Kannadathi : ಅಮ್ಮಮ್ಮನ ಅಂತ್ಯಕ್ರಿಯೆ ನನ್ನನ್ನೂ ಬಾಧಿಸಿತು : ಚಿತ್ಕಳಾ ಬಿರಾದಾರ್

By Suvarna NewsFirst Published Nov 17, 2022, 2:41 PM IST
Highlights

ಕನ್ನಡತಿ ಸೀರಿಯಲ್‌ನ ಬಹಳ ಮುಖ್ಯವಾಗಿದ್ದ ಮಾಲಾ ಸಂಸ್ಥೆಗಳ ಒಡತಿ ರತ್ನಮಾಲಾ ಪಾತ್ರ ಅಂತ್ಯವಾಗಿದೆ. ಇಲ್ಲಿ ಅಂತ್ಯಕ್ರಿಯೆ ಸೀನ್‌ಗಳನ್ನು ಬಹಳ ಗಾಢವಾಗಿ ತೋರಿಸಿದ್ರು. ಆ ಸೀನ್‌ ಬಗ್ಗೆ ನಟಿ ಚಿತ್ಕಳಾ ಅವರಿಗೆ ಬಂದ ಪ್ರತಿಕ್ರಿಯೆ ಹೇಗಿತ್ತು, ಸ್ವತಃ ಅವರು ಈ ಸ್ಥಿತಿಯನ್ನು ಹೇಗೆ ಫೀಲ್ ಮಾಡಿದ್ರು..

ಕಲರ್ಸ್ ಕನ್ನಡದಲ್ಲಿ ಆರಂಭದಿಂದ ಇಲ್ಲಿಯವರೆಗೂ ಇದ್ದ ಬಹಳ ಮುಖ್ಯ ಪಾತ್ರವೊಂದು ಅಂತ್ಯಕಂಡಿದೆ. ಮಾಲಾ ಕೆಫೆ ಹಾಗೂ ಕಂಪನಿಗಳ ಒಡತಿ ರತ್ನಮಾಲಾ ಪಾತ್ರ ಕೊನೆಯಾಗಿದೆ. ಯಾರ ಸಹಾಯವೂ ಇಲ್ಲದೇ ಒಂಟಿಯಾಗಿ ಮಾಲಾ ಸಂಸ್ಥೆಯನ್ನೂ, ತನ್ನ ಕುಟುಂಬವನ್ನೂ ಕಟ್ಟಿ ಬೆಳೆಸಿದ ಗಟ್ಟಿಗಿತ್ತಿ ರತ್ನಮಾಲಾ. ತಾನಿಷ್ಟು ಕಷ್ಟಪಟ್ಟು ಕಟ್ಟಿದ ಸಾಮ್ರಾಜ್ಯವನ್ನು ತನ್ನ ಸೊಸೆ ಭುವಿಯ ಕೈಗೆ ಹಸ್ತಾಂತರಿಸಿ ಅಮ್ಮಮ್ಮ ಅಸ್ತಂಗತಳಾಗಿದ್ದಾಳೆ. ಈ ಪಾತ್ರ ನಿರ್ವಹಿಸಿದ ಚಿತ್ಕಳಾ ಬಿರಾದಾರ್ ಜನರ ಮನಸ್ಸಲ್ಲಿ ಅಮ್ಮಮ್ಮ ಅಂತಲೇ ಗುರುತಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇದೀಗ ಈ ಪಾತ್ರದ ನಿರ್ಗಮನ ಅವರ ಅಭಿಮಾನಿಗಳೆಲ್ಲರಲ್ಲೂ ನೋವು ತಂದಿದೆ. ತಮ್ಮ ಪಾತ್ರ ಅಂತ್ಯವಾದ ಬಗ್ಗೆ ನಟಿ ಚಿತ್ಕಳಾ ಬಿರಾದಾರ್ ಅವರಿಗೂ ಸಂಕಟ, ನೋವಿದೆ. ಆದರೆ ಆ ಪಾತ್ರ ಅಂತ್ಯವಾಗದೇ ರತ್ನಮಾಲಾ ವಿಲ್ ಓಪನ್ ಆಗಲ್ಲ. ಕತೆಗೆ ಆಕೆಯ ಅಂತ್ಯ ಅನಿವಾರ್ಯ. ಇದನ್ನು ಅವರು ಹೇಳ್ತಾರೆ. ಜೊತೆಗೆ ತಮ್ಮ ಅಂತ್ಯಕ್ರಿಯೆಯ ಸೀನ್‌ಗಳನ್ನು ಅಷ್ಟು ಗಾಢವಾಗಿ ತೋರಿಸಿದ್ದಕ್ಕೆ ಬಂದ ಪ್ರತಿಕ್ರಿಯೆಗಳ ಕಂಡು ಅವರ ಮನಸ್ಸು ತುಂಬಿ ಬಂದಿದೆಯಂತೆ.

ಅರ್ಧ ಗಂಟೆ ತಬ್ಬಿಕೊಂಡೆ ಇದ್ದ ಹರ್ಷ
ಅಮ್ಮಮ್ಮನ ಪಾತ್ರ ಅಂತ್ಯವಾಗುತ್ತಿದೆ ಅಂತ ಗೊತ್ತಾದದ್ದೇ ಸೆಟ್‌ನಲ್ಲಿರುವ ಅಷ್ಟೂ ಜನ ಬಂದು ಚಿತ್ಕಳಾ ಅವರಲ್ಲಿ ನೋವು ತೋಡಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ಅಮ್ಮಮ್ಮನ ಮುದ್ದಿನ ಮಗ ಹರ್ಷನ ಪಾತ್ರದಲ್ಲಿ ನಟಿಸಿದ್ದ ಕಿರಣ್‌ರಾಜ್ ಪ್ರತಿಕ್ರಿಯೆ ಚಿತ್ಕಳಾ ಅವರನ್ನು ಹೆಚ್ಚು ಭಾವುಕವಾಗಿಸಿದೆ. ಸಾಮಾನ್ಯವಾಗಿ ಇವರಿಬ್ಬರು ಸೆಟ್‌ನಲ್ಲಿ ಬಹಳ ಕ್ಲೋಸ್‌ ಆಗಿ ಇರ್ತಾರೆ. ಆದರೆ ಫೋನ್ ಕಾಲ್, ಮೆಸೇಜ್ ಮಾಡೋದು ಕಡಿಮೆ. ಆದರೆ ಅಮ್ಮಮ್ಮ ಪಾತ್ರ ಕೊನೆ ಆಗ್ತಿದೆ ಅಂತ ಕಿರಣ್ ರಾಜ್‌ಗೆ ಗೊತ್ತಾದಾಗ ಚಿತ್ಕಳಾ ಸೆಟ್‌ಗೆ ಲೇಟಾಗಿ ಹೋಗಿದ್ರು. ಅವತ್ತು ಚಿತ್ಕಳಾ ಫೋನ್ ತುಂಬ ಹರ್ಷನ ಕಾಲ್, ಮೆಸೇಜ್‌ಗಳಿದ್ದವಂತೆ. ಅವರು ಸೆಟ್‌ಗೆ ಹೋದದ್ದೇ ಹುಡುಕಿಕೊಂಡು ಬಂದ ಕಿರಣ್‌ರಾಜ್ ಅರ್ಧ ಗಂಟೆ ಅವರನ್ನು ತಬ್ಬಿಕೊಂಡೇ ಇದ್ದರಂತೆ. ತನ್ನ ಅಮ್ಮಮ್ಮ ಪಾತ್ರ ಅಂತ್ಯವಾಗಿದ್ದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕಿರಣ್‌ರಾಜ್ ಭಾವುಕವಾಗಿ ಬರೆದುಕೊಂಡಿದ್ರು.

Kannadathi: ಭುವಿ ಕೈಗೆ ಸೂತ್ರ ಕೊಟ್ಟು ಪಾತ್ರ ಮುಗಿಸಿದ ಅಮ್ಮಮ್ಮ: ಇನ್ಮುಂದೆ ಸೀರಿಯಲ್ ನೋಡೋಲ್ಲವೆಂದ ವೀಕ್ಷಕರು!

ಹೋಮ, ಪೂಜೆ ಮಾಡಿಸಿ ಅಂತ ಅಭಿಮಾನಿಗಳ ಒತ್ತಡ
ರತ್ನಮಾಲಾ ಪಾತ್ರ ಅಂತ್ಯವಾಗಿದ್ದು ಈ ಸೀರಿಯಲ್‌ ಅಭಿಮಾನಿ(Fans)ಗಳನ್ನು ಎಷ್ಟು ಕಾಡಿದೆ ಎಂದರೆ ಬಹಳ ಮಂದಿ ಇಷ್ಟು ಡೀಟೇಲ್ಡ್ ಆಗಿ ಅಂತ್ಯಕ್ರಿಯೆ ತೋರಿಸಬಾರದಿತ್ತು ಅಂತ ಬಹಳ ಜನ ಮೆಸೇಜ್, ಕಾಲ್‌(Call)ಗಳ ಮೂಲಕ ಹೇಳಿದ್ರಂತೆ. ಇದಕ್ಕೆ ಹೋಮ ಹವನ ಮಾಡಿಸಿ, ಪೂಜೆ ಮಾಡಿಸಿ, ಜೋಯಿಸರ ಬಳಿ ಹೋಗಿ ಅಂತೆಲ್ಲ ಒತ್ತಾಯಿಸುತ್ತಿದ್ದಾರಂತೆ. ಆದರೆ ಜನರ ಆಶೀರ್ವಾದ ನನ್ನ ಮೇಲಿದೆ. ನಾನು ಫಿಟ್‌ ಆಗಿದ್ದೇನೆ. ನನಗೆ ಏನೂ ಆಗೋದಿಲ್ಲ ಅಂತ ಚಿತ್ಕಳಾ ಕಾನ್ಫಿಡೆಂಟ್ ಆಗಿ ಹೇಳ್ತಾರೆ.

ಪಾತ್ರದ ಅಂತ್ಯ ನನ್ನನ್ನೂ ಬಾಧಿಸಿತು
ಈ ಪಾತ್ರದ ಅಂತ್ಯಕ್ರಿಯೆಯ ಸೀನ್‌ಗಳನ್ನು ಬಹಳ ಗಾಢವಾಗಿ ಮಾಡ್ತೀವಿ ಅಂತ ಮೊದಲೇ ಸೀರಿಯಲ್‌ ಟೀಮ್‌ ಚಿತ್ಕಳಾ ಅವರ ಪರ್ಮಿಶನ್ (Permission)ತಗೊಂಡಿತ್ತಂತೆ. ನಡುವಿನ ಗ್ಯಾಪಲ್ಲೇ ಚಿತ್ಕಳಾ ತಮ್ಮ ತಂದೆ ತಾಯಿ ತೀರ ಆಪ್ತರಿಗೆ ಈ ವಿಚಾರ ತಿಳಿಸಿ ಅವರನ್ನು ರೆಡಿ ಮಾಡಿದ್ರು. ಎಲ್ಲೂ ಈ ಸೀನ್‌ ಲೀಕ್‌ ಆಗಬಾರದು ಅಂತ ಕೆಲವೇ ಆರ್ಟಿಸ್ಟ್ (Artist)ಗಳನ್ನಿಟ್ಟು ಬಹಳ ರಹಸ್ಯವಾಗಿ ಅಮ್ಮಮ್ಮ ಅಂತ್ಯಕ್ರಿಯೆ ಸೀನ್ ಶೂಟ್ ಮಾಡಿದ್ದಾರೆ. ಕೆರಿಯರ್ ದೃಷ್ಟಿಯಿಂದ ತನ್ನ ಪಾತ್ರ ನಿಂತುಹೋಗಿದ್ದರ ಬಗೆಗೆ ಅಂಥಾ ಬೇಸರ ಏನೂ ಚಿತ್ಕಳಾ ಅವರಿಗಿಲ್ಲ. ಆದರೆ, ಈ ಪಾತ್ರಕ್ಕೆ ಅವರು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ. ಹೀಗಾಗಿ ಈ ಪಾತ್ರದ ಅಂತ್ಯ ನನ್ನನ್ನು ಬಹಳ ಬಾಧಿಸಿದೆ ಅಂತವರು ಭಾವುಕವಾಗಿ ಹೇಳ್ತಾರೆ.

ರಾಮಾಚಾರಿಯ ಪ್ರೀತಿಯ ಅತ್ತಿಗೆಮ್ಮ ಇನ್ನಿಲ್ಲ, ಸಂಕಟ ತಡೆಯಲಾಗದೇ ಕುಸಿದುಬಿದ್ದ ರಾಮಾಚಾರಿ!

click me!