ಗಟ್ಟಿಮೇಳದಲ್ಲಿ ವಿಲನ್ನೇ ಚೇಂಜ್! ನಮಗೆ ಹಳೇ ಸುಹಾಸಿನಿನೇ ಬೇಕು ಅಂತಿದ್ದಾರೆ ವೀಕ್ಷಕರು

By Suvarna NewsFirst Published Dec 23, 2022, 2:20 PM IST
Highlights

ಸೀರಿಯಲ್‌ನಲ್ಲಿ ಪಾತ್ರಧಾರಿಗಳು ಬಿಟ್ಟುಹೋಗೋದು, ಆ ಜಾಗಕ್ಕೆ ಮತ್ಯಾರೋ ಹೊಸಬರು ಬರೋದು ಇತ್ತೀಚೆಗೆ ಕಾಮನ್ ಆಗಿದೆ. ಈಗ ಗಟ್ಟಿಮೇಳ ಸೀರಿಯಲ್‌ನಲ್ಲಿ ವಿಲನ್ನೇ ಚೇಂಜ್ ಆಗಿದ್ದಾರೆ. ಅರ್ಚನಾ ಕೃಷ್ಣಪ್ಪ ಮಾಡ್ತಿದ್ದ ಸುಹಾಸಿನಿ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಆಗಿದೆ. ಆದರೆ ಈ ಬದಲಾವಣೆ ಒಪ್ಪದ ವೀಕ್ಷಕರು ನಮಗೆ ಹಳೇ ಸುಹಾಸಿನಿಯೇ ಬೇಕು ಅಂತಿದ್ದಾರೆ.

ವರ್ಷಾನುಗಟ್ಟಲೆ ನಡೆಯೋ ಸೀರಿಯಲ್‌ಗಳಲ್ಲಿ ಆಗಾಗ ಪಾತ್ರಧಾರಿಗಳು ನಡುವೆಯೇ ಪಾತ್ರ ಬಿಟ್ಟು ಹೋಗೋದು, ಆ ಜಾಗಕ್ಕೆ ಹೊಸಬರು ಬರೋದು ಕಾಮನ್. ಹೆಚ್ಚಾಗಿ ಪೋಷಕರ ಪಾತ್ರಗಳಲ್ಲಿ ಇಂಥಾ ಬದಲಾವಣೆ ಆಗ್ತಿತ್ತು. ಆದರೆ 'ಲಕ್ಷ್ಮೀ ಬಾರಮ್ಮ', 'ಜೊತೆ ಜೊತೆಯಲಿ' ಸೀರಿಯಲ್‌ಗಳಲ್ಲೆಲ್ಲ ಹೀರೋನೇ ಬದಲಾಗಿದ್ದಾರೆ. 'ಕನ್ನಡತಿ'ಯಲ್ಲಿ ವಿಲನ್ನೇ ಅರ್ಧದಿಂದ ಎದ್ದು ನಡೆದಿದ್ದರು. ಇದೀಗ 'ಗಟ್ಟಿಮೇಳ' ದ ಸರದಿ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಈ ಸೀರಿಯಲ್‌ಗೆ ಟಿಆರ್‌ಪಿ ಚೆನ್ನಾಗಿದೆ. ರಕ್ಷ್ ಮತ್ತು ನಿಶಾ ಈ ಸೀರಿಯಲ್‌ನ ನಾಯಕ ನಾಯಕಿ. ರೌಡಿ ಬೇಬಿಯಂಥಾ ಅಮೂಲ್ಯ, ಮಜವಾಗಿರೋ ವೇದಾಂತ್ ಪಾತ್ರಗಳನ್ನ ಜನ ಎನ್ ಜಾಯ್ ಮಾಡ್ತಿದ್ರು. ಜೊತೆಗೆ ಅಷ್ಟೇ ಖಡಕ್ ವಿಲನ್‌ ಆಗಿ ಪ್ರೇಕಕರನ್ನು ಸಿಟ್ಟಿಗೆಬ್ಬಿಸುತ್ತಿದ್ದ ಪಾತ್ರ ಸುಹಾಸಿನಿಯದು. ವೇದಾಂತ್ ಚಿಕ್ಕಮ್ಮನಾಗಿ ಮನೆಯೊಡತಿಯನ್ನೇ ಮನೆಯಿಂದ ಮಕ್ಕಳಿಂದ ಬೇರೆ ಮಾಡೋ ಘಟವಾಣಿ ಹೆಣ್ಣುಮಗಳು ಈ ಸುಹಾಸಿನಿ. ಈ ಪಾತ್ರ ಮಾಡುತ್ತಿದ್ದವರು ನಟಿ ಅರ್ಚನಾ ಕೃಷ್ಣಪ್ಪ.

ಅರ್ಚನಾ ಅವರು ಇದೀಗ ಗಟ್ಟಿಮೇಳದ ಮೇನ್‌ ವಿಲನ್‌ ಪಾತ್ರದಿಂದ ಹೊರ ನಡೆದಿದ್ದಾರೆ. ಸಣ್ಣ ಸುಳಿವೂ ಇಲ್ಲದೇ ದಿನ ಕಳೆದು ರಾತ್ರಿ ಆಗೋದ್ರೊಳಗೆ ಆ ವಿಲನ್‌ ಜಾಗದಲ್ಲಿ ಹೊಸ ವಿಲನ್‌ ನಿಂತಿದ್ದಾರೆ. ಇದನ್ನು ಕಂಡು ಕಕ್ಕಾಬಿಕ್ಕಿ ಆಗೋ ಸರದಿ ವೀಕ್ಷಕರದು.

ಅರ್ಚನಾ ಕೃಷ್ಣಪ್ಪ ಅವರು ಸುಹಾಸಿನಿ ಪಾತ್ರಕ್ಕೆ ಹೊಂದಿಕೊಂಡಿದ್ದರು. ಈಗ ಇದ್ದಕ್ಕಿದ್ದ ಹಾಗೆಯೇ ಬದಲಾಗಿರುವುದು ಪ್ರೇಕ್ಷಕರಿಗೆ ಬೇಸರ ತಂದಿದೆ. 'ಗಟ್ಟಿಮೇಳ' ಧಾರಾವಾಹಿ ಶುರುವಾದಾಗ ಅರ್ಚನಾ ಕೃಷ್ಣಪ್ಪ ಅವರು ಸುಹಾಸಿನಿ ಪಾತ್ರದಲ್ಲಿ ನಟಿಸುತ್ತಿದ್ದರು. ಬಳಿಕ ವೈಯಕ್ತಿಕ ಕಾರಣದಿಂದ ಧಾರಾವಾಹಿಯಿಂದ ಹೊರ ನಡೆದರು. ಆಗ ಆ ಜಾಗಕ್ಕೆ ನಟಿ ಸ್ವಾತಿ ಅವರು ಬಂದಿದ್ದರು. ಇದಾಗಿ ಮತ್ತೆ ಕೆಲ ತಿಂಗಳ ಹಿಂದೆ ಅರ್ಚನಾ ಕೃಷ್ಣಪ್ಪ ಅವರೇ ಮರಳಿದ್ದರು. ಸುಹಾಸಿನಿ ಪಾತ್ರ ಅರ್ಚನಾ ಅವರಿಗೆ ಸೂಟ್ ಆಗಿದ್ದು, ಬೇರೆಯವರನ್ನು ಒಪ್ಪಲು ಪ್ರೇಕ್ಷಕರಿಗೂ ಇಷ್ಟ ಇರಲಿಲ್ಲ. ಆದರೆ ಈಗ ಮತ್ತೆ ಬದಲಾವಣೆ ಆಗಿದೆ. ಅರ್ಚನಾ ಈ ಪಾತ್ರದಿಂದ ಮತ್ತೆ ಹೊರನಡೆಸಿದ್ದಾರೆ. ಇದು ವೀಕ್ಷಕರಿಗೆ ಬೇಸರ ತಂದಿದೆ.

ಗೆಳೆಯರಿಂದಲೇ ನೋವುಂಡ ರಾಮಾಚಾರಿ ಹೀರೋ! ರಿತ್ವಿಕ್‌ಗಾದ ಅವಮಾನ ಏನು?

ಈ ಬಾರಿ ಅರ್ಚನಾಕೃಷ್ಣಪ್ಪ ಅವರ ಜಾಗಕ್ಕೆ ನಟಿ ಸಿಂಧೂ ಕಲ್ಯಾಣ್ ಬಂದಿದ್ದಾರೆ. ಅರ್ಚನಾ ಅವರು ಮತ್ತೆ ಧಾರಾವಾಹಿಯಿಂದ ಯಾಕೆ ಹೊರ ನಡೆದರು ಅನ್ನೋ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಸಿಂಧೂ ಅವರನ್ನು ನೋಡಿದ ಪ್ರೇಕ್ಷಕರು ಶಾಕ್ ಆಗಿದ್ದಾರೆ. ನಮಗೆ ಹಳೇ ಸುಹಾಸಿನಿಯೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಇನ್‌ಸ್ಟಾ ಪುಟಗಳಲ್ಲಿ ಅರ್ಚನಾ ಪರ ದನಿ ಎತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಸುಹಾಸಿನಿ ಪಾತ್ರ ಮಾಡಿದ್ದ ಅರ್ಚನಾ ಕೃಷ್ಣಪ್ಪ ಅವರು ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮಿಳಿನ 'ಊರ್ವುಗಲ್' ಎಂಬ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು. ಅರ್ಚನಾ ಕೃಷ್ಣಪ್ಪ ಅವರು ಹೆಚ್ಚು ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ವಿಚ್ಛೇದನಕ್ಕೆ ಮುಂದಾದ ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿ; ಹೆಣ್ಣು ಮಗು ದತ್ತು ಸುಳಿವು ಕೇಳಿ ನೆಟ್ಟಿಗರು ಶಾಕ್

ಸದ್ಯಕ್ಕೀಗ ಈಗ ಸುಹಾಸಿನಿ ಪಾತ್ರಕ್ಕೆ ಬಂದಿರುವ ಸಿಂಧೂ ಕಲ್ಯಾಣ್. ಇವರು ಕನ್ನಡ ಕಿರುತೆರೆಯ ಸಕ್ರಿಯ ನಟಿ. 'ಪುಟ್ಟಗೌರಿ' ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿದವರು. 'ಅರಮನೆ ಗಿಳಿ', 'ರಾಮಾಚಾರಿ' ಧಾರಾವಾಹಿಗಳಲ್ಲಿ ಸಿಂಧೂ ಕಲ್ಯಾಣ್ ಅವರು ನಟಿಸಿದ್ದಾರೆ. ಇದೀಗ ಗಟ್ಟಿಮೇಳ ಸೀರಿಯಲ್‌ನಲ್ಲಿ ಸುಹಾಸಿನಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಆದರೆ ವೀಕ್ಷಕರು ಮಾತ್ರ ಅರ್ಚನಾ ಅವರೇ ಬೇಕು ಅಂದಿರೋದು ಇವರಿಗೆ ಸದ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

click me!