
ಇಂದು ಸೀರಿಯಲ್ಗಳು ಕೇವಲ ಸೀರಿಯಲ್ಗಳಾಗಿಲ್ಲ. ಅವು ಮನೆಮನೆಯ ಕಥೆಗಳಾಗಿವೆ. ಧಾರಾವಾಹಿಗಳು ಇಂದು ಅದೆಷ್ಟೋ ಮಂದಿಗೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಇಂದು ಧಾರಾವಾಹಿಗಳು ಈ ಪರಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಒಂದೇ ರೀತಿಯ ಕಥೆಗಳನ್ನು ವಿಭಿನ್ನ ರೀತಿಯಲ್ಲಿ ಹೇಳಿದರೂ, ಅದೇ ನಾಯಕಿಯ ಮುಗ್ಧತೆ, ಅದೇ ಲೇಡಿ ವಿಲನ್, ನಾದಿನಿ, ಅತ್ತೆ, ಚಿಕ್ಕಮ್ಮನೇ ವಿಲನ್ಗಳು ಏನೇ ಇದ್ದರೂ ಬಹುತೇಕರಿಗೆ ಸೀರಿಯಲ್ಗಳು ಬೇಕೇ ಬೇಕು. ಮಹಿಳಾ ವೀಕ್ಷಕರ ಸಂಖ್ಯೆ ಹೆಚ್ಚು ಎನ್ನುವ ಕಾರಣಕ್ಕೆ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ, ಭಾಷೆ ಯಾವುದೇ ಇರಲಿ ಮಹಿಳೆಯರಿಗೇ ಪ್ರಾಧಾನ್ಯತೆ ಹೆಚ್ಚು. ಸೀರಿಯಲ್ಗಳಲ್ಲಿ ಪುರುಷರು ನಾಮ್ ಕೇ ವಾಸ್ತೆ ಎನ್ನುವ ಹಾಗೆ ಇರುವುದೂ ಎಲ್ಲರಿಗೂ ಗೊತ್ತಿರುವ ಸತ್ಯವೇ. ಮಹಿಳಾ ಪ್ರಧಾನ ಸಿನಿಮಾಗಳು ಬೆರಳೆಣಿಕೆಯಷ್ಟು ಎಂದು ಸಿನಿತಾರೆಯರು ಕೊರಗುವುದು ಒಂದೆಡೆಯಾದರೆ, ಸೀರಿಯಲ್ ಮಟ್ಟಿಗೆ ಹೇಳುವುದಾದರೆ, ಕೊರಗುವ ಸರದಿ ಪುರುಷರದ್ದು!
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ನಾಯಕಿ ಭಾಗ್ಯ ಮಗಳ ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವುದನ್ನು ನೋಡಿ ಪ್ರೇರೇಪಿತರಾಗಿರುವ ಮಹಿಳೆಯೊಬ್ಬರು ಮಗನ ಜೊತೆಗೆ ಪರೀಕ್ಷೆ ಬರೆದಿದ್ದರು. ಯುಗಾದಿ ವಿಶೇಷ ಸಂಚಿಕೆಯಲ್ಲಿ ಮಹಿಳೆ ಈ ಕುರಿತು ಹೇಳಿಕೊಂಡಿದ್ದರು. ತಾವು ಭಾಗ್ಯಲಕ್ಷ್ಮಿ ಸೀರಿಯಲ್ ನೋಡಿ ಹೀಗೆ ಮಾಡಿರುವುದಾಗಿ ಹೇಳಿದ್ದರು. ಮಗ ಕೂಡ ನನ್ನ ಅಮ್ಮ ನನ್ನೊಟ್ಟಿಗೆ ಪರೀಕ್ಷೆ ಬರೆಯುತ್ತಿರುವುದಕ್ಕೆ ತುಂಬಾ ಖುಷಿಯಾಯಿತು ಎಂದಿದ್ದ.. ಪರೀಕ್ಷೆಯಲ್ಲಿ ತೇರ್ಗಡೆಯಾಗುವವರೆಗೂ ಪ್ರಯತ್ನ ಬಿಡುವುದಿಲ್ಲ ಎಂದು ಮಹಿಳೆ ಹೇಳಿದ್ದರು. ಇದೀಗ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ವೇದಿಕೆಯ ಮೇಲೂ ಭಾಗ್ಯಲಕ್ಷ್ಮಿ ಫ್ಯಾನ್ಸ್ ಜಮಾಯಿಸಿದ್ದರು. ಎಲ್ಲರೂ ಭಾಗ್ಯಳಂತೆಯೇ ಜಡೆ ಹಾಕಿಕೊಂಡು, ಅವಳಂತೆಯೇ ಬ್ಯಾಗ್ ಇಟ್ಟುಕೊಂಡು ವೇದಿಕೆ ಮೇಲೆ ಬಂದರು. ತಮಗೆ ಈ ಪರಿಯಲ್ಲಿ ಮಹಿಳೆಯರು ತೋರುತ್ತಿರುವ ಅಭಿಮಾನವನ್ನು ನೋಡಿ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್ ಕಣ್ಣೀರಾದರು.
ಅನುಬಂಧ ಅವಾರ್ಡ್ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಸುಷ್ಮಾರನ್ನು ರೆಡಿ ಮಾಡಿದ್ದು ಹೀಗೆ ನೋಡಿ...
ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಾಗ ಮನೆಯಲ್ಲಿ ಬೇಡ ಎಂದರು. ಸೀರಿಯಲ್ನಲ್ಲಿ ನಟಿಸುವ ಅವಕಾಶ ಬಂದಾಗ ಒಂದೇ ಸೀರಿಯಲ್ಗೆ ಓಕೆ ಎಂದರು. ಆದರೆ ಇಂದು ಕಿರುತೆರೆಯಲ್ಲಿ 25 ವರ್ಷಗಳ ಜರ್ನಿಯಾಗಿದೆ. ಈಗಲೂ ಭಾಗ್ಯಲಕ್ಷ್ಮಿಯಲ್ಲಿ ಪ್ರಧಾನ ಪಾತ್ರದಲ್ಲಿ ಮಿಂಚುತ್ತಿದ್ದೇನೆ. ಈ ಪರಿಯಲ್ಲಿ ಅಭಿಮಾನಿಗಳನ್ನು ಗಳಿಸಿರುವುದನ್ನು ನೋಡಿ ಹೆಮ್ಮೆಯಾಗುತ್ತಿದೆ ಎಂದು ಸುಷ್ಮಾ ಹೇಳಿದರು.
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಸೊಸೆಗಾಗಿ ಮಗನನ್ನೇ ಎಳೆದೊಯ್ದ ಅಮ್ಮ! ಜನ ಮೆಚ್ಚಿದ ಅತ್ತೆ ಇವಳೇ ಅಂತಿದ್ದಾರೆ ಫ್ಯಾನ್ಸ್: ನಿಮ್ಮ ಆಯ್ಕೆ ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.