ಕಿರುತೆರೆ ಅಭಿಮಾನಿಗಳಿಗೆ ಬೇಸರ ಸುದ್ದಿ: ಪ್ರಸಾರ ನಿಲ್ಲಿಸುತ್ತಿದೆ 'ದೊರೆಸಾನಿ'?

By Suvarna NewsFirst Published Aug 18, 2022, 1:57 PM IST
Highlights

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಇದಕ್ಕೆ ಮುಖ್ಯ ಕಾರಣ ಟಿ ಆರ್ ಪಿ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಪೈಪೋಟಿ ಜೋರಾಗಿದೆ. ಪ್ರೇಕ್ಷಕರನ್ನು ಮೆಚ್ಚಿಸುವ, ಅವರ ಗಮನ ಸೆಳೆಯುವ ಧಾರಾವಾಹಿಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವಾಗಿದೆ. ಪ್ರಾರಂಭದಲ್ಲಿ ಧಾರಾವಾಹಿಗಳು ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿರುತ್ತವೆ. ಆದರೆ ಅದನ್ನು ಹೀಗೆ ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸ. ಉತ್ತಮ ಸ್ಟಾರ್ ಕಾಸ್ಟ್ ಇದ್ದರೂ ಸಹ ಅನೇಕ ಧಾರಾವಾಹಿಗಳು ದಿಢೀರ್ ಪ್ರಸಾರ ನಿಲ್ಲಿಸಿದ ಉದಾಹರಣೆ ಅನೇಕಇವೆ. ಇದೀಗ ದಿಢೀರ್ ಪ್ರಸಾರ ನಿಲ್ಲಿಸಿದ ಧಾರಾವಾಹಿ ಲಿಸ್ಟ್‌ಗೆ ಮತ್ತೊಂದು ಸೀರಿಯಲ್ ಸೇರಿಕೊಳ್ಳುತ್ತಿದೆ. ಹೌದು ಮತ್ಯಾವುದು ಅಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ. 

ದೊರೆಸಾನಿ ಧಾರಾವಾಹಿಯ 202 ಸಂಚಿಕೆಗಳು ಪ್ರಸಾರವಾಗಿದೆ. ಅಷ್ಟರಲ್ಲೇ  ಪ್ರಸಾರ ಮುಗಿಸಲು ನಿರ್ಧರಿಸಿರುವುದು ಕಿರುತೆರೆ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ. ರಾಜೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ನಟಿ ರೂಪಿಕಾ ಮತ್ತು ಪೃಥ್ವಿರಾಜ್ ಪ್ರಮುಖ ಪಾತ್ಪರದಲ್ಲಿ ನಟಿಸುತ್ತಿದ್ದರು. ನಟಿ ರೂಪಿಕಾ ದೊರೆಸಾನಿಯಲ್ಲಿ ದೀಪಿಕಾ ಪಾತ್ರ ಮಾಡುತ್ತಿದ್ದಾರೆ ನಟ ಪೃಥ್ವಿರಾಜ್ ಆನಂದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿ ಧಾರಾವಾಹಿಯ ನಾಯಕ-ನಾಯಕಿ ಮದುವೆಯಾಗುವ ಮೊದಲೇ  ಪ್ರಸಾರ ನಿಲ್ಲಿಸಲಿದೆ ಎನ್ನುವ ಮಾತು ಕೇಳಿಬರುತ್ತಿದೆ. 

Doresaan ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್ : ಸತ್ಯವತಿ ಮಗನೇ ಆನಂದ್!

ಕಲರ್ಸ್ ವಾಹಿನಿಯಲ್ಲಿ ಸಂಜೆ 6.30ಕ್ಕೆ ದೊರೆಸಾನಿ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈಗಲೂ ಪ್ರಸಾರವಾಗುತ್ತಿದೆ. ಆದರೆ ಈಗಾಗಲೇ ಕೊನೆಯ ಹಂತದ ಚಿತ್ರೀಕರಣ ಮುಕ್ತಾಯ ಮಾಡಿದೆ ಎನ್ನಲಾಗಿದೆ. ಅಂದ್ಮೇಲೆ ಸಧ್ಯದಲ್ಲೇ ದೊರೆಸಾನಿ ಧಾರಾವಾಹಿ ಪ್ರಸಾರ ನಿಲ್ಲಿಸಲಿದೆ. ಇದು ಪ್ರೇಕ್ಷಕರಿಗೆ ಶಾಕ್ ನೀಡಿದೆ. 2021 ಡಿಸೆಂಬರ್ ನಲ್ಲಿ ಪ್ರಸಾರ ಆರಂಭಿಸಿದ ಈ ಧಾರಾವಾಹಿ ಪ್ರಾರಂಭದ ದಿನಗಳಲ್ಲಿ ಪ್ರೇಕ್ಷಕರು ಕುತೂಹಲ ಹೆಚ್ಚಿಸಿತ್ತು. ಆದರೆ ನಂತರದ ದಿನಗಳಲ್ಲಿ ಅದೇ ಕುತೂಹಲವನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ. ಪ್ರೇಕ್ಷಕರು ದೊರೆಸಾನಿ ಕಡೆ ಹೆಚ್ಚು ಆಸಕ್ತಿ ತೋರಿಲ್ಲ. ಟಿಆರ್‌ಪಿ ಕಾರಣದಿಂದ ಈ ಧಾರಾವಾಹಿ ನಿರೀಕ್ಷೆಗೂ ಮೊದಲೇ ಪ್ರಸಾರ ನಿಲ್ಲಿಸುವ ನಿರ್ಧಾರ ಮಾಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.  

Doresani serial : ಪುರುಷೋತ್ತಮ್ ಅವರೇ ಅದೆಷ್ಟು ಬಾರಿ ಎದೆ ಹಿಡ್ಕೊಂಡು ಕೂರ್ತೀರಾ?

ಅಂದಹಾಗೆ ಧಾರಾವಾಹಿಯಲ್ಲಿ ಪೃಥ್ವಿರಾಜ್ ಮತ್ತು ರೂಪಿಕಾ ಜೊತೆಗೆ ಜೈದೇವ್ ಮೋಹನ್, ಮಧುಮತಿ, ಶ್ವೇತಾ, ಭವಾನಿ ಪ್ರಕಾಶ್ ದರ್ಶಿತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಆದರೀಗ ಪ್ರೇಕ್ಷಕರು ಎಲ್ಲರನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಾಯಕ ಆನಂದ್ ಮತ್ತು ನಾಯಕಿ ದೀಪಿಕಾ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರೂ ದೀಪಿಕಾ ತಂದೆಯ ಕಾರಣದಿಂದ ಲವ್ ಮ್ಯಾರೇಜ್ ಆಗದೆ ಇರಲು ನಿರ್ಧರಿಸಿ ಆನಂದ್ ಪ್ರೀತಿ ತ್ಯಜಿಸಿ ಆನಂದ್ ಗೆಳೆಯನನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಆನಂದ್, ದೀಪಿಕಾ ಸೆಲೆಕ್ಟ ಮಾಡಿದ ಹುಡುಗಿ ಜೊತೆ ಮದುವೆಗೆ ಸಜ್ಜಾಗಿದ್ದಾರೆ. ಈ ನಡುವೆ ದೀಪಿಕಾ ಅತ್ತಿಗೆ ಸಿಂಚನಾ ಕುತಂತ್ರ ಬಯಲಾಗುವ ಸಮಯ ಹತ್ತಿರ ಬಂದಿದೆ.  ಮತ್ತೊಂಡಿದೆ ಆನಂದ್ ತನ್ನ ತಾಯಿಯ ಹುಡುಕಾಟದಲ್ಲಿದ್ದಾರೆ. ಸತ್ಯಾವತಿಯೇ ತಾಯಿ ಎಂದು ಆನಂದ್ ಗೆ ಇನ್ನು ಗೊತ್ತಾಗಿಲ್ಲ. ಆದರೆ ಸತ್ಯಾವತಿಗೆ ಈಗಾಗಲೇ ಆನಂದ್ ತನ್ನ ಮಗ ಎನ್ನುವ ಸತ್ಯ ಗೊತ್ತಾಗಿದೆ. ಆದರೆ ಆನಂದ್ ಬಳಿ ಹೇಳದೆ ಮುಚ್ಚಿಟ್ಟಿದ್ದಾರೆ. ತಾಯಿ ಹುಡುಕುತ್ತಾ ಬಂದ ಆನಂದನ್ ನನ್ನು ನೋಡಿ ಸತ್ಯಾವತಿ ಬಚ್ಚಿಟ್ಟುಕೊಂಡಿದ್ದಾರೆ.  ಎಲ್ಲವೂ ಕೊನೆಯ ಹಂತಕ್ಕೆ ಬಂದು ನಿಂತಿದೆ. ಸದ್ಯದಲ್ಲೇ ಆನಂದ್ ಮತ್ತು ದೀಪಿಕಾ ಪ್ರೀತಿಯನ್ನು ದೀಪಿತಾ ತಂದೆ ಒಪ್ಪಿಕೊಳ್ಳುವ ಸಾಧ್ಯತೆ ಇಧೆ. ಅಲ್ಲಿಗೆ ಈ ಧಾರಾವಾಹಿಗೆ ಅಂತ್ಯ ಹಾಡುವ ಸಾಧ್ಯತೆ ಇದೆ. ಮುಂದೇನಾಗುತ್ತೆ, ಯಾವಾಗ ಪ್ರಸಾರ ನಿಲ್ಲಿಸಲಿದೆ ಎಂದು ಕಾದುನೋಡಬೇಕು. 

click me!