ನನ್ನರಸಿ ರಾಧೆಯ ವೈದೇಹಿ- ಹೇಮಾ ಬೆಳ್ಳೂರು ಅಪ್ಪನ ಬಗ್ಗೆ ಭಾವುಕ ಮಾತು

By Suvarna NewsFirst Published Feb 25, 2021, 3:08 PM IST
Highlights

ನನ್ನರಸಿ ರಾಧೆ ಸೀರಿಯಲ್‌ನಲ್ಲಿ ಅಗಸ್ತ್ಯನ ಅಮ್ಮ ವೈದೇಹಿಯಾಗಿ ಗಮನ ಸೆಳೆಯೋ ಅಭಿನಯ ನೀಡ್ತಿರೋದು ಹೇಮಾ ಬೆಳ್ಳೂರು. ಇತ್ತೀಚೆಗೆ ಅವರು ಅಪ್ಪನ ಬಗ್ಗೆ ಆಡಿದ ಮಾತು ಸಖತ್ ವೈರಲ್ ಆಗಿದೆ.

ಕಲರ್ಸ್ ಕನ್ನಡ ಚಾನೆಲ್ ನ ನನ್ನರಸಿ ರಾಧೆ ಸೀರಿಯಲ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಲ್ಲಿ ಮೊದಲು ಅಗಸ್ತ್ಯ- ಇಂಚರಾ ಕೋಳಿ ಜಗಳ ನೋಡಿ ನಗ್ತಿದ್ದ ಜನ ಈಗ ವೈದೇಹಿ, ಅಗಸ್ತ್ಯನ ಅಮ್ಮ ಮಗ ವಾತ್ಸಲ್ಯಕ್ಕೆ ಫಿದಾ ಆಗಿದ್ದಾರೆ.

ಹೇಮಾ ಬೆಳ್ಳೂರು ನನ್ನರಸಿ ಸೀರಿಯಲ್‌ನ ಅಗಸ್ತ್ಯನ ಅಮ್ಮನಾಗಿ ಗಮನ ಸೆಳೆಯುವ ಅಭಿನಯ ನೀಡುತ್ತಿದ್ದಾರೆ. ಅಪ್ಪನ ನೆರಳು ಕಂಡರೂ ಉರಿದು ಬೀಳುತ್ತಿದ್ದ ಅಗಸ್ತ್ಯನಿಗೆ ಅಪ್ಪನ ಮಹತ್ವವನ್ನು ಸಾರಿ ಹೇಳಿದ್ದು ವೈದೇಹಿ. ಅವರು ಅಪ್ಪನ ಪ್ರೀತಿಯ ಬಗ್ಗೆ ಆಡಿದ ಮಾತು ಅಗಸ್ತ್ಯ, ಇಂಚರಾ ಮಾತ್ರವಲ್ಲ, ಸೀರಿಯಲ್ ವೀಕ್ಷಕರ ಕಣ್ಣಂಚನ್ನೂ ಒದ್ದೆ ಮಾಡಿದೆ. ಆ ಮಾತುಗಳೇನಿದ್ದವು? ಇಲ್ಲಿದೆ ಅಪ್ಪನ ಬಗೆಗಿನ ಮುತ್ತಿನಂಥಾ ಮಾತುಗಳು. 

ಶ್ರೀದೇವಿ ಪುಣ್ಯ ತಿಥಿ: ನಟಿಯ ಆಸ್ತಿಯೆಲ್ಲ ಮಾರಿದ್ದರಾ ಬೋನಿ ಕಪೂರ್? ...

'ಅಮ್ಮ ಚಂದ್ರ ಇದ್ದ ಹಾಗೆ. ಅಪ್ಪ ಸೂರ್ಯ ಇದ್ದ ಹಾಗೆ. ಎಲ್ಲರೂ ಚಂದ್ರನ ಬೆಳದಿಂಗಳು ತಂಪು ಅಂತಾರೆ. ಸೂರ್ಯನ ಶಾಖಕ್ಕೆ ಶಾಪ ಹಾಕ್ತಾರೆ. ಸೂರ್ಯ ಇಲ್ದೇ ಮಳೆ ಬರಲ್ಲ. ಸೂರ್ಯ ಇಲ್ಲದೇ ಬೆಳೆ ಬೆಳೆಯಲ್ಲ. ಅಷ್ಟೇ ಯಾಕೆ ಸೂರ್ಯ ಇಲ್ದೇ ಚಂದ್ರನೂ ಬೆಳಗೋಕ್ಕಾಗಲ್ಲ. ಅಪ್ಪನೂ ಹಾಗೆ. ಅಪ್ಪ ಅಂದ್ರೆ ಕೋಪ. ಅಪ್ಪ ಅಂದ್ರೆ ಭೀತಿ. ಅಮ್ಮನೇ ಮನೆ ಬೆಳೆಗೋದು. ಅಮ್ಮನೇ ಮನೆ ಅಂದ್ಕೋತಾರೆ. ಅಪ್ಪನ ಪ್ರೀತಿ ಯಾರಿಗೂ ಕಾಣಲ್ಲ. ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ತೋರಿಸಿರೋ ಜಾತ್ರೆ ಮರೆತು ಹೋಗಿರುತ್ತೆ. ಅಮ್ಮ ಹಾಕಿದ ಕೈ ತುತ್ತು ಮಾತ್ರ ನೆನಪಿರುತ್ತೆ. ಎಷ್ಟೋ ರಾತ್ರಿ ಮಗು ಅತ್ತಾಗ ಮಗೂನ ಎತ್ಕೊಂಡು ಲಾಲಿ ಹಾಡಿ ಸಮಾಧಾನ ಮಾಡಿರುತ್ತಾನೆ. ಮಗು ಅತ್ತಾಗ ಅಪ್ಪನೂ ಅತ್ತಿರುತ್ತಾನೆ. ಹೆಮ್ಮೆಯಿಂದ ಇಡೀ ಊರಿಗೆ ಇವನು ನನ್ನ ಮಗ, ನನ್ನ ಮಗ ಅಂತ ಹೇಳ್ಕೊಂಡು ಖುಷಿ ಪಡ್ತಿರತ್ತಾನೆ. ಯಾರಾದರೂ ಓಹೋ, ನೀವು ಅವರ ಅಪ್ಪನಾ ಅಂತ ಕರೀಲಿ ಅಂತ ಕಾಯ್ತಾ ಇರ್ತಾನೆ. ಇಷ್ಟೆಲ್ಲ ಮಾಡಿರ್ತಾನೆ, ಆದ್ರೆ ಮಕ್ಕಳು ಬೆಳೀತಾ ಬೆಳೀತಾ ಅಪ್ಪನ್ನೇ ಮರೆತು ಬಿಡ್ತಾರೆ. ಅದ್ರಲ್ಲೂ ಗಂಡು ಮಕ್ಕಳಿಗೆ ಮೀಸೆ ಬರ್ತಿದ್ದ ಹಾಗೆ ಅಪ್ಪನೇ ಶತ್ರು. ಅಪ್ಪನೂ ಮೆತ್ತಗಾಗಿ ಬಿಡ್ತಾನೆ. ಸಿಟ್ಟೆಲ್ಲ ಬಿಟ್ಟು ಬಿಡ್ತಾನೆ, ಮಗ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಾನೆ. ಮಗನಿಗೆ ಅಪ್ಪನ ಪ್ರೀತಿ ಎಲ್ಲ ಮರೆತು ಹೋಗಿರುತ್ತೆ. 

ಹರ್ಷ ಲವ್ಸ್ ಭುವಿ: ವರುಧಿನಿ ಮುಂದೇನೇ ಕೇಕ್ ಓಪನ್ ಮಾಡ್ತಾಳಾ ಭುವಿ ...

ಆದ್ರೆ ಅಪ್ಪನಿಗೆ ಎಲ್ಲ ನೆನಪಿರುತ್ತೆ. ತಾನು ಹಾಡಿದ ಲಾಲಿ, ಮಗನ ಮೊದಲನೇ ಹೆಜ್ಜೆ, ಮೊದಲನೇ ನಗು.. ಎಲ್ಲ ನೆನಪಿರುತ್ತೆ. 
ಅಪ್ಪಂದಿರು ಹಾಗೇ. ಅವರ ಕಷ್ಟ ಯಾರಿಗೂ ಗೊತ್ತೇ ಆಗಲ್ಲ. ತಾನು ಪಡೋ ಕಷ್ಟ ಮಕ್ಕಳಿಗೆ ತ್ರಾಸವಾಗಬಾರದು ಅಂತ ಎಲ್ಲವನ್ನೂ ಮನೆ ಹೊರಗಡೆನೇ ಬಿಟ್ಟು ಬರ್ತಾರೆ. ಕಣ್ಣಿಗೆ ಎಣ್ಣೆ ಬಿಡ್ಕೊಂಡು ದುಡೀತಾರೆ. ಎಲ್ರೂ ಹೊಸ ಬಟ್ಟೆ ತಗೋಬೇಕಾದ್ರೆ, ನಂಗೆ ಯಾಕೆ ಬಟ್ಟೆ, ಇರೋದನ್ನೇ ಹಾಕ್ಕೊಳಲ್ಲ ಅಂತ ಸುಳ್ಳು ಹೇಳ್ತಾರೆ. ಇಷ್ಟೆಲ್ಲ ಮಾಡಿದ್ರೂ ಮಕ್ಕಳಿಗೆ ಅಪ್ಪನ ಬಗ್ಗೆ ಸಿಟ್ಟು. ಯಾಕೆ ಹೇಳು, ಅಪ್ಪ ಜೊತೆ ಇಲ್ಲ ಅಂತ. ರಾತ್ರಿ ಅಪ್ಪ ಬರ್ತಾನೆ, ಸುಸ್ತಾಗಿದ್ರೂ ಮಲಕ್ಕೊಂಡಿರೋ ಮಕ್ಕಳ ಪಕ್ಕ ಕೂರ್ತಾನೆ. ಹೊದಿಕೆ ಸರಿ ಮಾಡ್ತಾನೆ. ತಲೆ ನೇವರಿಸುತ್ತಾನೆ. ತಾನು ಪಡ್ತಾ ಇರುವ ಕಷ್ಟ ಮಕ್ಕಳಿಗೆ ನೆಮ್ಮದಿ ಕೊಡುತ್ತಲ್ಲಾ ಅನ್ನುವ ಸಮಾಧಾನ ಅವನಿಗೆ.'

ದೇವರ ಸ್ವಂತ ನಾಡಿನ ಮೇಲೆ ಪ್ರೀತಿಯಾಗಿದೆ ಎಂದ ಸನ್ನಿ ...

ವೈದೇಹಿ ಅರ್ಥಾತ್‌ ಹೇಮಾ ಬೆಳ್ಳೂರು ಎಂಥವರ ಮನಸ್ಸೂ ಕರಗುವಂತೆ, ಅಪ್ಪನ ಬಗ್ಗೆ ಪ್ರೀತಿ ಬೆಳೆಯುವಂತೆ ಆಡಿದ ಮಾತುಗಳು ಮುತ್ತಿನಂತಿವೆ. ಅಗಸ್ತ್ಯ ಮಾತ್ರವಲ್ಲ, ಅಪ್ಪನ ಬಗ್ಗೆ ತಾತ್ಸಾರ ಮಾಡುತ್ತಿದ್ದ ಮಕ್ಕಳೆಲ್ಲ ಈ ಮಾತು ಕೇಳಿ ಒಳಗೊಳಗೇ ಅತ್ತಿದ್ದಾರೆ. ಇಂಥಾ ಅರ್ಥಪೂರ್ಣ ಎಪಿಸೋಡ್ ಮೂಲಕ; ಸೀರಿಯಲ್‌ಗಳು ಸದಾ ಅತ್ತೆ ಸೊಸೆ ಜಗಳ, ಪಿತೂರಿ ಇತ್ಯಾದಿಗಳನ್ನೇ ಹೈಲೈಟ್ ಮಾಡ್ತಿವೆ ಎಂದು ದೂರುತ್ತಿದ್ದವರ ಬಾಯಿ ಮುಚ್ಚಿಸಿದಂತಾಗಿದೆ.

click me!