
ಹೆಸರು ಮಾಡುವುದು ಕಷ್ಟವಾದರೆ, ಆ ಹೆಸರನ್ನು ಉಳಿಸಿಕೊಂಡು ಹೋಗೋದು ಇನ್ನೊಂದು ಸವಾಲಿನ ಕೆಲಸ. ಬಿಗ್ ಬಾಸ್, ನಿರೂಪಣೆ, ನಟನೆ ಎಂದು ಜನಪ್ರಿಯತೆ ಪಡೆದಿರುವ ರೂಪೇಶ್ ಶೆಟ್ಟಿ ಅವರೀಗ ನಿಜ ಜೀವನದಲ್ಲಿಯೂ ಹೀರೋ ಆಗಿದ್ದಾರೆ. ತುಂಬ ಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಅವರೀಗ ನೆರವಾಗಿದ್ದಾರೆ. ಈ ಹಿಂದಿನ ಜನ್ಮದಿನದಂದು ಅವರು ಒಂದು ಬಡಕುಟುಂಬಕ್ಕೆ ಮನೆ ಕಟ್ಟಿ ಕೊಡೋದಾಗಿ ಹೇಳಿದ್ದರು. ಅದರಂತೆ ಈಗ ಅವರು ಮನೆ ಕಟ್ಟಿಕೊಟ್ಟಿದ್ದು, ಗೃಹ ಪ್ರವೇಶ ಕೂಡ ಆಗಿದೆ.
ರೂಪೇಶ್ ಶೆಟ್ಟಿ ಏನು ಹೇಳಿದ್ದಾರೆ?
“ತುಂಬ ಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ಕಟ್ಟಿಕೊಡ್ತಿದೀನಿ ಅಂತ ನಾನು ಒಂದು ಮಾತು ಕೊಟ್ಟಿದ್ದೆ. ಈಗ ಆ ಮನೆಯ ಕೆಲಸ ಮುಗಿದಿದ್ದು, ಗೃಹ ಪ್ರವೇಶ ನಡೆಯುತ್ತಿದೆ” ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಇನ್ನು ನೆಮ್ಮದಿ ಎನ್ನುವ ಚಾರಿಟೇಬಲ್ ಟ್ರಸ್ಟ್ ಕೂಡ ಶುರು ಮಾಡಿದ್ದಾರೆ. ಈ ಬಗ್ಗೆ ಅವರು ಹೊಸ ಮನೆಯ ವಿಡಿಯೋ ಮಾಡಿದ್ದಾರೆ. ಆ ಮನೆಯವರು ರೂಪೇಶ್ ಶೆಟ್ಟಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ನೆಮ್ಮದಿ ಎನ್ನುವ ಟ್ರಸ್ಟ್ ಸ್ಥಾಪನೆ!
“ಒಂದು ಬಡ ಕುಟುಂಬಕ್ಕೆ ನಮ್ಮ ತಂಡದಿಂದ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದೆ, ಈಗ ಆ ಕೆಲಸ ಪೂರ್ಣ ಗೊಂಡಿದೆ, ಗೃಹ ಪ್ರವೇಶವೂ ನೆರವೇರಿದೆ. ಇನ್ನಷ್ಟು ಇಂತಹ ಕೆಲಸಗಳನ್ನು ಮಾಡುವ ಉದ್ದೇಶದಿಂದ “nemmadi” ಎಂಬ ಚಾರಿಟೇಬಲ್ ಟ್ರಸ್ಟ್ ಕೂಡಾ ಶುರು ಮಾಡುತ್ತಿದ್ದೇವೆ, ನಮ್ಮ ಈ ಕೆಲಸದಲ್ಲಿ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ಇರಲಿ” ಎಂದು ರೂಪೇಶ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿಯನ್ನು ಕೊಂಡಾಡಿದ ಜನರು!
“ಮತ್ತೆ ಮತ್ತೆ ಅಭಿಮಾನ ಇಮ್ಮಡಿಗೊಳ್ಳುವುದು… ಪ್ರತಿ ಬಾರಿ ಮಾರ್ದನಿಸುವೆ “ಇರುವುದೊಂದು ಹೃದಯವ ಅದೆಷ್ಟು ಬಾರಿ ಗೆಲ್ಲುವಿರಿ?. ಸಿನಿಮಾದಲ್ಲಿ ಕಲಾವಿದನಾಗಿ, ನಿಜಜೀವನದಿ ಹೀರೋ ಆಗೋದು ಹೀಗೆ, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಶೆಟ್ರೇ.......ಈರೆನ ಈ ಮಹಾನ್ ಕೆಲಸಗ್ ತುಳುನಾಡ್ ದ ಪ್ರತಿಯೊಂಜಿ ಜನ ...ಉಡಲ್ ದಿಂಜಿ ಸೊಲ್ಮೆನ್ ಸಲ್ಲಾವೊಂದುಲ್ಲೆರ್...ಈರೆನ ನನದ ಪೂರಾ ಪಿಕ್ಚರ್ ಸೂಪರ್ ಹಿಟ್...ಆದ್ ಥಿಯೇಟರ್ ಫುಲ್ ಆವಡ್. ನುಪ್ಪು,ಇಲ್ಲ್,ತುತ್ತೆರ ,ಕುಂಟು ನೆನ್ ಎರ್ ಕೋರ್ಪೆರ ಅಕುಲೆನ ಕೈ ದೈವ ದೇವೆರ್ ಏಪಲಾ ಬುಡ್ಪುಜೆರ್. ಅಣ್ಣಾ, ದೇವೆರ್ ಎಡ್ಡೆ ಮಲ್ಪಡ್ ಮಹಾಲಿಂಗೇಶ್ವರ” ಎಂದು ತುಳುವಿನಲ್ಲಿಯೂ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಪ್ರೇಮ ನಿಲಯ ಎಂದು ಹೆಸರು
ಅಂದಹಾಗೆ ಮಂಗಳೂರು ಭಾಗದಲ್ಲಿ ಈ ಮನೆ ನಿರ್ಮಾಣ ಆಗಿದೆ, ಪ್ರೇಮ ನಿಲಯ ಎಂದು ಈ ಮನೆಗೆ ಹೆಸರು ಇಡಲಾಗಿದೆ. ಈ ಮನೆಯ ಝಲಕ್ನ್ನು ಕೂಡ ರೂಪೇಶ್ ಶೆಟ್ಟಿ ಅವರು ವಿಡಿಯೋ ಮೂಲಕ ನೀಡಿದ್ದಾರೆ. ಅಡುಗೆ ಮನೆ, ಹಾಲ್, ರೂಮ್ ಎಂದು ಈ ಮನೆ ಸಾಕಷ್ಟು ಭವ್ಯವಾಗಿದೆ. ಮನೆಯ ಸಂಪೂರ್ಣ ಕೆಲಸ ಮುಗಿದಿದ್ದು, ಪೇಂಟಿಂಗ್ ಕೂಡ ಆಗಿದೆ.
ರೂಪೇಶ್ ಶೆಟ್ಟಿ ಅವರು ಕೊನೆಯ ಬಾರಿ ʼಅಧಿಪತ್ರʼ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಿರೂಪಕಿ ಜಾನ್ವಿ ಅವರು ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ʼಜೈʼ ಎನ್ನುವ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಈಗಾಗಲೇ ತುಳು ಸಿನಿಮಾಗಳನ್ನು ಮಾಡಿ ಗೆದ್ದಿರುವ ರೂಪೇಶ್ ಶೆಟ್ಟಿ ಈ ಬಾರಿ ಬಾಲಿವುಡ್ ನಟರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಯಾವಾಗ ತೆರೆ ಕಾಣಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.