ನೀನೂ ಎಲ್ಲರ ಹಾಗೆ ಆಗೋದ್ಯಲ್ಲಾ ಪುಟ್ಟಕ್ಕಾ... ಈಗ ಎದೆ ಬಡಿದುಕೊಂಡು ಅತ್ತರೆ ಏನ್​ ಪ್ರಯೋಜನ? ಫ್ಯಾನ್ಸ್​ ಕಿಡಿ

By Suvarna NewsFirst Published May 7, 2024, 12:56 PM IST
Highlights

ಶವಾಗಾರದಲ್ಲಿರುವ ಶವ ಸಹನಾಳದ್ದೇ ಎಂದು ಪುಟ್ಟಕ್ಕ ಗುರುತಿಸಿದ್ದಾಳೆ. ಅವಳ ಶವ ಸಂಸ್ಕಾರದ ದಿನ ಎದೆ ಬಡಿದುಕೊಂಡು ಅಳುತ್ತಿರೋ ಪುಟ್ಟಕ್ಕನಿಗೆ ಫ್ಯಾನ್ಸ್ ಹೇಳ್ತಿರೋದೇನು?
 

ಅಲ್ಲಿ ಸತ್ತಿರುವವಳು ಸಹನಾ ಎಂದು ಪುಟ್ಟಕ್ಕ ಗುರುತಿಸಿದ್ದಾಳೆ. ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದವಳು ತನ್ನ ಮಗಳೇ ಎಂದು ಈಕೆ ಗುರುತಿಸಿದ್ದಾಳೆ.  ಜೀವಕ್ಕೆ ಜೀವದಂತಿದ್ದ ಮಗಳನ್ನು ಪುಟ್ಟಕ್ಕ ಕಳೆದುಕೊಂಡಿದ್ದಾಳೆ. ಅವರ ಶವಸಂಸ್ಕಾರವನ್ನೂ ಮಾಡಿಯಾಗಿದೆ. ಹೇಳಿಕೇಳಿ ಪುಟ್ಟಕ್ಕನ ಪಾತ್ರಧಾರಿಯಾಗಿರುವವರು ನಟಿ ಉಮಾಶ್ರಿ ಎಂದ ಮೇಲೆ ನಟನೆ ಕೇಳಬೇಕೆ? ನಿಜವಾಗಿಯೂ ಯಾರೋ ಸತ್ತಿರುವವರಂತೆಯೇ ಅವರು ನಟಿಸಿದ್ದಾರೆ. ಎದೆ ಎದೆ ಹೊಡೆದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದರ ಪ್ರೊಮೋ ಬಿಡುಗಡೆ ಆಗುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳ ಅಭಿಮಾನಿಗಳು ನೋಡಲು ಆಗ್ತಿಲ್ಲ ನಿಮ್ಮ ಅಳುವನ್ನು, ಪ್ಲೀಸ್​ ನಿಲ್ಲಿಸಿ ಎಂದೆಲ್ಲಾ ಬೇಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಸತ್ತಿರೋಳು ಸಹನಾ ಅಲ್ಲ ಕಣಮ್ಮಾ, ಸ್ವಲ್ಪ ದಿನದಲ್ಲೇ ಅವಳು ವಾಪಸ್​ ಆಗ್ತಾಳೆ, ಹೀಗೆಲ್ಲಾ ಅತ್ತರೆ ನಮಗೂ ಅಳು ಬರುತ್ತದೆ ಎನ್ನುತ್ತಿದ್ದಾರೆ.

ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್​ ವಿಭಿನ್ನ ರೂಟ್​ಗೆ ಹೋಗಿದೆ. ಮನೆಗೆ ಬಂದಿರುವ ಮಗಳನ್ನು ಪುಟ್ಟಕ್ಕ ಹೊರೆ ಎಂದೇನೂ ಭಾವಿಸಲಿಲ್ಲ. ಅವಳ ಆಸೆ ಇದ್ದುದು ಪತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಮಗಳು ಹೋಗಲಿ ಎನ್ನುವುದು. ಅದಕ್ಕಾಗಿಯೇ ಒಂದಿಷ್ಟು ಬುದ್ಧಿಮಾತು ಹೇಳಿದ್ದಳು. ಆದರೆ ಸಹನಾ ಗಂಡನ ಮನೆ ಬಿಟ್ಟು ಬಂದಿದ್ದರ ಹಿಂದೆ ಬಹುದೊಡ್ಡ ಕಾರಣವೇ ಇತ್ತು. ಅತ್ತೆ ವಿಷ ಹಾಕಿ ಕೊಲ್ಲಲು ನೋಡಿದ್ದಳು. ಅದನ್ನಾದರೂ ಸಹನಾ ಸಹಿಸಿಕೊಂಡು ಬಿಡುತ್ತಿದ್ದಳೋ ಏನೋ. ಆದರೆ ಪ್ರೀತಿಸಿದ ಪತಿಯೇ ತನ್ನನ್ನು ನಂಬದೇ, ಅಮ್ಮನ ಪರ ವಹಿಸಿಕೊಂಡಿದ್ದು ಆಕೆಗೆ ಸಹಿಸಲು ಆಗಲಿಲ್ಲ. ಅದಕ್ಕಾಗಿಯೇ ಮನೆಗೆ ವಾಪಸಾಗಿದ್ದಳು.

ಗಂಡನಿಂದ ವಿಷ್ಯ ಮುಚ್ಚಿಡೋ ಮೊದ್ಲು ಸ್ವಲ್ಪ ಯೋಚ್ನೆ ಮಾಡ್ರಮ್ಮಾ ಅಂತಿರೋದ್ಯಾಕೆ ನೆಟ್ಟಿಗರು!

ಆದರೆ ಎಲ್ಲರಿಗೂ ಮಾದರಿಯಾಗಿರಬೇಕಿರೋ ಪುಟ್ಟಕ್ಕ ಮಗಳಿಗೆ ಬುದ್ಧಿ ಹೇಳಿದ್ದಳು. ಇದನ್ನು ಕೇಳಿ ಸಹನಾಗೆ ತವರಿನಲ್ಲಿ ತಾನೊಬ್ಬಳು ಭಾರ ಆಗುತ್ತಿದ್ದೇನೆ ಎನ್ನುವ ಅನುಭವವಾಯ್ತು. ಹೀಗೆ ಅಮ್ಮ ಬುದ್ಧಿ ಹೇಳಿದಾಗ, ಈ ಪರಿಸ್ಥಿತಿಯಲ್ಲಿ ಇರುವ ಮಕ್ಕಳಿಗೆ ಈ ರೀತಿ ಆಗುವುದು ಸಹಜವೇ. ನಿಜ ಜೀವನದಲ್ಲಿಯೂ ಈ ರೀತಿ ಆಗಿರುವ ಉದಾಹರಣೆಗಳು ಇವೆ. ಬಹುಶಃ ಈ ಸೀರಿಯಲ್​ನಲ್ಲಿಯೂ ಅದನ್ನೇ ಹೇಳಹೊರಟಿದ್ದಾರೆ ನಿರ್ದೇಶಕರು. ಆದರೆ ಪುಟ್ಟಕ್ಕನಿಂದ ಈ ರೀತಿ ಆಗಿರುವುದು ಅಭಿಮಾನಿಗಳಿಗೆ  ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದೀಗ ಆಕೆಯ ರೋಧನೆಯನ್ನೂ ನೋಡಲು ಆಗುತ್ತಿಲ್ಲ. 

 ಎಷ್ಟೇ ಕಷ್ಟವಾದರೂ, ಏನೇ ದೌರ್ಜನ್ಯ ಎಸಗಿದರೂ ಹೆಣ್ಣಾದವಳಿಗೆ ಗಂಡನೇ ಸರ್ವಸ್ವ, ಪತಿಯೇ ಪರದೈವ, ಅತ್ತೆ ಮನೆಯೇ ಎಲ್ಲವೂ ಎನ್ನುವ ಮಾತು ಹಿಂದಷ್ಟೇ ಅಲ್ಲ, ಈಗಲೂ ಹಲವೆಡೆ ಕೇಳಿ ಬರುವುದು ಇದೆ. ಪತಿಯ ಮನೆಯಲ್ಲಿ ದೌರ್ಜನ್ಯ ಸಹಿಸಲಾಗದೇ ಮನೆಬಿಟ್ಟು ತವರು ಮನೆ ಸೇರಿದ ಎಷ್ಟೋ ಹೆಣ್ಣುಮಕ್ಕಳಿಗೆ ಬುದ್ಧಿಮಾತು ಹೇಳಿ ಗಂಡನ ಮನೆಗೆ ವಾಪಸ್​ ಕಳಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ಪೈಕಿ ಆ ಹೆಣ್ಣುಮಕ್ಕಳು ಮತ್ತೆ ಹೆತ್ತವರಿಗೆ ಸಿಗುವುದು ಶವವಾಗಿ ಎನ್ನುವುದೂ ಅಷ್ಟೇ ಸತ್ಯ. ಕೆಲವು ಸಂದರ್ಭಗಳಲ್ಲಿ ಚಿಕ್ಕಪುಟ್ಟ ಜನಗಳಮಾಡಿಕೊಂಡು ತವರು ಸೇರಿದಾಗ ಇಬ್ಬರನ್ನೂ ಕುಳ್ಳರಿಸಿ ಬುದ್ಧಿಮಾತು ಹೇಳಿ ದಂಪತಿಯನ್ನು ಒಂದು ಮಾಡುವುದು ಒಳ್ಳೆಯ ನಿರ್ಧಾರ. ಆದರೆ ದೌರ್ಜನ್ಯ ಸಹಿಸಿಕೊಳ್ಳಲಾಗದೇ ತವರಿಗೆ ಬರುವ ಹೆಣ್ಣುಮಗಳಿಗೂ ಹೀಗೆ ಮಾಡುವುದು ಎಂದರೆ?  ತವರು ಸೇರಿದ ಮನೆಮಗಳ ಮೇಲೆ ನೆರೆಹೊರೆಯವರ, ಸಂಬಂಧಿಕರ ಕಣ್ಣುಗಳು ಬೇರೆ, ತಲೆಗೊಂದರಂತೆ ಮಾತು! ಬೇರೆಯವರ ಮನೆಯ ವಿಷಯಗಳೆಂದರೆ ಹೆಚ್ಚಿನವರಿಗೆ ತುಂಬಾ ಪ್ರೀತಿ. ಇದೇ ಕಾರಣಕ್ಕೆ  ತವರು ಸೇರಿದ ಮನೆ ಮಗಳಿಗೆ ಇನ್ನಿಲ್ಲದ ಮಾನಸಿಕ ಚಿತ್ರಹಿಂಸೆ ಕೊಡುವಲ್ಲಿ ಇವರು ಹಿಂದೆ-ಮುಂದೆ ನೋಡಲ್ಲ. ಇದೇ ಕಾರಣಕ್ಕೆ ಹೆಣ್ಣಿಗೆ ಅತ್ತ ಗಂಡನ ಮನೆಯೂ ಇಲ್ಲದೇ, ಇತ್ತ ತವರಿನಲ್ಲಿಯೂ ಇರಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾಗುವುದೊಂದೇ ದಾರಿಯಾಗಿಬಿಡುತ್ತದೆ. ಇದು ಪ್ರತಿನಿತ್ಯ ನಮ್ಮ ನಡುವೆಯೇ ನಡೆಯುತ್ತಿರುವ ಘಟನೆಗಳೂ ಹೌದು. ಕೊನೆಗೆ ಶವದ ಮುಂದೆ ಕುಳಿತು ಅಳುವುದೊಂದೇ ಕುಟುಂಬದವರಿಗೆ ಇರುವ ದಾರಿ. ಈಗ ಪುಟ್ಟಕ್ಕನಿಗೂ ಹೀಗೆಯೇ ಆಗಿದೆ. 

ಸ್ವಾಭಿಮಾನದ ಹೆಸ್ರಲ್ಲಿ ನಾಯಕಿಯದ್ದು ಇದ್ರಲ್ಲೂ ಓವರ್​ ಆ್ಯಕ್ಟಿಂಗಾ? ಇದೇನು ಡೈರೆಕ್ಟರೇ... ಫ್ಯಾನ್ಸ್​ ಅಸಮಾಧಾನ
 

click me!