ಕಾಂತಾರದ ದೈವನರ್ತಕ ಗುರುವ ಈಗ ತ್ರಿಪುರ ಸುಂದರಿ ಸೀರಿಯಲ್‌ನ ನಾಗದೇವ

By Suvarna NewsFirst Published Jan 6, 2023, 2:18 PM IST
Highlights

ಕಾಂತಾರ ಸಿನಿಮಾದಲ್ಲಿ ಗುರುವ ಎಂಬ ದೈವ ನರ್ತಕನ ಪಾತ್ರದಲ್ಲಿ ಗಮನ ಸೆಳೆದಿದ್ದ ನಟ ಸ್ವರಾಜ್‌ ಶೆಟ್ಟಿ ಈಗ ತ್ರಿಪುರ ಸುಂದರಿ ಸೀರಿಯಲ್‌ನಲ್ಲಿ ನಾಗದೇವನ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದ್ದಾರೆ.

ಕಾಂತಾರ ಸಿನಿಮಾ ನೋಡಿದವರಿಗೆಲ್ಲ ಈ ಗುರುವನ ಪಾತ್ರ ಗೊತ್ತು. ಸಿನಿಮಾದ ನಾಯಕ ಶಿವನ ತಮ್ಮನಾಗಿ ಈ ಗುರುವ ಇರುತ್ತಾನೆ. ಶಿವ ದೈವ ನರ್ತನಕ್ಕೆ ಒಲ್ಲೆ ಎಂದು ಧಣಿಗಳ ಅಕ್ರಮ ಕೆಲಸಕ್ಕೆ ಸಾಥ್‌ ನೀಡುತ್ತಿದ್ದಾಗ ಶ್ರದ್ಧೆಯಿಂದ ದೈವ ನರ್ತನ ಮಾಡುತ್ತಿದ್ದವ ಆತನ ತಮ್ಮ ಗುರುವ. ದೈವ ನಂಬಿಕೆಯ ಅಪಾರ ಶ್ರದ್ಧೆಯ ಈ ಅಮಾಯಕ ಯುವಕನ ಬದುಕಿನ ಕಥೆ ಅನೇಕರ ಕಣ್ಣಂಚನ್ನು ಒದ್ದೆ ಮಾಡಿತ್ತು. ಈ ಗುರುವನ ಪಾತ್ರವನ್ನು ಸ್ವರಾಜ್‌ ಶೆಟ್ಟಿ ಅನ್ನುವ ಮಂಗಳೂರಿನ ರಂಗಭೂಮಿ ಪ್ರತಿಭೆ ಅದೆಷ್ಟು ಸೊಗಸಾಗಿ ನಿರ್ವಹಿಸಿದ್ದರು ಅಂದರೆ ಈ ಪಾತ್ರ ನೋಡಿದವರೆಲ್ಲ ಯಾರೂ ದೈವ ನರ್ತನ ಮಾಡುತ್ತಿದ್ದವರೇ ಈ ಪಾತ್ರ ಮಾಡಿರಬೇಕು ಅಂದುಕೊಂಡಿದ್ದರು. ಇವರು ದೈವ ನರ್ತನ ಮಾಡುತ್ತಿದ್ದ ರೀತಿ, ಉಳಿದಂತೆ ಈ ಪಾತ್ರದಲ್ಲಿ ಇವರ ಮ್ಯಾನರಿಸಂ ಅನ್ನು ಎಲ್ಲರೂ ಮೆಚ್ಚಿಕೊಂಡವರೇ. ಆ ಪಾತ್ರಕ್ಕಾಗಿ ಇವರು ಎಷ್ಟು ಮಾರ್ಪಾಡು ಮಾಡಿಕೊಂಡಿದ್ದರೆಂದರೆ ರಿಯಲ್‌ನಲ್ಲಿ ಸ್ವರಾಜ್ ಅವರನ್ನು ನೋಡಿದವರ್ಯಾರೂ ಕಾಂತಾರದ ಗುರುವ ಇವರೇ ಅಂತ ಪತ್ತೆ ಮಾಡಲು ಆಗುತ್ತಿರಲಿಲ್ಲ.

ಅಂದ ಹಾಗೆ ಈ ಸ್ವರಾಜ್‌ ಶೆಟ್ಟಿ ಮಂಗಳೂರು ಮೂಲದ ರಂಗಭೂಮಿ ಕಲಾವಿದ. ತುಳು ಸಿನಿಮಾದಲ್ಲೂ ನಟಿಸಿದ್ದರು. ಇದೀಗ ಈ ಪ್ರತಿಭೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಹೊಸ ಸೀರಿಯಲ್‌ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಂಧರ್ವ ಲೋಕ ಹಾಗೂ ಭೂಲೋಕದ ಕುರಿತಾದ ಕಥಾಹಂದರ ಹೊಂದಿರುವ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ನಾಗದೇವನ ಪಾತ್ರದಲ್ಲಿ ಸ್ವರಾಜ್ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ಮೆಡಿಕಲ್ ಓದ್ಬೇಕಿದ್ದ ಭಾಗ್ಯಲಕ್ಷ್ಮಿ ನಟಿ ಭೂಮಿಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?

ಅಪಾಯದಲ್ಲಿ ಸಿಲುಕಿರುವ ಗಂಧರ್ವ ಲೋಕವನ್ನ ಒಬ್ಬ ವೀರ ಕಾಯಬೇಕಿದೆ. ಆತನ ಪತ್ತೆಗಾಗಿ ಗಂಧರ್ವ ಕನ್ಯೆ ಭೂಲೋಕಕ್ಕೆ ಬಂದಿದ್ದಾಳೆ. ಗಂಧರ್ವ ಲೋಕ ಆಕ್ರಮಿಸಿಕೊಂಡು ಅಟ್ಟಹಾಸ ಮಾಡುತ್ತಿರುವ ಧನಂಜಯದಿಂದ ಗಂಧರ್ವ ಲೋಕವನ್ನ ಪಾರು ಮಾಡಲು ರಾಜಕುಮಾರನಿಂದ ಮಾತ್ರ ಸಾಧ್ಯ. ಆ ರಾಜಕುಮಾರನ ಕಥೆಯೇ 'ತ್ರಿಪುರ ಸುಂದರಿ'. ಸಾಂಸಾರಿಕ ಕಥೆಗಳಿಂದ ಕೂಡಿರುವ ಕನ್ನಡ ಕಿರುತೆರೆಯಲ್ಲಿ 'ನಾಗಿನಿ' ಸೀರಿಯಲ್‌ ಸಕ್ಸಸ್ ಆಗಿತ್ತು. ಅದಕ್ಕಿಂತ ಭಿನ್ನವಾದ ಆದರೆ ಅದೇ ಬಗೆಯ ಕಥೆ ಹೊಂದಿರುವ 'ತ್ರಿಪುರ' ಸುಂದರಿಯ ಬಗ್ಗೆಯೂ ಒಳ್ಳೆಯ ಮಾತು ಕೇಳಿ ಬರುತ್ತಿದೆ. ಇದೀಗ ಈ ಸೀರಿಯಲ್‌ಗೆ ನಾಗದೇವನಾಗಿ ಕಾಂತಾರದ ಗುರುವನ ಎಂಟ್ರಿಯಾಗಿದೆ. ಸ್ವರಾಜ್‌ ಶೆಟ್ಟಿ ಅವರ ನಟನೆಯನ್ನ ಹಿರಿತೆರೆಯಲ್ಲಿ ನೋಡಿ ಮೆಚ್ಚಿದ್ದವರು ಇದೀಗ ಕಿರುತೆರೆಯಲ್ಲಿ ಅವರನ್ನು ನೋಡಿ ಅವರ ಪಾತ್ರವನ್ನು ಖುಷಿಯಿಂದ ಕುತೂಹಲದಿಂದ ನೋಡುತ್ತಿದ್ದಾರೆ.

ಈ ಸೀರಿಯಲ್‌ನಲ್ಲಿ ಕೆಲವು ವರ್ಷಗಳ ಹಿಂದೆ ಸೂರ್ಯದೇವನ ಕೃಪೆಯಿಂದ ಗಂಧರ್ವ ಲೋಕದ ಪುಟಾಣಿ ರಾಜಕುಮಾರನನ್ನು ಭೂಮಿಗೆ ಕಳುಹಿಸಲಾಗಿತ್ತು. ಭೂಲೋಕದಲ್ಲಿ ರಾಜ ಮನೆತನದಲ್ಲಿ ಗಂಧರ್ವ ಲೋಕದ ಮಗು ರಾಜಕುಮಾರ ಪ್ರದ್ಯುಮ್ನನಾಗಿ ಬೆಳೆದಿದ್ದಾನೆ. ಈಗ ಗಂಧರ್ವ ಲೋಕದಲ್ಲಿ ಕಷ್ಟಗಳು(Difficulties) ಬಂದಾಗ ರಾಜಕುಮಾರನನ್ನು ಅರಸಿ ಗಂಧರ್ವ ಕನ್ಯೆ ಆಮ್ರಪಾಲಿ ಭೂಮಿಗೆ ಬಂದಿದ್ದಾಳೆ. ಗಂಧರ್ವ ಲೋಕದ ರಾಜಕುಮಾರನನ್ನು ಪತ್ತೆ ಮಾಡಲು ಆಕೆಯ ಬಳಿ ಇರೋದು ಸೂರ್ಯನ ಪದಕ ಮಾತ್ರ. ರಾಜಕುಮಾರ ಹತ್ತಿರ ಬಂದಾಗ ಸೂರ್ಯನ ಪದಕ ಹೊಳೆಯುತ್ತದೆ. ರಾಜಕುಮಾರ(Prince) ಎಲ್ಲಿದ್ದಾನೆ ಎಂದು ಆಮ್ರಪಾಲಿ ಹುಡುಕುತ್ತಿರುವಾಗಲೇ ನಾಗದೇವ ಪ್ರತ್ಯಕ್ಷವಾಗಿದ್ದಾನೆ. ಆಮ್ರಪಾಲಿಗೆ ಭೂಲೋಕದ ರೀತಿ ನೀತಿಗಳ ಬಗ್ಗೆ ನಾಗದೇವ ಕಿವಿಮಾತು ಹೇಳಿದ್ದಾನೆ.

ಈ ನಾಗದೇವನಾಗಿ ಸ್ವರಾಜ್ ಶೆಟ್ಟಿ ನಟಿಸುತ್ತಿದ್ದಾರೆ. 'ಶಿವದೂತೆ ಗುಳಿಗೆ' ನಾಟಕದಿಂದ(Drama) ತುಳುನಾಡಿನಲ್ಲಿ ಮನೆಮಾತಾಗಿರುವ ಸ್ವರಾಜ್‌ ಶೆಟ್ಟಿ ಅವರಿಗೆ ಈ ಸೀರಿಯಲ್‌ ಬ್ರೇಕ್ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Lakshana Serial: 500 ರೂಪಾಯಿಯಲ್ಲಿ ಮನೆ ನಿಭಾಯಿಸೋ ಟಾಸ್ಕ್, ನಕ್ಷತ್ರಾ ಗೆಲ್ಲುತ್ತಾಳಾ?

click me!