
'ಮಾಯಾಮೃಗ' ಮಧ್ಯಾಹ್ನ ಕಳೆದು ಸಂಜೆ ಆಗುತ್ತಿರುವ ಹಾಗೆ ಜನ ಟೀ ಕುಡಿಯೋದನ್ನಾದರೂ ಮರೆತಾರು, ಮಾಯಾಮೃಗ ಸೀರಿಯಲ್ ಮಿಸ್ ಮಾಡಲ್ಲ ಅನ್ನೋ ಕಾಲವೊಂದಿತ್ತು. ಸೀಮಿತ ಧಾರಾವಾಹಿಗಳಷ್ಟೇ ಇದ್ದ ಆ ದಿನಗಳಲ್ಲಿ ಮನೆ ಮನೆಗಳಲ್ಲೂ ಸಂಜೆಯಾಗ್ತಿದ್ದ ಹಾಗೆ 'ಮಯಾಮೃಗ ಮಾಯಾಮೃಗವೆಲ್ಲಿ... ' ಅನ್ನುವ ಶೀರ್ಷಿಕೆ ಗೀತೆಯ ಸೌಂಡ್. ಆಗಷ್ಟೇ ಶಾಲೆ ಮುಗಿಸಿ ಬಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಿತಿಯ ಜನರನ್ನು ಟಿವಿ ಮುಂದೆ ಕೂರಿಸಿದ್ದ ಧಾರಾವಾಹಿ ಇದು. ಬದುಕಿನ ಕಷ್ಟ ಸುಖ, ಪರಂಪರೆ ಆಧುನಿಕತೆಯ ಮುಖಾಮುಖಿ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರ ಮಾನಸಿಕ ತುಮುಲಗಳು ಇವನ್ನೆಲ್ಲ ಚಿಕ್ಕ ಮಕ್ಕಳಿಗೂ ಅರ್ಥ ಆಗೋ ಥರ ಕನ್ವೇ ಮಾಡುವಲ್ಲಿ ಟಿ ಎನ್ ಸೀತಾರಾಂ ಗೆದ್ದಿದ್ದರು. ಲಾಯರ್ ವೃತ್ತಿಯಲ್ಲಿ ಅಂಥಾ ಯಶಸ್ಸು ಸಾಧಿಸಲು ಸಾಧ್ಯವಾದಿದ್ದರೂ ಸೀರಿಯಲ್ನಲ್ಲಿ ಸಿಎಸ್ಪಿ ಯಾಗಿ ನುರಿತ ಲಾಯರ್ ಪಾತ್ರದಲ್ಲಿ ಮಿಂಚಿದ ಅವರನ್ನು ಒಂದಿಡೀ ಜನರೇಶನ್ ಇಂದು ಮಿಸ್ ಮಾಡುತ್ತಿದೆ. ತಮ್ಮ ಅಭಿಮಾನಿ ಬಳಗಕ್ಕೆ ಅಂದು ನಿರಾಸೆ ಮಾಡದಿದ್ದ ಟಿಎನ್ಎಸ್ ಇದೀಗ ಮತ್ತೆ ಹೊಸ ಮಾಯಾಮೃಗದ ಮೂಲಕ ವೀಕ್ಷಕರಿಗೆ ಮನೋರಂಜನೆ ನೀಡುವ ಜೊತೆಗೆ ಚಿಂತನೆಗೆ ಹಚ್ಚುವುದಕ್ಕೂ ಸಜ್ಜಾಗುತ್ತಿದ್ದಾರೆ.
'ಮಾಯಾಮೃಗ' ಧಾರಾವಾಹಿಯನ್ನು ಟಿ. ಎನ್. ಸೀತಾರಾಮ್ ಜೊತೆಗೆ ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ನಿರ್ದೇಶಿಸಿದ್ದರು. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು. ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು. ಅಮೇಲೆ ಭೂಮಿಕಾ ಓಟಿಟಿಯಲ್ಲಿ ಬಿಡುಗಡೆಯಾಯ್ತು. ಜನ ಅಂದು ನೋಡಿದ್ದ ನೆನಪಲ್ಲೇ ಈ ಸೀರಿಯಲ್ನ ಮತ್ತೆ ಮತ್ತೆ ನೋಡಿದರು. ಆದರೆ ಅದದನ್ನೇ ಎಷ್ಟು ಸಲ ನೋಡಲು ಸಾಧ್ಯ, ಹಾಗಾಗಿ ಹೊಸ ಮಾಯಾಮೃಗದ ಸೃಷ್ಟಿಗೆ ಟಿ ಎನ್ ಸೀತಾರಾಮ್ ಮುಂದಾಗಿದ್ದಾರೆ.
ಈ ಧಾರಾವಾಹಿಯ ಯಶಸ್ಸಿನಿಂದ ಟಿ ಎನ್ ಸೀತಾರಾಮ್ ಮನೆ ಮಾತಾದರು. ಮುಂದೆಯೂ ಅವರದೇ ಸ್ಟೈಲಿನಲ್ಲಿ ಒಂದಿಷ್ಟು ಸೀರಿಯಲ್ಗಳನ್ನು ನಿರ್ದೇಶಿಸಿದರು. ಅವರ ನಿರ್ದೇಶನದ ಕೊನೆಯ ಧಾರಾವಾಹಿ 'ಮಗಳು ಜಾನಕಿ'. ನಂತರ ಅವರು ವಿದ್ಯಾಭೂಷಣರ ಮಗಳನ್ನು ಮುಖ್ಯ ಪಾತ್ರಕ್ಕೆ ತಂದು ಸೀರಿಯಲ್ ಒಂದನ್ನು ನಿರ್ದೇಶಿಸಲು ಪ್ಲಾನ್ ಮಾಡಿದ್ದರು. ಆದರೆ ಕೋವಿಡ್ ಕಾರಣಕ್ಕೆ ಆ ಸೀರಿಯಲ್ ತೆರೆಗೆ ಬರಲೇ ಇಲ್ಲ. ಇದೀಗ ಮತ್ತೆ ಮಾಯಾಮೃಗದ ಹಿಂದೆ ಬಿದ್ದಿದ್ದಾರೆ.
ಮಾಯಾಮೃಗ ಸೀರಿಯಲ್ ಅನ್ನು ಮತ್ತೆ ನೆನಪಿಸಿಕೊಂಡರೆ ಇದರಲ್ಲಿ ಬಹಳಷ್ಟು ಕತೆಯ ಎಳೆಗಳಿವೆ. ಮುಖ್ಯವಾಗಿ ಕೆಳ ಮಧ್ಯಮ ವರ್ಗದ ಹೆಣ್ಣುಮಕ್ಕಳ ಕನಸು, ಆದರ್ಶ, ನೋವು, ಅಡೆತಡೆಗಳು ಇತ್ಯಾದಿಗಳ ಮೇಲೆ ಹೆಚ್ಚು ಪೋಕಸ್ ಮಾಡಲಾಗಿದೆ. ಪರಂಪರೆಯನ್ನೇ ನೆಚ್ಚಿರುವ ಶಾಸ್ತ್ರಿಗಳು, ಅವರ ನಿಲುವುಗಳು, ಮುಗ್ಧ ಮನಸ್ಸಿನ ಅವರ ಪತ್ನಿ ಕಮಲಮ್ಮ, ಅವರ ಮಕ್ಕಳಾದ ಶ್ರೀ ಲಕ್ಷ್ಮೀ, ಶಾರದಾ, ಶ್ಯಾಮ ಮೊದಲಾದವರು. ಇಂಥದ್ದೇ ಇನ್ನೊಂದು ನಾರಾಯಣ ಮೂರ್ತಿಗಳ ಕುಟುಂಬ. ಹೀಗೆ ಬೇರೆ ಬೇರೆ ಕುಟುಂಬಗಳು, ಅದರ ಸದಸ್ಯರು, ಅವರ ಬದುಕು ಎಲ್ಲದರ ಸುತ್ತ ಈ ಸೀರಿಯಲ್ ಕಥೆ ಇತ್ತು.
ಗಟ್ಟಿಮೇಳ: ಮನೆಯಲ್ಲೇ ಇರುವ ಅಮ್ಮನನ್ನು ಊರೆಲ್ಲ ಹುಡುಕುತ್ತಿರುವ ಮಕ್ಕಳು
ಮುಖ್ಯವಾಗಿ ದತ್ತಣ್ಣ, ಎಸ್. ಎನ್. ಸೇತುರಾಂ, ಮಾಳವಿಕಾ, ಜಯಶ್ರೀ, ರೇಖಾ, ಅವಿನಾಶ್, ರಾಜೇಶ್ ನಟರಂಗ, ಮಂಜು ಭಾಷಿಣಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಎಂ. ಡಿ. ಪಲ್ಲವಿ ಮೊದಲಾದವರ ಸಹಜ ನಟನೆ ಈ ಸೀರಿಯಲ್ನ ಹೈಲೈಟ್ ಆಗಿತ್ತು. ಇದೀಗ ಹಳೆಯ ಜನಪ್ರಿಯ ಸೀರಿಯಲ್ನ ಶೀರ್ಷಿಕೆಯನ್ನಿಟ್ಟು ಹೊಸದೊಂದು ಸೀರಿಯಲ್ ನಿರ್ದೇಶಿಸಲು ಟಿ ಎನ್ ಸೀತಾರಾಂ ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಸುದ್ದಿ ಶೇರ್ ಮಾಡಿದ್ದಾರೆ. ಟಿ ಎನ್ ಎಸ್ ಅವರ ಸೀರಿಯಲ್ ಅಭಿಮಾನಿಗಳು ಈ ಸೀರಿಯಲ್ಗಾಗಿ ಎದುರು ನೋಡುತ್ತಿದ್ದಾರೆ.
Kendasampige: ತನ್ನ ಭವಿಷ್ಯವಾ? ಅಪ್ಪನ ಪ್ರಾಣವಾ? ಸುಮಿ ಮುಂದೆ ಎರಡು ಆಯ್ಕೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.