
ಮುಖ್ಯಮಂತ್ರಿ ಚಂದ್ರುಗೆ ಶಂಕರ್ ನಾಗ್ ವಿಶ್!
'ನಿಮ್ಮ ಒಬ್ಬ ಗೆಳೆಯ ಈ ಮೂವೆಂಟ್ನಲ್ಲಿ ನಿಮ್ಗೆ ವಿಶ್ ಮಾಡೋದಾದ್ರೆ ಹೇಗೆ ಮಾಡ್ತಾರೆ ಅನ್ನೊದನ್ನ ನಾವೀಗ ತೋರಿಸ್ತಾ ಇದೀವಿ' ಅಂತ ಹೇಳುತ್ತ 'ಭಾಗ್ಯಲಕ್ಷ್ಮೀ' ಸೀರಿಯಲ್ ಖ್ಯಾತಿಯ ನಟಿ ಸುಷ್ಮಾ ಕೆ ರಾವ್ ಅವರು ನಟ ಮುಖ್ಯ ಮಂತ್ರಿ ಚಂದ್ರು (Mukhyamantri Chandru) ಅವರಿಗೆ ವೇದಿಕೆ ಮೇಲೆ ಹೇಳ್ತಾರೆ. ಆಗ ಸಹಜವಾಗಿಯೇ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅಲ್ಲಿರುವ ಎಲ್ಲರಿಗೂ ಕುತೂಹಲ ಮೂಡುತ್ತದೆ. ಹಾಗಿದ್ರೆ ಚಂದ್ರು ಅವರಿಗೆ ವಿಶ್ ಮಾಡಿರೋ ಆ ನಟ ಯಾರು? ಏನಂತ ವಿಶ್ ಮಾಡಿದಾರೆ ಅಂತ ಮುಂದೆ ನೋಡಿ...
'ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಶಂಕರ್ ನಾಗ್.. ಎಲ್ರೂ ಹೇಗಿದ್ದೀರಿ? ಇಲ್ಲಿ ಅವ್ನೇನು ಮಾಡ್ತಿದಾನೆ ಅನ್ನೋ ಆಲೋಚನೆ ನಿಮ್ಗೆ ಎಲ್ಲರಿಗೂ ಬಂದಿರಬಹುದು. ನಮ್ಮ ಸ್ನೇಹಿತ ಚಂದ್ರು ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದಾನೆ. ಹಾಗಾಗಿ ಶುಭ ಹಾರೈಸೋಣ ಅಂತ.. ಚಂದ್ರು, ಹೇಗಿದ್ದೀಯ ಮಾರಾಯ? ಈ 50 ವರ್ಷದಲ್ಲಿ ಬೇಸರ ಒಂದೇ, ನಾನು ನಿನ್ನ ಜೊತೆಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.. ಆದ್ರೆ ಏನ್ ಮಾಡೋದು? ಆ ಅದೃಷ್ಟ ನನಗೆ ಇಲ್ಲದೇಹೋಯ್ತು.. ಆರೋಗ್ಯದ ಕಡೆ ಜೋಪಾನ ಮಾರಾಯ.. ಅಲ್ಲೇ ಇದ್ದಿದ್ರೆ ಇವತ್ತು ಒಂದು ಗುಂಡು ಪಾರ್ಟಿ ಮಾಡಬಹುದಾಗಿತ್ತು' ಎಂದು ದಿವಂಗತ ನಟ ಶಂಕರ್ ನಾಗ್ ಧ್ವನಿಯಲ್ಲಿರುವ ಆಡಿಯೋ ಪ್ಲೇ ಆಗಿದೆ.
ಅದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್-2025 ಕಾರ್ಯಕ್ರಮ.. ಅಲ್ಲಿ ಈ ಘಟನೆ ನಡೆದಿದೆ. ವೇದಿಕೆ ಮೇಲಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ತಮ್ಮ ಸ್ನೇಹಿತ-ಸಹನಟ ದಿವಂಗತ ಶಂಕರ್ ನಾಗ್ (Shankar Nag) ಅವರು ವಿಶ್ ಮಾಡಿರುವ ಆಡಿಯೋ ಕ್ಲಿಪ್ ಕೇಳಿ ಒಮ್ಮೆ ದುಃಖ, ಒಮ್ಮೆ ಖುಷಿ ಅನುಭವಿಸಿದ್ದಾರೆ. ಕಾರಣ, ಅವರು ನಮ್ಮ ಜೊತೆ ಈಗಿಲ್ಲ ಎಂಬ ನೋವು ಒಂದುಕಡೆ ಆದರೆ, ಅವರ ಧ್ವನಿ ಕೇಳಿ ಆಗಿರುವ ಖುಷಿ ಮತ್ತೊಂದು ಕಡೆ. ಅಲ್ಲಿದ್ದವರು ಕೂಡ ನೋವು-ನಲಿವು ಸಂಗಮದ ಫೀಲ್ ಅನುಭವಿಸಿದ್ದಾರೆ ಎಂಬುದು ಕ್ಯಾಮೆರಾದಲ್ಲಿ ಸೆರೆಯಾದ ಪ್ರೇಕ್ಷಕರ ರಿಯಾಕ್ಷನ್ ನೋಡಿದರೇ ಅರ್ಥವಾಗುತ್ತಿತ್ತು.
ಒಟ್ಟಿನಲ್ಲಿ, ಸುಷ್ಮಾ ರಾವ್ ನಡೆಸಿಕೊಟ್ಟ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ನಮ್ಮನ್ನಗಲಿರುವ ನಟ ಶಂಕರ್ ನಾಗ್ ಅವರ ಧ್ವನಿ ಕೇಳಿಸಿರೋದು, ಕೇಳಿರೋದು ಎಲ್ಲವೂ ಹೊಸ ಅನುಭವ ಕೊಟ್ಟಿದೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.