
ಬಿಗ್ಬಾಸ್ ಕನ್ನಡ ಶುರುವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಬಿಗ್ಬಾಸ್ ಅನ್ನು ಬೈಯುತ್ತಲೇ ಅದನ್ನು ನೋಡುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಇದರ ಟಿಆರ್ಪಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಟಿಆರ್ಪಿಯಲ್ಲಿ ನಂಬರ್1 ಸ್ಥಾನವನ್ನು ಬಿಗ್ಬಾಸ್ ಕನ್ನಡ ಪಡೆಯುತ್ತಿರುವ ಕಾರಣ, ಇದರ ಕ್ರೇಜ್ ಇತರ ಯೂಟ್ಯೂಬ್ ಚಾನೆಲ್ನವರಿಗೆ, ರೀಲ್ಸ್ ಮಾಡುವವರಿಗೆ ಪ್ರೇರಣೆ ಆಗುತ್ತಿದೆ. ಅಷ್ಟಕ್ಕೂ ಬಿಗ್ಬಾಸ್ನಲ್ಲಿ ನಡೆಯುವುದೆಲ್ಲವೂ ನಾಟಕಗಳೇ ಎನ್ನುವ ಅರಿವಾಗಿರುವ ಕಾರಣ, ಬಿಗ್ಬಾಸ್ನಲ್ಲಿ ಅದನ್ನು ನಿಜ ಎಂದು ತೋರಿಸಿದರೆ, ಇದನ್ನು ಅನುಕರಣೆ ಮಾಡುವವರೆಲ್ಲರೂ ಹಾಸ್ಯದ ರೂಪದಲ್ಲಿ ರೀಲ್ಸ್ ಮಾಡಿ ಜನರನ್ನು ನಕ್ಕು ನಗಿಸುತ್ತಿದ್ದಾರೆ.
ಇದಾದಲೇ ನಾನು ನಂದಿನಿ ಖ್ಯಾತಿಯ ವಿಕ್ರಮ್ ಅಲಿಯಾಸ್ ವಿಕ್ಕಿ ಅವರು ಹೊಸದಾಗಿ ಕೂಲ್ ಕಲರ್ಸ್ ಎನ್ನುವ ಚಾನೆಲ್ ಹೆಸರು ಇಟ್ಟುಕೊಂಡು ಬೀಗ್ ಬಾಸ್ ಹೆಸರಿನಲ್ಲಿ ಬಿಗ್ಬಾಸ್ನಲ್ಲಿ ನಡೆಯುವಂತೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು, ಹುಲಿ ಉಗುರು ಪ್ರಕರಣದ ಕುರಿತು ಮಾಡಿದ ರೀಲ್ಸ್ ನೋಡಿ ಅವರ ಫ್ಯಾನ್ಸ್ ನಕ್ಕೂ ನಕ್ಕೂ ಸುಸ್ತಾಗಿದ್ದರು. ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಬಿಗ್ಬಾಸ್ ಮನೆಯಿಂದ ನೇರವಾಗಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗಿದ್ದು, ಅದಾದ ಬಳಿಕ ಹುಲಿ ಉಗುರು ಹಾಕಿಕೊಂಡಿದ್ದ ಕೆಲವು ಗಣ್ಯರ ಮೇಲೆ ಕತ್ತಿ ತೂಗಾಡಿದ್ದು, ನಟ ಜಗ್ಗೇಶ್ ಅವರನ್ನು ಹೊರತು ಪಡಿಸಿ ಉಳಿದವರು ತಾವು ಧರಿಸಿರೋ ಹುಲಿ ಉಗುರು ಪ್ಲಾಸ್ಟಿಕ್, ಸಿಂಥಟಿಕ್, ನಕಲಿ ಎಂದೆಲ್ಲಾ ಸಬೂಬು ಹೇಳಿ ಜಾರಿಕೊಂಡಿದ್ದು, ಕೆಲವು ಗಣ್ಯರ ಮಕ್ಕಳ ಪ್ರಕರಣ ಹೊರಕ್ಕೆ ಬರುತ್ತಿದ್ದಂತೆಯೇ ಹುಲಿ ಉಗುರು ಪ್ರಕರಣ ಅಲ್ಲಿಗೇ ತಣ್ಣಗಾಗಿದೆ. ಇದನ್ನೇ ಇಟ್ಟುಕೊಂಡು ಒಂದು ರೀಲ್ಸ್ ಮಾಡಿದ್ದರು.
ಏನ್ ನಾಟ್ಕ ಗುರೂ... ಸುದೀಪ್ಗಿಂತ್ಲೂ ಬೆಸ್ಟ್ ಆ್ಯಕ್ಟ್ ಮಾಡ್ತಿರಾ ಬಿಡಿ... ವರ್ತೂರ್ ಸಂತೋಷ್ ಸಕತ್ ಟ್ರೋಲ್!
ಇದೀಗ, Life Guru ಎನ್ನುವ ಫೇಸ್ಬುಕ್ ಪೇಜ್ನಲ್ಲಿ ಬಿಗ್ಬಾಸ್ನ ಅಳುವ ಕಾರ್ಯಕ್ರಮವನ್ನು ರಿಕ್ರಿಯೇಟ್ ಮಾಡಲಾಗಿದೆ. ಬಿಗ್ಬಾಸ್ ಎಲ್ಲಾ ಭಾಷೆಗಳಲ್ಲಿಯೂ ನಡೆಯುವ ಘಟನೆಗಳೆಲ್ಲವೂ ಸ್ಕ್ರಿಪ್ಟೆಡ್ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್ಬಾಸ್ ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್ಬಾಸ್ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಬಿಗ್ಬಾಸ್ ನಡೆಸಿಕೊಡುವವರೂ ಸೇರಿದಂತೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ, ಮನೆಯೊಳಕ್ಕೆ ಇದ್ದವರು ಕೈಗೊಂಬೆಗಳಷ್ಟೇ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ.
ಇದನ್ನೇ ಇಟ್ಟುಕೊಂಡು ಈಗ ಬಿಗ್ಬಾಸ್ನಲ್ಲಿ ಅಳುವ ಸೀನ್ ರಿಕ್ರೇಟ್ ಮಾಡಿದ್ದಾರೆ ಒಂದಿಷ್ಟು ಯುವಕರು. ಅದರಲ್ಲಿ ಬಿಗ್ಬಾಸ್ ನಿಮ್ಮ ಮನೆಯವರ ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳಲು ಒಂದು ವೇದಿಕೆ ಎನ್ನುತ್ತಿದ್ದಂತೆಯೇ ಓರ್ವ ಸ್ಪರ್ಧಿ ಕ್ಯಾಮೆರಾ ಎದುರಿಗೆ ಬಂದು ಅಳಲು ಶುರು ಮಾಡುತ್ತಾರೆ. ಆಗ ಉಳಿದವರು ನಾವೂ ಅಳುವುದು ಕಾಣಬೇಕು, ಕ್ಯಾಮೆರಾದಿಂದ ಇತ್ತ ಕಡೆ ಬಾ ಎನ್ನುತ್ತಾರೆ. ಆಗ ಈ ಸ್ಪರ್ಧಿಯ ಅಳುವ ಕಾರ್ಯಕ್ರಮ ಜೋರಾಗುತ್ತದೆ. ಅಪ್ಪ- ಅಮ್ಮನನ್ನು ನೆನೆದು ಅಳುತ್ತಾರೆ. ಅವರು ಹೇಳಿದ ಡೈಲಾಗ್ ಕೇಳಿದ್ರೆ ನೀವೂ ನಕ್ಕು ಸುಸ್ತಾಗ್ತೀರಾ.
ನಮ್ಮ ತಾಯಿ ಚಿಕ್ಕವರಿದ್ದಾಗ ನಾನು ಇನ್ನೂ ಹುಟ್ಟಿರಲಿಲ್ಲ ಬಿಗ್ಬಾಸ್. ಐ ಅ್ಯಮ್ ವೆರಿ ಸಾರಿ ಎಂದು ಒಂದೇ ಸಮನೆ ಅಳುತ್ತಾರೆ. ಆ ಸಮಯದಲ್ಲಿ ನಾನು ತಂದೆಯ ಒಳಗೆ ಇದ್ದೆ. ಆವಾಗಲೇ ಹುಟ್ಟಿದ್ದೇ ಆಗಿದ್ರೆ, ಈಗ ಇರುವ ನನ್ನ ತಂದೆಯ ಜೊತೆ ಅಮ್ಮನ ಮದ್ವೆ ಮಾಡ್ತಿರಲಿಲ್ಲ. ನನಗೆ ತುಂಬಾ ದುಃಖವಾಗ್ತಿದೆ ಎಂದು ಅಳುತ್ತಾರೆ. ಕೊನೆಗೆ ನನಗೆ ಇಲ್ಲಿ ಬರಲು ಅವಕಾಶ ಮಾಡಿಕೊಟ್ಟಿದ್ದು ನನ್ನ ಪತ್ನಿ. ನಾನು ಇಲ್ಲಿಗೆ ಬಂದು ನಿಂತಿದ್ದೆನೆ ಎಂದರೆ ಅದಕ್ಕೆ ಕಾರಣ ನನ್ನ ಹೆಂಡತಿ, ನನ್ನ ಗರ್ಲ್ಫ್ರೆಂಡ್ ಬೇಡ ಅಂದ್ಲು ಎನ್ನುತ್ತಲೇ ಪತ್ನಿಯನ್ನು ನೆನೆದು ಈ ಮಿಸ್ ಯೂ ವನಜಾಕ್ಷಿ ಎನ್ನುತ್ತಾರೆ. ಆಗ ಇನ್ನೋರ್ವ ಸ್ಪರ್ಧಿಯೂ ಕ್ಯಾಮೆರಾ ಮುಂದೆ ಬಂದು ಐ ಟೂ ಮಿಸ್ ಯೂ ವನಜಾಕ್ಷಿ ಎನ್ನುತ್ತಲೇ ವಿಡಿಯೋ ಮುಗಿಯುತ್ತದೆ. ಹೀಗಿದೆ ಬಿಗ್ಬಾಸ್!!
ಬಿಗ್ಬಾಸ್ ಮನೆಯ ಗೋಡೆ ಹಾರಿಕೊಂಡು ಹೋಗೋ ಪ್ಲ್ಯಾನ್! ವೈರಲ್ ಆಯ್ತು ವರ್ತೂರು ಸಂತೋಷ್ ಚರ್ಚೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.