ಭಾಗ್ಯ ಕೆಲಸಕ್ಕೆ ಸೇರಿದ್ದಾಳೆ. ಪತಿಯ ನಿಂದನೆಯೇ ಆಕೆಗೆ ಸ್ಫೂರ್ತಿ. ಈ ಸಂದರ್ಭದಲ್ಲಿ ಪುರಂದರದಾಸರ ಕಾವ್ಯ ನೆನಪು ಮಾಡಿಕೊಂಡಿದ್ದಾರೆ ನೆಟ್ಟಿಗರು.
ಜೀವನದಲ್ಲಿ ಸುತ್ತಲೂ ಹೊಗಳುಭಟ್ಟರೇ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕೆಟ್ಟ ಕೆಲಸ ಮಾಡಿದರೂ ಅದು ಸರಿ ಸರಿ ಎನ್ನುತ್ತಾ ಹೊಗಳುತ್ತಿದ್ದರೆ, ಆಗುವುದೆಲ್ಲವೂ ಕೆಡುಕೇ. ಆದರೆ ಅದೇ ಮಾಡಿದ ಕೆಲಸಕ್ಕೆ ಹೊಟ್ಟೆಕಿಚ್ಚು ಪಟ್ಟುಕೊಂಡೋ ಇಲ್ಲವೇ ಮಾಡಿರುವುದು ಸರಿಯಲ್ಲ ಎಂದಾಗ ಅದನ್ನು ತೋರಿಸುವುದಕ್ಕಾಗಿಯಾದರೂ ಜೀವನದಲ್ಲಿ ನಿಂದಕರು ಇರಬೇಕು. ಅದಕ್ಕೇ ಪುರಂದರ ದಾಸರು ನಿಂದಕರಿರಬೇಕು... ಇರಬೇಕು ನಿಂದಕರಿರಬೇಕು... ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಂಗೆ...ನಿಂದಕರಿರಬೇಕು ಎಂದು ಹೇಳಿದ್ದಾರೆ. ಯಾರಾದರೂ ಕೆಟ್ಟದ್ದು ಹೇಳಿದ ಸಮಯದಲ್ಲಿ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಎನ್ನುವುದು ಪುರಂದರದಾಸರ ಈ ಮಾತಿನ ಅರ್ಥ. ಅದನ್ನೇ ಈಗ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿಯೂ ಹೇಳಲಾಗಿದೆ.
ಭಾಗ್ಯಲಕ್ಷ್ಮಿ ಅಮ್ಮ-ಮಗಳ ಸಕತ್ ರೀಲ್ಸ್: ಇವರಿಬ್ಬರ ನಿಜ ಜೀವನದ ಕುತೂಹಲ ವಿಷ್ಯ ಇಲ್ಲಿದೆ...
ಏಕೆಂದರೆ ಅಳುಮುಂಜಿ ಆಗಿದ್ದ ಭಾಗ್ಯ ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಂತಿದ್ದಾಳೆ. ಮೊದಲ ದಿನದ ಚಾರ್ಜ್ ವಹಿಸಿಕೊಳ್ಳಲು ಸ್ಟಾರ್ ಹೋಟೆಲ್ಗೆ ಹೋಗಿದ್ದಾಳೆ. ಅಷ್ಟಕ್ಕೂ ಭಾಗ್ಯಳ ಗೋಳು ಮುಗಿದಿದೆ. ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಅವಳ ಕೈಗೆ ಸಿಕ್ಕಿದೆ. ಸಾಮಾನ್ಯವಾಗಿ ಸ್ಟಾರ್ ಹೋಟೆಲ್ಗಳ ಶೆಫ್ಗಳಿಗೆ ನೀಡುವಂತೆ ಲಕ್ಷ ಸಂಬಳ ಪಡೆಯುತ್ತಾಳೆ ಇನ್ನುಮುಂದೆ ಭಾಗ್ಯ. ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್ ಬಂದಿದ್ದು, ಅದನ್ನು ಬ್ಯಾಂಕ್ಗೆ ಹೋಗಿ ಹಣ ತಂದಿದ್ದಾಳೆ. ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ. ಅದೇ ಇನ್ನೊಂದೆಡೆ ಶ್ರೇಷ್ಠಾಳು ಪಡೆದುಕೊಂಡಿದ್ದ ಎರಡು ಲಕ್ಷ ರೂಪಾಯಿ ಕೂಡ ಭಾಗ್ಯಳ ಕೈಸೇರಿದೆ. ತಾಂಡವ್ ಜೊತೆ ಪ್ರೀ ವೆಡ್ಡಿಂಗ್ ಶೂಟ್ನಲ್ಲಿ ಶ್ರೇಷ್ಠಾ ಬಿಜಿಯಾಗಿದ್ದಳು. ಅಷ್ಟೊತ್ತಿಗಾಗಲೇ ಪೂಜಾಳಿಂದ ದುಡ್ಡಿನ ವಿಷಯ ಅರಿತ ಭಾಗ್ಯ ಶೂಟಿಂಗ್ ಮಾಡ್ತಿರೋ ಜಾಗಕ್ಕೆ ಬಂದು ಶ್ರೇಷ್ಠಾಳ ಕೆನ್ನೆಗೆ ರಪರಪ ಬಾರಿಸಿದ್ದಾಳೆ.
ನನಗೆ ನೀವೇ ಸ್ಫೂರ್ತಿ. ನನ್ನ ಕೈಯಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ರಲ್ಲ. ಅದನ್ನು ನಾನು ಮಾಡಿ ತೋರಿಸಿದೆ ಎಂದು ಭಾಗ್ಯ ತನ್ನಷ್ಟಕ್ಕೆ ತಾನು ಅಂದುಕೊಳ್ಳುತ್ತಿದ್ದಾಳೆ. ಈ ಮೂಲಕ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದನ್ನು ಭಾಗ್ಯ ತೋರಿಸಿದ್ದಾಳೆ. ಆದ್ದರಿಂದಲೇ ದಾಸರ ಪದವನ್ನು ನೆಟ್ಟಿಗರು ನೆನಪು ಮಾಡಿಕೊಂಡಿದ್ದಾರೆ. ನಿಂದಕರಿರಬೇಕು... ಇದ್ದರೆ ಮಾತ್ರ ಜೀವನದಲ್ಲಿ ಏಳಿಗೆ ಸಾಧ್ಯ ಎಂದು. ಅದೇ ಇನ್ನೊಂದೆಡೆ, ಪತ್ನಿಯ ಬಳಿ ಇಎಂಐ ಕಟ್ಟಲು ಹಣವಿಲ್ಲ ಎಂದು ಹಂಗಿಸುತ್ತಲೇ ಆಕೆಗೆ ಅವಮಾನ ಮಾಡಲು ನೋಡುತ್ತಿದ್ದ ತಾಂಡವ್ ಮನೆಯ ಇಐಎಂ ದುಡ್ಡು ಕೇಳಿದ್ದಾನೆ. ಒಂದು ಲಕ್ಷ ಸಂಬಳ ಕೈಯಲ್ಲಿ ಇಟ್ಟುಕೊಂಡಿರೋ ಭಾಗ್ಯ ದುಡ್ಡನ್ನು ತಾಂಡವ್ ಕೈಯಲ್ಲಿ ಇತ್ತು ಎರಡು ತಿಂಗಳ ಇಐಎಂ ಎಂದು ಹೇಳಿದ್ದಾನೆ. ಇದನ್ನು ಕೇಳಿ ತಾಂಡವ್ ಪೇಚಿಗೆ ಸಿಲುಕಿದ್ದಾನೆ. ಇಂಗು ತಿಂದ ಮಂಗನಂತಾಗಿದೆ ಅವನ ಸ್ಥಿತಿ. ಮಾರನೆಯ ದಿನ ಭಾಗ್ಯ ಕೆಲಸಕ್ಕೆ ಹೋಗಲು ರೆಡಿಯಾದಾಗ ಅವಳಿಗೆ ನೂರೆಂಟು ಪ್ರಶ್ನೆ ಕೇಳಿದ್ದಾನೆ. ನಾನು ಎಲ್ಲಿ ಬೇಕಾದರೂ ಹೋಗುತ್ತೇನೆ. ಕೇಳಲು ನೀವ್ಯಾರು ಎಂದು ದಿಢೀರನೆ ಕಡ್ಡಿ ಮುರಿದವರಂತೆ ಉತ್ತರ ಕೊಟ್ಟಿದ್ದಾಳೆ ಭಾಗ್ಯ. ಇದನ್ನು ಕೇಳಿ ಸೀರಿಯಲ್ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಭೇಷ್ ಭೇಷ್ ಎನ್ನುತ್ತಿದ್ದಾರೆ.
ಆದರೆ ಅದೇ ಇನ್ನೊಂದೆಡೆ, ಕುಸುಮಾ ಕೆಲಸ ಕಳೆದುಕೊಂಡುಬಿಟ್ಟಿದ್ದಾಳೆ. ಇದಕ್ಕೆ ಕಾರಣ, ಸ್ಟಾರ್ ಹೋಟೆಲ್ನಲ್ಲಿ ಭಾಗ್ಯ ಕೆಲಸಕ್ಕೆ ಸೇರಿದ್ದು. ಹೌದು. ಒತ್ತು ಶ್ಯಾವಿಗೆ ಸ್ಪೆಷೆಲಿಸ್ಟ್ ಆಗಿದ್ದ ಕಾರಣಕ್ಕೇ ಕುಸುಮಾಗೆ ಹೋಟೆಲ್ಗೆ ಸೇರಿಸಿಕೊಳ್ಳಲಾಗಿತ್ತು. ಭಾಗ್ಯ ಇರುವ ಸ್ಟಾರ್ ಹೋಟೆಲ್ನವರು ಒತ್ತು ಶ್ಯಾವಿಗೆಗಾಗಿ ಕುಸುಮಾ ಕೆಲಸ ಮಾಡುತ್ತಿದ್ದ ಹೋಟೆಲ್ ಅನ್ನು ಅವಲಂಬಿಸಿದ್ದರು. ಆದರೆ ಇದೀಗ ಭಾಗ್ಯ ಬಂದ ಮೇಲೆ ಅವರಿಗೆ ಈ ಹೋಟೆಲ್ ಶ್ಯಾವಿಗೆ ಬೇಡ. ಆದ್ದರಿಂದ ಕುಸುಮಾ ಕೆಲಸ ಕಳೆದುಕೊಂಡಿದ್ದಾಳೆ. ಇದೇ ಅತ್ತೆ- ಸೊಸೆಯ ನಡುವೆ ಏನು ಸಮಸ್ಯೆ ಉಂಟುಮಾಡುತ್ತದೆಯೋ ಕಾದು ನೋಡಬೇಕಿದೆ. ಅಷ್ಟಕ್ಕೂ ಕುಸುಮಾಳಿಗೆ ತಾಂಡವ್ನಿಂದ ಇದಾಗಲೇ ಭಾಗ್ಯ ದೇವಸ್ಥಾನಕ್ಕೆ ಹೋಗುತ್ತಿಲ್ಲ ಎನ್ನುವ ವಿಷಯ ತಿಳಿದಿದೆ. ಒಟ್ಟಿನಲ್ಲಿ ಭಾಗ್ಯಳ ಬದುಕಿನಲ್ಲಿ ಹೊಸ ಯುವ ಆರಂಭವಾಗಿದೆ.
ನಿದ್ದೆ ಮಾಡ್ತಿದ್ದ ಡೈರೆಕ್ಟರು ಕೊನೆಗೂ ಎದ್ದುಬಿಟ್ರಾ? ಪ್ಲೀಸ್ ಹೀಗೇ ಇರಿ ಅಂತಿರೋದ್ಯಾಕೆ ಸೀರಿಯಲ್ ಪ್ರೇಮಿಗಳು?