ಮಗಳಿಗೇ ವಿಷ ಹಾಕಿದ ಕೌಸಲ್ಯಗೆ ಕಪಾಳಮೋಕ್ಷ ಮಾಡಿದ್ದಾಳೆ ಪುಟ್ಟಕ್ಕ. ಹೆಣ್ಣು ಮಕ್ಕಳು ಹೇಗಿರಬೇಕು ಎಂದು ಪಾಠ ಮಾಡುತ್ತಿದ್ದಾರೆ ನೆಟ್ಟಿಗರು.
ಹೆಣ್ಣನ್ನು ಸಹನಾಶೀಲಳು ಎನ್ನುತ್ತಾರೆ, ಆದರೆ ಸಮಯ ಬಂದಾಗ ಕಾಳಿ, ದುರ್ಗೆ ಎಲ್ಲವೂ ಆಗುತ್ತಾಳೆ ಎನ್ನುವ ಮಾತೂ ಇದೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಕೂಡ ಕಾಳಿ ಅವತಾರ ತಾಳಿದ್ದಾಳೆ. ಎಲ್ಲ ಕಷ್ಟಗಳನ್ನೂ ನುಂಗಿಕೊಂಡು, ಸಹನೆಗೆ ಇನ್ನೊಂದು ಪ್ರತಿರೂಪವೇ ಎಂದುಕೊಂಡಿರೋ ಪುಟ್ಟಕ್ಕ ಇದೀಗ ಈ ಅವತಾರ ತಾಳಲು ಕಾರಣವೂ ಇದೆ. ಹಿರಿ ಮಗಳು ಸಹನಾಳ ಗಂಡನ ಮನೆಯಲ್ಲಿ ಆಕೆ ಅನುಭವಿಸುತ್ತಿರುವ ಚಿತ್ರಹಿಂಸೆ ಪುಟ್ಟಕ್ಕನ ತಾಳ್ಮೆಗೆಡಿಸಿದೆ. ಅದೆಷ್ಟೋ ಬಾರಿ ಮಕ್ಕಳು ಗಂಡನ ಮನೆಯವರ ಬಗ್ಗೆ ಹೇಳಿದರೂ ಮಕ್ಕಳಿಗೆ ಬುದ್ಧಿ ಹೇಳಿ ಕಳುಹಿಸಿದವಳು ಈ ಪುಟ್ಟಕ್ಕ. ಹಿರಿ ಮಗಳು ಸಹನಾ ಪತಿಯ ಮೇಲೆ ಡೌಟ್ ಪಟ್ಟಾಗಲೂ ಆಕೆಗೆ ತಿದ್ದಿ ಬುದ್ಧಿ ಹೇಳಿ ಕಳುಹಿಸಿದವಳು ಈಕೆ. ಆದರೆ ಮಗಳಿಗೇ ವಿಷ ಹಾಕುವ ಮಟ್ಟಿಗೆ ಅತ್ತೆ ಮನೆಯವರು ಬೆಳೆದು ನಿಂತಿದ್ದಾರೆ ಎಂದರೆ ಸುಮ್ಮನೇ ಇರುತ್ತಾಳೆಯೆ?
ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ತನ್ನ ಮಗನಿಂದ ಸಹನಾಳನ್ನು ದೂರ ಮಾಡುವ ಪ್ಲ್ಯಾನ್ ಮಾಡಿರೋ ಅತ್ತೆ ಕೌಸಲ್ಯ ವಿರುದ್ಧ ಪುಟ್ಟಕ್ಕ ತಿರುಗಿ ಬಿದ್ದಿದ್ದಾಳೆ. ಅವಳಿಗೆ ಕಪಾಳಮೋಕ್ಷ ಮಾಡಿದ್ದಾಳೆ. ತನಗೆ ಅತ್ತೆ ಮನೆಯಲ್ಲಿ ಕೊಡುತ್ತಿರುವ ಚಿತ್ರಹಿಂಸೆಯ ಬಗ್ಗೆ ಸಹನಾ ಹೇಳುತ್ತಿದ್ದರೂ ಅವಳ ಮೇಲೆಯೇ ಗೂಬೆ ಕುರಿಸಿದ್ದಳು ಕೌಸಲ್ಯ. ಒಂದು ಹಂತದಲ್ಲಿ ಶೀಲದ ಬಗ್ಗೆಯೂ ಮಾತನಾಡಿದಳು. ಇದನ್ನು ಪುಟ್ಟಕ್ಕ ಸಹಿಸಲಿಲ್ಲ. ಏಕೆಂದರೆ ಮಗಳು ಸಹನಾ ಏನು ಎಂಬುದು ಆಕೆಗೆ ಗೊತ್ತು. ಇನ್ನು ಸಹನಾಮೂರ್ತಿ, ಸಹನಾಧರಿತ್ರಿ ಎಂದೆಲ್ಲಾ ಬಿರುದು ತೆಗೆದುಕೊಂಡು ಸುಮ್ಮನೆ ಇದ್ದರೆ ಆಗುವುದಿಲ್ಲ ಎಂದು ಅರಿತ ಪುಟ್ಟಕ್ಕ ಕೌಸಲ್ಯಳ ಕೆನ್ನೆಗೆ ಬಾರಿಸಿದ್ದಾಳೆ. ಇದನ್ನು ನೋಡಿ ಭೇಷ್ ಭೇಷ್ ಎನ್ನುತ್ತಿದ್ದಾರೆ ನೆಟ್ಟಿಗರು.
ಅಮ್ಮ ಶಕುಂತಲಾದೇವಿಯನ್ನೇ ಕೊಲ್ಲಲು ಸುಪಾರಿ ಕೊಟ್ಟು ಬಿಟ್ನಾ ಜೈದೇವ್? ಮಾಡಿದ್ದೇನು, ಆಗಿದ್ದೇನು?
ಹೆಣ್ಣುಮಕ್ಕಳಿಗೆ ಹತ್ತಾರು ಬಿರುದುಗಳನ್ನು ನೀಡಿ ಆಕೆಯ ತಾಳ್ಮೆಯನ್ನು ಪರೀಕ್ಷೆ ಮಾಡುವವರಿಗೆ ಪುಟ್ಟಕ್ಕ ಸರಿಯಾದ ಬುದ್ಧಿ ಕಲಿಸಿದ್ದಾಳೆ ಎಂದಿರುವ ನೆಟ್ಟಿಗರು, ಇದು ಪುಟ್ಟಕ್ಕನ ರೂಪದ ಪ್ರತಿಯೊಬ್ಬ ಹೆಣ್ಣಿಗೂ ಅನ್ವಯ ಎನ್ನುತ್ತಿದ್ದಾರೆ. ಹೆಣ್ಣಾದವಳು ಒಂದು ಹಂತದಲ್ಲಿ ಎಲ್ಲವನ್ನೂ ಸಹಿಸಿಕೊಳ್ಳಬಲ್ಲಳು. ಆದರೆ ತಾಳ್ಮೆ ಮಿತಿ ಮೀರಿದಾಗ ಎಂಥ ಹೆಣ್ಣೂ ಕಾಳಿರೂಪ ತಾಳುತ್ತಾಳೆ, ದುಷ್ಟರ ಮಟ್ಟ ಹಾಕಲು ಈ ಅವತಾರ ಎತ್ತುವುದು ಅನಿವಾರ್ಯ ಕೂಡ ಎನ್ನುತ್ತಿರುವ ನೆಟ್ಟಿಗರು, ಪುಟ್ಟಕ್ಕನ ಇನ್ನೊಂದು ರೂಪಕ್ಕೆ ಫಿದಾ ಆಗಿದ್ದಾರೆ. ಇದೇ ವೇಳೆ, ಗಂಡನ ಮನೆಯಲ್ಲಿ ನಡೆಯುವ ದೌರ್ಜನ್ಯಗಳನ್ನು ಸಹಿಸಿಕೊಂಡು ಇರುವುದು ಕೂಡ ಅಕ್ಷಮ್ಯ ಎನ್ನುತ್ತಿದ್ದಾರೆ ನೆಟ್ಟಿಗರು.
ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಮಾತನ್ನು ಪಾಲಿಸಿಕೊಂಡು, ಗಂಡನ ಮನೆಯಲ್ಲಿ ಏನೇ ಬಂದರೂ ಅದನ್ನು ಸಹಿಸಿಕೊಂಡು ಹೋಗು ಎನ್ನುವ ಮಾತನ್ನು ಪ್ರತಿಹೆಜ್ಜೆಗೂ ಪಾಲನೆ ಮಾಡಿಕೊಂಡು ಹೋದರೆ, ಸಹನಾಳಿಗೆ ಆಗುವ ಗತಿಯೇ ಆಗುತ್ತದೆ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕೆಲವು ಮಂದಿ ಕಮೆಂಟ್ ಹಾಕಿದ್ದಾರೆ. ಗಂಡನ ಮನೆಯಲ್ಲಿ ನಡೆಯುವ ದೌರ್ಜನ್ಯಗಳನ್ನು ಹೇಳಿಕೊಂಡು ಹೆಣ್ಣು ತವರಿಗೆ ಬಂದಾಗ, ಆಕೆ ಚಿತ್ರಹಿಂಸೆ ಅನುಭವಿಸುತ್ತಿದ್ದರೂ ಗಂಡನೇ ಸರ್ವಸ್ವ, ಗಂಡನ ಮನೆಯೇ ಸರ್ವಸ್ವ ಎಂದೆಲ್ಲಾ ಹೇಳಿ ಆಕೆಯನ್ನು ಸಾವಿನ ಬಾಯಿಗೆ ತಳ್ಳಬೇಡಿ, ಒಮ್ಮೊಮ್ಮೆ ಪುಟ್ಟಕ್ಕನ ಹಾಗೆ ದುರ್ಗಿಯೂ ಆಗಿ ಎನ್ನುವ ಮಾತನ್ನೂ ಆಡುತ್ತಿದ್ದಾರೆ ಕೆಲವರು. ಒಟ್ಟಿನಲ್ಲಿ ಈ ಪ್ರೊಮೋ ಹಲವರ ಕಣ್ಣುತೆರೆಸುತ್ತಿದೆ. ಹೆಣ್ಣಾದವಳು ಹೇಗೆ ಇರಬೇಕು ಎನ್ನುವುದನ್ನು ತೋರಿಸುತ್ತಿದೆ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ.
ರಾಮ್ ಕಣ್ಣಲ್ಲಿ ಸೀತೆಗೆ ಕಾಣಿಸಿದ್ದು ಯಾರು? ಚಾಂದನಿನಾ, ಖುದ್ದು ಅವಳೇನಾ? ಕುತೂಹಲ ಘಟ್ಟದಲ್ಲಿ ಸೀತಾರಾಮ