ಮಂಡ್ಯ ರವಿ ಅಂತಲೇ ಫೇಮಸ್ ಆಗಿದ್ದ ಕಿರುತೆರೆ ನಟ ರವಿ ಪ್ರಸಾದ್ ಮಂಡ್ಯ ಅಗಲಿಕೆ ಬಗ್ಗೆ ಸಹ ನಟಿ ನಂದಿನಿ ಗೌಡ ಮನ ಮಿಡಿಯುವ ಮಾತುಗಳನ್ನು ಹೇಳಿದ್ದಾರೆ. ನನಗೆ ನೀನು ಯಾವತ್ತಿದ್ರೂ ಮಗಾ.. ಯಾಗೆ ಇಷ್ಟು ಆತುರವಾಗಿ ನಮ್ಮನ್ನೆಲ್ಲ ಬಿಟ್ಟು ಹೋದೆ ಅನ್ನುವ ಮಾತಲ್ಲಿ ಅವರು ತಮ್ಮ ನೋವು ಬಿಚ್ಚಿಟ್ಟಿದ್ದಾರೆ.
ನಿನ್ನೆ ಸಂಜೆ ಬಹು ಕಾಲದ ಅಸೌಖ್ಯದಿಂದ ಎಲ್ಲರನ್ನೂ ಅಗಲಿದ ಕಿರುತೆರೆ, ಹಿರೆ ತೆರೆ ಕಲಾವಿದ ಮಂಡ್ಯ ರವಿ. ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಅವರಿಗೆ ಗೆಳೆಯರ ಬಳಗವೂ ದೊಡ್ಡದು. ಜೊತೆಗೇ ಸೀರಿಯಲ್ಗಳಲ್ಲಿ ನಟಿಸಿದ ಸಹ ನಟರೂ ಅವರಿಗೆ ಆತ್ಮೀಯರೇ. ಅವರಲ್ಲಿ ನಂದಿನಿ ಗೌಡ ಅನೇಕ ಸೀರಿಯಲ್ಗಳಲ್ಲಿ ಮಂಡ್ಯ ರವಿ ಅವರ ಜೊತೆಗೆ ನಟಿಸಿದವರು. ನಟನೆಯ ಆಚೆಗೂ ಅವರಿಬ್ಬರ ನಡುವೆ ಸ್ನೇಹವಿತ್ತು. ಮಂಡ್ಯ ರವಿ ಅವರಂತೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ, ಟಿ ಎನ್ ಸೀತಾರಾಮ್ ಸೀರಿಯಲ್ಗಳಿಂದ ಪ್ರಸಿದ್ಧರಾದ ನಂದಿನಿ ಗೌಡ ಸೋಶಿಯಲ್ ಮೀಡಿಯಾ ರವಿ ಅವರ ಬಗ್ಗೆ ಮನ ಮಿಡಿಯುವಂಥಾ ಪೋಸ್ಟ್ ಹಾಕಿದ್ದಾರೆ. ಮಂಡ್ಯ ಭಾಷೆಯಲ್ಲೇ ಮಾತಾಡುತ್ತಿದ್ದ, ಕಾಲೇಜ್ ಫ್ರೆಂಡ್ಸ್ ಥರ ಮಗಾ ಅಂತಲೇ ಕರೆಯುತ್ತಿದ್ದ ರವಿ ಬಗ್ಗೆ ನಂದಿನಿ ಬರೆದಿರುವ ಸಾಲುಗಳು ಇಲ್ಲಿವೆ.
'ರವಿ ಪ್ರಸಾದ್ ಮಂಡ್ಯ, ಕೆಲವರ ಪಾಲಿಗೆ 'ರವಿ', ಇನ್ನು ಕೆಲವರ ಪಾಲಿಗೆ 'ಮಂಡ್ಯ'. ಆದ್ರೆ ನನಗೆ ನೀನು ಯಾವತ್ತಿದ್ರು 'ಮಗಾ...' ಅಷ್ಟೆ. ನಿನ್ನ ಜೊತೆ ಮಾತ್ರ ನಾನು ಪಕ್ಕ ಮಂಡ್ಯ ಸೊಗಡಲ್ಲಿ ಮಾತಾಡ್ತಿದ್ದೆ, ಹಾಗೆ ಮಾತಾಡಿದ್ರೆ ಇಬ್ಬರಿಗೂ ಸಮಾಧಾನ. ಬಹುಶಃ ನನ್ನ ಲೈಫ್ ಅಲ್ಲಿ ಯಾರನ್ನಾದ್ರೂ ಹೋಗೋ, ಬಾರೋ ಅಂತ ಮಾತಾಡಿಸಿದ್ರೆ ಅದು ನಿನ್ನ ಮಾತ್ರ. ನಾನು ನಿನ್ನ ಸೀನಿಯರ್ ಅಂತ ಯಾವಾಗಲೂ ಜೋರು ಮಾಡ್ತಿದ್ದೆ. ನಾವಿಬ್ಬರೂ mutual admiration society members. ನನ್ನ ಪ್ರೀತಿಯ ಸಹಕಲಾವಿದ ನೀನು. ನಾನು ನೀನು ಮತ್ತೆ ಒಟ್ಟಿಗೆ ನಟಿಸಬೇಕು ಅನ್ನೋದು ಹಾಗೆ ಉಳಿದುಹೋಯಿತು ನೋಡು..' ಎಂದು ಭಾವಪೂರ್ಣವಾಗಿ ಸ್ನೇಹಿತನಿಗೆ ವಿದಾಯದ ಮಾತು ಹೇಳಿದ್ದಾರೆ.
ಕಿರುತೆರೆ ನಟ ಮಂಡ್ಯ ರವಿ ನಿಧನ: ಬಿಜಿಎಸ್ ಆಸ್ಪತ್ರೆ ಅಧಿಕೃತ ಘೋಷಣೆ
'ನಿನ್ನ ಹುಟ್ಟಿದ ಹಬ್ಬಕ್ಕೆ ಎಷ್ಟು ಜನ ಪೋಸ್ಟ್ ಹಾಕಿದ್ರು ನೆನಪಿಲ್ಲ, ಆದ್ರೆ ಇವತ್ತು FB ತುಂಬಾ ನೀನೆ... ಹಿಂಸೆ ಕಣೋ ನಿನ್ನ ಈ ರೀತಿ ನೋಡೋದಿಕ್ಕೆ... ನಿನ್ನ ಎಷ್ಟು ಜನ ಇಷ್ಟಪಡ್ತಾರೆ, ಮೆಚ್ಚಿಕೊಂಡಿದ್ದಾರೆ ಅಂತ ನೋಡಕ್ಕಾದ್ರು ನೀನು ಇರಬೇಕಿತ್ತು.... ನಿನ್ನ ಬಗ್ಗೆ ಬರೆಯೋದಕ್ಕೆ ಶುರು ಮಾಡಿದಾಗ ಕಾಡಿದ್ದು ನಿನ್ನ ಬಗ್ಗೆ ಏನು ಬರೀಲಿ ಅನ್ನೋದು ಅಲ್ಲ, ಏನೆಲ್ಲಾ ಬರೀಲಿ ಅನ್ನೋದು... ನಿನ್ನ ಜೊತೆ ಕಳೆದ ದಿನಗಳು, ಪದಬಂಧಕ್ಕೆ ನಾವು ಜಗಳ ಆಡಿದ್ದು, ಇಬ್ಬರೂ ಜೀವನದ ಕೆಳ ಹಂತದಲ್ಲಿ ಇದ್ದಾಗ ಒಬ್ಬರಿಗೊಬ್ಬರು ಕಾಳಜಿ ತೋರಿಸಿದ್ದು, ದೃಶ್ಯದ ಮಧ್ಯದಲ್ಲಿ ಮಾಡಿದ ತರಲೆಗಳು, ನಗು, ಮಾತು, ಕಿತ್ತಾಟ... ಎಲ್ಲಾ show reel ತರ ಕಣ್ಮುಂದೆ ಬರ್ತಿದೆ ಮಗಾ..
"ಮಿಂಚು" ಸೀರಿಯಲ್ (Serial) ಮಾಡುವಾಗ ನಿನ್ನ ಮದುವೆ ನಿಶ್ಚಯ ಆಗಿದ್ದು, ಹುಡುಗಿ ನೋಡಿಕೊಂಡು ಬಂದ ಮೇಲೆ ನೀನು ನನ್ನ ಹತ್ರ ಹೇಳಿದ್ದೆ, 'ನಂದು ಏನು ಗೊತ್ತಾ? ಮಾಲತಿ ನೋಡಿದ ತಕ್ಷಣ ನನ್ನ ಮನಸ್ಸಿಗೆ ಒಂದು ಹಾಡು ಬಂತು -ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ.. ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ...'
Ismart Jodi ರಿಯಾಲಿಟಿ ಶೋ ಕಿರೀಟ ಗೆದ್ದ ಪುನೀತಾ- ಶ್ರೀರಾಮ್; ಕೈ ಸೇರಿತ್ತು 7 ಲಕ್ಷ!
ಅವತ್ತು ನೀನು ಇದು ಹೇಳಿದಾಗ ನನಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಇವತ್ತು ಮಾಲತಿ 'ನಾನು ಯಾರಿಗಾಗಿ ಬದುಕಿರಲಿ' ಅಂತ ಪ್ರಶ್ನೆ ಮಾಡಿದಾಗ ಮತ್ತೆ ಈ ಹಾಡು ನೆನಪಾಯ್ತು. ಸಿಟ್ಟು (Anger), ಅಸಹಾಯಕತೆ, ದುಃಖ (Sad) ಉಮ್ಮಳಿಸಿ ಬಂತು. ಅಷ್ಟು ಆತುರ ಏನಿತ್ತು ನಿನಗೆ? ಇನ್ನಷ್ಟು ವರ್ಷ ಇವಳ ಜೊತೆ ಇರಬಹುದಿತ್ತು ಅಲ್ವಾ, ಕನಸಿನ ಜೋಕಾಲಿ ಜೊತೆಯಾಗಿ ಜೀಕ್ತಾ? ಯಾಕೋ ಹೀಗೆ ಮಾಡಿದೆ?' ಎಂದು ನಂದಿನಿ ನೋವಲ್ಲಿ ಬರೆದುಕೊಂಡಿದ್ದಾರೆ.