಿ ವಿದೇಶಕ್ಕೂ ಹಾರಿದ್ದು, ಇದೆ. ಕಳೆದ ವರ್ಷ ಅಯೋಧ್ಯೆ ರಾಮ ಮಂದಿರ ಪ್ರತಿಷ್ಟಾಪನೆಯ ಸಮಯದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾದಾನ ಧಾರಾವಾಹಿಯ ತಂಡ ಅಯೋಧ್ಯೆಯಲ್ಲಿ ಕೆಲವು ದಿನಗಳ ಕಾಲ ಬಿಡು ಬಿಟ್ಟು, ರಾಮ ಮಂದಿರದ ಕಥೆಯನ್ನೂ ಸೇರಿಸಿ, ಅಯೋಧ್ಯೆಯ ವಿವಿಧ ಮಂದಿರಗಳ ಸುತ್ತಮುತ್ತಲೂ ಧಾರಾವಾಹಿಯ ಚಿತ್ರೀಕರಣ ನಡೆಸಿದ್ದರು. ಇದೀಗ ಅಂತಹುದೇ ಒಂದು ವಿಶೇಷ ಪ್ರಯೋಗವನ್ನು ಝೀ ಕನ್ನಡದ ಸೀತಾ ರಾಮ ಧಾರಾವಾಹಿ ತಂಡ ಮಾಡಿದೆ.
ಉತ್ತರ ಪ್ರದೇಶದಲ್ಲಿ ಪ್ರಯಾಗ್ ರಾಜ್ ನಲ್ಲಿ ಕಳೆದ ಎರಡು ತಿಂಗಳಿನಿಂದ ಬೃಹತ್ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಅಷ್ಟೇ ಯಾಕೆ, ವಿದೇಶದಿಂದಲೂ ಭಕ್ತರು ಕುಂಭಮೇಳಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಇಲ್ಲಿವರೆಗೂ ಕಾಣಿಸದೇ ಇದ್ದಂತಹ ನಾಗಸಾಧುಗಳು ಸಮುದ್ರೋಪಾದಿಯಲ್ಲಿ ಬಂದು ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಇದೀಗ ಸೀತಾ ರಾಮರ ಸರದಿ. ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸೀತಾರಾಮ ಧಾರಾವಾಹಿಯಲ್ಲಿ ಇದೀಗ ಮಹಾಪ್ರಯೋಗ ನಡೆದಿದ್ದು, ಪ್ರಯಾಗದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸೀತಾ, ರಾಮ ಮತ್ತು ಸುಬ್ಭಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ ತ್ರಿವೇಣಿ ಸಂಗಮದಲ್ಲಿ ಮೂರು ಜನ ಪುಣ್ಯ ಸ್ನಾನ ಮಾಡಿದ್ದಾರೆ. ಸದ್ಯ ಸೀತಾ ರಾಮಾ ಧಾರಾವಾಹಿಯ ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕುಂಭಮೇಳದಲ್ಲಿ ಭಾಗಿಯಾದ ಸೀತಾ, ರಾಮ, ಸುಬ್ಬಿಯರ ವಿಡೀಯೋ ಪ್ರಸಾರವಾಗಿದೆ.
ಸೀತಾ ರಾಮ ಮತ್ತು ಸುಬ್ಬಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದಾರೆ, ರಾಮ ಸಿಹಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾನೆ. ಇದನ್ನು ಕೇಳಿ ಸೀತೆಗೆ ಅಚ್ಚರಿಯಾಗುತ್ತಿದೆ. ಮತ್ತೊಂದೆಡೆ ಸೀತಮ್ಮನನ್ನು ಹಾಗೂ ರಾಮನನ್ನು ಒಂದು ಸಲವಾದರೂ ಅಪ್ಪಿಕೊಳ್ಳಬೇಕೆಂಬ ಬಯಕೆ ಆತ್ಮವಾಗಿರುವ ಸಿಹಿಯ ಮನಸಿನಲ್ಲಿ ಕಾಡುತ್ತಿದೆ. ಅದೇ ಸಮಯಕ್ಕೆ ನಾಗ ಸಾಧುವೊಬ್ಬರು ಸಿಹಿಯ ಕೈ ಹಿಡಿಯುತ್ತಾರೆ. ಸಿಹಿ ಅವರ ಬಳಿ ನಿಮಗೆ ನಾನು ಕಾಣಿಸ್ತಿದ್ದೀನಾ ಎಂದು ಕೇಳುತ್ತಾಳೆ. ಅದಕ್ಕೆ ಸಾಧುಗಳು, ನೀನು ಮಾತ್ರ ಅಲ್ಲ ನನಗೆ ಎಲ್ಲರೂ ಕಾಣಿಸ್ತಿದ್ದಾರೆ ಎನ್ನುತ್ತಾರೆ. ಆವಾಗ ಸಿಹಿ ತನ್ನ ಮನಸಿನಲ್ಲಿ ಮೂಡಿದ ಆಸೆಗಳನ್ನು ಹೇಳುತ್ತಾರೆ. ಸಾಧುಗಳು ಹಾಗೇ ಆಗಲಿ ಎಂದು ಆಶೀರ್ವದಿಸುತ್ತಾರೆ. ಸುಬ್ಬಿ ನೀರಿನಲ್ಲಿ ಆಡುತ್ತಿದ್ದರೆ, ಸೀತಾ ಮತ್ತು ರಾಮ ದಡದಲ್ಲಿ ನಿಂತು ಅವಳನ್ನು ನೋಡುತ್ತಿರುತ್ತಾರೆ. ಹಿಂದಿನಿಂದ ಬಂದ ಸಿಹಿ ಅಪ್ಪ-ಅಮ್ಮ ಎನ್ನುತ್ತಾ ಸೀತಾ ರಾಮರನ್ನು ಹಿಡಿಯುತ್ತಾಳೆ. ಇಬ್ಬರು ತಿರುಗಿ ಸಿಹಿಯನ್ನು ನೋಡುತ್ತಾರೆ. ಅಲ್ಲಿಗೆ ಪ್ರೊಮೋ ಕೊನೆಗೊಂಡಿದೆ.
ಇದೀಗ ಮುಂದೆ ಏನಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಸಿಹಿಯ ಆತ್ಮಕ್ಕೆ ಶಾಂತಿ ಸಿಗುತ್ತಾ? ಸಿಹಿ ಮತ್ತೆ ಸೀತಾ ರಾಮರ ಬಾಳಿನಲ್ಲಿ ಬರುತ್ತಾಳ? ಕುಂಭಮೇಳದ ಪುಣ್ಯಸ್ನಾನದಿಂದ ಸೀತಾ ರಾಮರ ಜೀವನದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಅನ್ನೋದನ್ನು ಕಾದು ನೋಡಬೇಕು. ಇದೀಗ ಪ್ರೊಮೊ ರಿಲೀಸ್ ಆಗಿದ್ದು, ಈ ಎಪಿಸೋಡ್ ಗಳು ಯಾವಾಗ ಪ್ರಸಾರವಾಗಲಿವೆ ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ. ಸದ್ಯಕ್ಕಂತೂ ಧಾರಾವಾಹಿಯಲ್ಲಿ ಭಾರ್ಗವಿಗೆ ಮನೆಯಲ್ಲಿರುವ ಮಗು ಸಿಹಿ ಅಲ್ಲ ಸುಬ್ಬಿ, ಸುಬ್ಬು ಲಕ್ಷ್ಮೀ ಅನ್ನೋದು ಗೊತ್ತಾಗಿದೆ ಅಷ್ಟೇ. ಅಲ್ಲಿಂದ ಕುಂಭಮೇಳಕ್ಕೆ ಪ್ರಯಾಣ ಬೆಳೆಸುವವರೆಗೆ ನಡುವೆ ಕಥೆ ತುಂಬಾನೆ ಇರಬಹುದು. ಯಾವುದಕ್ಕೂ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.