ಸೋನಿ ಟಿವಿಯ ಇಂಡಿಯನ್‌ ಐಡಲ್‌ಗೆ ಬೀದರ್‌ನ ಗಾಯಕಿ ಶಿವಾನಿ ಆಯ್ಕೆ: ಕರ್ನಾಟಕದ ಏಕೈಕ ಕಲಾವಿದೆ..!

By Kannadaprabha NewsFirst Published Sep 25, 2023, 3:00 AM IST
Highlights

ಕುಮಾರಿ ಶಿವಾನಿ ಶಿವದಾಸ ಸ್ವಾಮಿಯವರ ಸಂಗೀತ ಸೇವೆ ಗುರುತಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಕಳೆದ ವರ್ಷ ಬೀದರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕಲಾ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ. ಅಲ್ಲದೆ ಬಿದರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಬಿದರಿ ಜನಪದ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿರುವದು ವಿಶೇಷ.

ಬೀದರ್‌(ಸೆ.25): ದೇಶದ ಖ್ಯಾತ ಸಂಗೀತ ಸ್ಪರ್ಧಾ ಕಣವಾಗಿರುವ ಸೋನಿ ಟಿವಿಯ ಇಂಡಿಯನ್‌ ಐಡಲ್‌ ಸಂಗೀತ ಸ್ಪರ್ಧೆಯಲ್ಲಿ ಕರ್ನಾಟಕದ ಏಕೈಕ ಸ್ಪರ್ಧಾಳು ಆಗಿ ನಗರದ ಶಿವಾನಿ ಶಿವದಾಸ ಸ್ವಾಮಿ ಆಯ್ಕೆಯಾಗಿ ಸಂಗೀತ ದಿಗ್ಗಜರ ಮನಗೆದ್ದಿದ್ದು ಸ್ಪರ್ಧಾ ಕಣದ ಮತ್ತಷ್ಟು ರೌಂಡ್‌ಗಳತ್ತ ದಾಪುಗಾಲು ಹಾಕಲು ಸಜ್ಜಾಗಿದ್ದಾಳೆ.

ಇಂಡಿಯನ್‌ ಐಡಲ್‌ನ 13 ಸಾವಿರ ಸ್ಪರ್ಧಿಗಳಿಗಾಗಿ ನಡೆದ 100ರ, 50ರ ಮತ್ತು 25ರ ಹಂತದ ಬಳಿಕ ಟಿವಿ ರೌಂಡ್ಸ್‌ನಲ್ಲಿ ಆಯ್ಕೆಯಾಗಿರುವ ಕರ್ನಾಟಕ ರಾಜ್ಯದ ಏಕೈಕ ಕಲಾವಿದೆಯಾಗುವ ಮೂಲಕ ಸಂಗೀತ ಲೋಕದಲ್ಲಿ ರಾಜ್ಯದೊಂದಿಗೆ ಬೀದರ್‌ನ ಮೆರಗು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾಳೆ ಶಿವಾನಿ ಸ್ವಾಮಿ.

ಬೈಕ್‌ನಲ್ಲಿ ಕವಿತಾ ಗೌಡ ಹಿಂದೆ ಕುಳಿತು ಚಂದನ್ ಹೋಗಿದ್ದೆಲ್ಲಿ?

ಸರೆಗಮಪದಲ್ಲಿ ಬೆಳ್ಳಿ ಪದಕ:

ಶಿವಾನಿ ಕುಟುಂಬ ಸಂಗೀತ ಸಾಧಕರ ಕುಟುಂಬವಾಗಿದ್ದು, ಇದಕ್ಕೂ ಮೊದಲು 2020ರಲ್ಲಿ ನಡೆದ ಝೀ ಟಿವಿಯ ಸರೆಗಮಪ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ, ಬೆಳ್ಳಿ ಪದಕ ಗೆದ್ದಿದ್ದಲ್ಲದೆ ಹೈದ್ರಾಬಾದ್‌ನಲ್ಲಿ ನಡೆದ ಪ್ರೈಡ್‌ ಆಫ್‌ ತೆಲಂಗಾಣ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ. 2022ರಲ್ಲಿ ನಡೆದ ರಾಜ್ಯ ಮಟ್ಟದ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮಹಾರಾಷ್ಟ್ರ ಚಾ ಆವಾಜ್‌ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದು ಬೀದರ್‌ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಕುಮಾರಿ ಶಿವಾನಿ ಶಿವದಾಸ ಸ್ವಾಮಿಯವರ ಸಂಗೀತ ಸೇವೆ ಗುರುತಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಕಳೆದ ವರ್ಷ ಬೀದರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕಲಾ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ. ಅಲ್ಲದೆ ಬಿದರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಬಿದರಿ ಜನಪದ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿರುವದು ವಿಶೇಷ.

ಸಂಗೀತ ಕಲಾವಿದರಾದ ಕವಿತಾ ಸ್ವಾಮಿ ಹಾಗೂ ಪಂ. ಶಿವದಾಸ ಸ್ವಾಮಿ ಅವರ ಮಗಳಾಗಿ 2006ರ ಡಿಸೆಂಬರ್‌ ತಿಂಗಳಲ್ಲಿ ಜನಿಸಿರುವ ಶಿವಾನಿ ಸ್ವಾಮಿ ಮೂರು ವರ್ಷದ ಚಿಕ್ಕ ವಯಸ್ಸಿನಿಂದಲೇ ತಂದೆಯನ್ನೆ ಗುರುವಾಗಿಸಿ ಕೊಂಡು ಸಂಗೀತ ಅಭ್ಯಾಸ ಮಾಡಿ ಇದೀಗ ಸಂಗೀತ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ.

ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ನಗರದ ಅವರ ನಿವಾಸದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಶಾಲು ಹೊದಿಸಿ, ಹೂಮಾಲೆ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾನಿ ಶಿವದಾಸ ಸ್ವಾಮಿ, ಕಳೆದ ಹಲವು ವರ್ಷಗಳಿಂದ ಸಂಗೀತ ಅಭ್ಯಾಸ ಮಾಡುತ್ತಿದ್ದು, ಪ್ರಪ್ರಥಮ ಬಾರಿಗೆ ಸೋನಿ ಟಿವಿಯ ಇಂಡಿಯನ್‌ ಐಡಲ್‌ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಹಂತದಲ್ಲಿಯೇ ಆಯ್ಕೆಯಾಗಿದ್ದಕ್ಕೆ ಅತೀ ಆನಂದವಾಗಿದೆ. ನನ್ನ ಪೋಷಕರು ಸೇರಿದಂತೆ ನಮ್ಮ ಪರಿವಾರ ಸಂಗೀತ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಶಿವಾನಿಗೆ ಸನ್ಮಾನಿಸಿ ಮಾತನಾಡಿ, ಬೀದರ್‌ ಜಿಲ್ಲೆಯಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಆದರೂ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವೇದಿಕೆಗಳು ಇಲ್ಲದ ಕಾರಣ ಜಿಲ್ಲೆಯ ಅದೆಷ್ಟೋ ಕಲಾವಿದರು ಎಲೆಮರೆ ಕಾಯಿಯಂತೆ ಇದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಂಗೀತ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಹೊರ ರಾಜ್ಯದ ಕಲಾವಿದರಿಗಿಂತ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿದರೆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಬರ್ತ್​ಡೇ ಸಂಭ್ರಮದಲ್ಲಿ ಅಮುಲ್​ ಬೇಬಿ: ಸತ್ಯ ಸೀರಿಯಲ್​ ಭರ್ಜರಿ ಪಾರ್ಟಿ ಹೀಗಿದೆ ನೋಡಿ...

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುನೀಲ ಕಡ್ಡೆ ಮಾತನಾಡಿ, ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ್ದಕ್ಕೆ ಶಿವಾನಿ ಸ್ವಾಮಿ ಅವರ ಕುಟುಂಬಕ್ಕೆ ಹೃದಯಪೂರ್ವಕ ಅಭಿನಂದಿಸುವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಕವಿತಾ ಸ್ವಾಮಿ, ಶಿವದಾಸ ಸ್ವಾಮಿ ಪರಿವಾರದವರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.

click me!