
ಒಂದೇ ಒಂದು ದೃಶ್ಯದ ಶೂಟಿಂಗ್ ಮಾಡಬೇಕಾದರೆ ಸೀರಿಯಲ್ಗಳಲ್ಲಿಯೂ ನಟ-ನಟಿಯರ ಜೊತೆ ಇಡೀ ತಂಡ ಸಿಕ್ಕಾಪಟ್ಟೆ ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಸೀರಿಯಲ್ಗಳ ಪೈಪೋಟಿ ಹೆಚ್ಚಿರುವ ಈ ದಿನಗಳಲ್ಲಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಇಷ್ಟೆಲ್ಲಾ ಶ್ರಮ ಅಗತ್ಯವಾಗಿ ಬೇಕಾಗುತ್ತದೆ. ಇದೀಗ ಸೀತಾರಾಮ ಸೀರಿಯಲ್ನ ಪ್ರಿಯಾ ಅರ್ಥಾತ್ ಮೇಘನಾ ಶಂಕರಪ್ಪ ಒಂದು ಟೀ ಕುಡಿಯುವ ಚಿತ್ರೀಕರಣಕ್ಕಾಗಿ ಪಟ್ಟ ಶ್ರಮದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ಇಂಥ ಸ್ಥಳಗಳಲ್ಲಿ ಶೂಟಿಂಗ್ ಮಾಡುವಾಗ, ಅವರ ಧ್ವನಿ ರೆಕಾರ್ಡ್ ಹೇಗೆ ಆಗುತ್ತದೆ ಎಂಬ ಬಗ್ಗೆಯೂ ನಟಿ ತಿಳಿಸಿಕೊಟ್ಟಿದ್ದಾರೆ.
ಈ ಸೀರಿಯಲ್ ನೋಡುವವರಿಗೆ ಪ್ರಿಯಾ ಮತ್ತು ಅಶೋಕ್ ಒಂದು ಸುಂದರವಾಗಿರುವ ಬೆಟ್ಟದ ಮೇಲೆ ಹೋಗಿ ಟೀ ಕುಡಿಯುವುದನ್ನು ನೋಡಿರಬಹುದು. ಅಷ್ಟಕ್ಕೂ ಸೀರಿಯಲ್ನಲ್ಲಿ ಪ್ರಿಯಾಗೆ ಬ್ರೆಸ್ಟ್ ಕ್ಯಾನ್ಸರ್ ಇದೆ. ಇದನ್ನು ಆಕೆಗೆ ಹೇಳಲು ಆಗದೇ ನೋವನ್ನು ಅನುಭವಿಸುತ್ತಿದ್ದಾನೆ ಅಶೋಕ್. ಮಗು ಬಯಸ್ತಿರೋ ಪ್ರಿಯಾಗೆ ಬ್ರೆಸ್ಟ್ ಕ್ಯಾನ್ಸರ್ ಇರೋದು ತಿಳಿದರೆ ಆಕೆ ಸುಲಭದಲ್ಲಿ ಇದನ್ನು ಅರಗಿಸಿಕೊಳ್ಳುವುದಿಲ್ಲ ಎನ್ನುವುದು ಆತನಿಗೆ ಗೊತ್ತು. ಇದೇ ಕಾರಣಕ್ಕೆ ಪ್ರಿಯಾಳನ್ನು ಆದಷ್ಟು ಖುಷಿಯಾಗಿ ಇಡಲು ಬಯಸುತ್ತಿದ್ದಾನೆ ಅಶೋಕ್. ಇದೇ ಕಾರಣಕ್ಕೆ ಅವಳಿಗೆ ಬೆಟ್ಟದ ಮೇಲೆ ಸುಂದರ ಜಾಗದಲ್ಲಿ ಟೀ ಡೇಟಿಂಗ್ಗೆ ಕರೆದುಕೊಂಡು ಹೋಗುತ್ತಾನೆ. ಸುಂದರ ಸ್ಥಳ ನೋಡಿದರೆ, ಪ್ರಿಯಾಳ ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂದು ಆತ ಹಾಗೆ ಮಾಡುತ್ತಾನೆ. ಅವರಿಬ್ಬರೂ ತುಂಬಾ ಎಂಜಾಯ್ ಮಾಡುತ್ತಾರೆ ಕೂಡ.
4ನೇ ಕ್ಲಾಸ್ನಲ್ಲಿದ್ದಾಗಲೇ ಯಾರ್ದೋ ಜೊತೆ ಓಡಿ ಹೋಗಿದ್ರಂತೆ ಮೇಘನಾ: ಸೀತಾರಾಮ ಪ್ರಿಯಾಳ ಕಥೆ ಕೇಳಿ!
ಆದರೆ ವಾಪಸ್ ಹೋಗುವಾಗ ಪ್ರಿಯಾ ತಮಗೆ ಸತ್ಯ ಗೊತ್ತಿರುವ ವಿಷಯವನ್ನು ಹೇಳಿ ಅಶೋಕ್ಗೆ ಶಾಕ್ ಕೊಡುತ್ತಾಳೆ. ಅಶೋಕ್ ಈ ಸತ್ಯವನ್ನು ತನ್ನಿಂದ ಮುಚ್ಚಿಸಲು ಪರದಾಡುತ್ತಿರುವ ಬಗ್ಗೆ ಹೇಳುವ ಅವಳು, ನೀವಾಗೇ ಈ ವಿಷಯ ಹೇಳುತ್ತೀರಿ ಎಂದುಕೊಂಡಿದ್ದೆ. ಆದರೆ ಹೇಳಲೇ ಇಲ್ಲ. ಅದೆಷ್ಟು ಪೇಷನ್ಸ್ ನಿಮಗೆ, ಈ ರೋಗವನ್ನು ವಾಸಿ ಮಾಡಬಹುದಲ್ಲವೆ? ಎಂದೆಲ್ಲಾ ಅಶೋಕ್ನನ್ನು ಸಮಾಧಾನ ಪಡಿಸುತ್ತಾಳೆ. ಈ ಒಂದು ದೃಶ್ಯಕ್ಕಾಗಿ ಸೀತಾರಾಮ ತಂಡ ಮತ್ತು ಪ್ರಿಯಾ-ಅಶೋಕ್ ಬೆಟ್ಟದ ಮೇಲೆ ಹೋಗುವ ಸಾಹಸ ಮಾಡಿದ್ದು, ಅದರ ಬಗ್ಗೆ ಮೇಘನಾ ಶೇರ್ ಮಾಡಿಕೊಂಡಿದ್ದಾರೆ.
ಇದೇ ವೇಳೆ, ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡುವ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ಇದೇ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. ರೆಕಾರ್ಡಿಂಗ್ ಸಿಸ್ಟಂ ಅನ್ನು ಬಟ್ಟೆಯ ಒಳಗೆ ನಟರಿಗೆ ಇಟ್ಟಿರಲಾಗುತ್ತದೆ. ಅದ್ಯಾವುದಾದರೂ ಜಾಗದಲ್ಲಿ ಇರುತ್ತದೆ. ಅಲ್ಲಿ ಧ್ವನಿ ರೆಕಾರ್ಡ್ ಆಗುತ್ತಿರುತ್ತದೆ. ತಂತ್ರಜ್ಞರು ಅದನ್ನು ತಮ್ಮ ಮಷಿನ್ ಮೂಲಕ ರೆಕಾರ್ಡ್ ಮಾಡುತ್ತಿರುತ್ತಾರೆ. ಇದರ ಮಾಹಿತಿಯನ್ನು ಮೇಘನಾ ಶಂಕರಪ್ಪ ನೀಡಿದ್ದಾರೆ. ಮೇಘನಾ ಶಂಕರಪ್ಪ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.