
ಇಬ್ಬರು ಮಧ್ಯವಯಸ್ಕರ ಕಿತ್ತಾಡದ ಮೂಲಕವೇ ಮದುವೆಯಾಗಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿ ತಲುಪಿರುವ ಜೀ ಕನ್ನಡದ ಅಮೃತಧಾರೆ ಸೀರಿಯಲ್ ಇದೀಗ 400 ಕಂತುಗಳನ್ನು ಪೂರೈಸಿದೆ. ಇದರ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ. ಸದ್ಯ ಸೀರಿಯಲ್ ಕುತೂಹಲದ ಘಟ್ಟವನ್ನು ತಲುಪಿದೆ. ಸದಾ ವಿಲನ್ ಅತ್ತೆಯಂದಿರ ಕೈ ಮೇಲಾಗುವ ಸೀರಿಯಲ್ಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ ಸೊಸೆ ಭೂಮಿಕಾಳೇ ಅತ್ತೆಗೆ ಟಾಂಗ್ ಕೊಡುತ್ತಾ ಅವಳನ್ನು ಸೋಲಿಸುತ್ತಿರುವ ಕಾರಣ ಈ ಸೀರಿಯಲ್ ಹಲವರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಇದೀಗ ಕೆಲವು ಕಂತುಗಳಿಂದ ತನ್ನ ಅತ್ತೆ ವಿಲನ್ ಎಂದು ತಿಳಿದಿದ್ದರೂ ಅವಳ ಮೋಸದ ಜಾಲದಲ್ಲಿ ಭೂಮಿಕಾ ಸಿಲುಕಿ ಬಿಟ್ಟಿದ್ದಾಳೆ. ಈ ಕುತಂತ್ರಕ್ಕೆ ತನ್ನ ಸ್ವಂತ ತಂಗಿಯನ್ನೇ ಅತ್ತೆ ಬಳಸಿಕೊಳ್ಳುತ್ತಿದ್ದಾಳೆ ಎನ್ನುವುದು ಕೂಡ ಜಾಣೆ ಭೂಮಿಕಾಗೆ ಗೊತ್ತಾಗದೇ ಹೋಗಿ ಬಿಟ್ಟಿದೆ. ಇನ್ನೊಂದೆಡೆ ಕುತಂತ್ರಿ ಮೈದುನ ಜೈದೇವನ ತಂತ್ರವನ್ನೂ ಅವಳು ಅರಿಯುತ್ತಿಲ್ಲ ಎನ್ನುವುದು ವಿಚಿತ್ರ ಎನಿಸುತ್ತಿದೆ.
ಇದರ ನಡುವೆಯೇ 400 ಸಂಚಿಕೆಯನ್ನು ಮುಗಿಸಿರೋ ಕಾರಣ ವಾಹಿನಿ ಹಂಚಿಕೊಂಡಿರುವ ಪ್ರೊಮೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ, ಅದರಲ್ಲಿ ಮಲ್ಲಿಯ ಫೋಟೋ ಇಲ್ಲ! ಜೈದೇವ, ಆನಂದ್ ಅವನ ಪತ್ನಿ, ಅತ್ತೆ ಶಕುಂತಲಾ, ಪಾರ್ಥ ಮತ್ತು ಪತ್ನಿ ಇದ್ದಾರೆ. ಆದರೆ ಮಲ್ಲಿ ಮಿಸ್ಸಿಂಗ್. ಇದೇ ಕಾರಣಕ್ಕೆ ಮಲ್ಲಿಯನ್ನು ಜೈದೇವ ಸಾಯಿಸುವಲ್ಲಿ ಯಶಸ್ವಿಯಾಗಿಬಿಟ್ಟನಾ ಎನ್ನುವ ಆತಂಕ ವೀಕ್ಷಕರನ್ನು ಕಾಡುತ್ತಿದೆ. ಈ ಬಗ್ಗೆ ಕಮೆಂಟ್ ಬಾಕ್ಸ್ನಲ್ಲಿ ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಮಲ್ಲಿಯನ್ನು ಸಾಯಿಸಿದರೆ, ಸೀರಿಯಲ್ಗೆ ಅರ್ಥವೇ ಇಲ್ಲ ಎನ್ನುವುದು ಅವರ ಮಾತು. ಅಷ್ಟಕ್ಕೂ ನರ್ಸ್ಗೆ ಹಣದ ಆಮಿಷ ಒಡ್ಡಿದ್ದಾನೆ ಜೈದೇವ. ಒಂದು ವೇಳೆ ಮಲ್ಲಿಗೆ ಏನಾದ್ರೂ ಆದರೆ ಇಡೀ ವೈದ್ಯಕೀಯ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಮಾತನ್ನೂ ಹಲವರು ಹೇಳುತ್ತಿದ್ದಾರೆ.
ನರ್ಸ್ ಗೆ ಅಮೃತಧಾರೆಯಲ್ಲಿ ಅವಮಾನ, ರೊಚ್ಚಿಗೆದ್ದ ಫ್ಯಾನ್ಸ್
ಅಷ್ಟಕ್ಕೂ ಸೀರಿಯಲ್ನಲ್ಲಿ, ತನ್ನನ್ನು, ಗಂಡನನ್ನು, ಪತ್ನಿ ಮಲ್ಲಿಯನ್ನು ಕೊಲ್ಲಲು ಸಂಚುರೂಪಿಸಿದ್ದು ತಿಳಿದಿದ್ದರೂ ಜೈದೇವನನ್ನು ನಂಬಿ ಅತೀ ಪೆದ್ದು ಎನ್ನುವಂತೆ ಭೂಮಿಕಾ ಮತ್ತು ಗೌತಮ್ ನಡೆದುಕೊಂಡಿದ್ದಾರೆ. ಇದು ಸದ್ಯ ಸೀರಿಯಲ್ ಪ್ರೇಮಿಗಳಿಗೆ ಇಷ್ಟವಾಗುತ್ತಿಲ್ಲ. ಹಾವಿಗೆ ವಿಷ ಇದೆ ಎಂದು ಗೊತ್ತಾದ ಮೇಲೂ ಅದನ್ನು ಮುದ್ದು ಮಾಡುವುದು ಎಷ್ಟು ಸರಿ ಎನ್ನುವುದು ಪ್ರೇಕ್ಷಕರ ಮಾತು. ತಾನು ಒಳ್ಳೆಯವನು ಎನ್ನುವ ಪೋಸ್ ಕೊಟ್ಟು ಹೆಜ್ಜೆ ಹೆಜ್ಜೆಗೂ ಅಣ್ಣ ಮತ್ತು ಅತ್ತಿಗೆಯನ್ನು ಯಾಮಾರಿಸುತ್ತಿದ್ದಾನೆ ಜೈದೇವ. ಈಗ ಪತ್ನಿಯನ್ನು ಕೊಲ್ಲುವ ಮಟ್ಟಿಗೆ ಬಂದಿದ್ದಾನೆ. ತುಂಬು ಗರ್ಭಿಣಿ ಪತ್ನಿಯನ್ನು ತವರಿಗೆ ಬಿಟ್ಟು ಬರಲು ಹೋಗಿದ್ದ. ಅವಳನ್ನು ಬೇರೆ ಕಾರಿನಲ್ಲಿ ಕುಳ್ಳರಿಸಿ ತಾನು ಗರ್ಲ್ಫ್ರೆಂಡ್ ಜೊತೆ ಲಲ್ಲೆ ಹೊಡೆಯುತ್ತಿದ್ದಾಗ ಅದನ್ನು ಮಲ್ಲಿ ನೋಡಿದ್ದಾಳೆ. ಮತ್ತೊಂದು ಕಡೆಯಿಂದ ಗಾಡಿ ಬಂದು ಅವಳಿಗೆ ಗುದ್ದಿದೆ. ಮಗು ಸತ್ತು ಹೋಗಿದೆ.
ಇದೀಗ ಮಲ್ಲಿ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಯಲ್ಲಿ ಇದ್ದಾಳೆ. ಅವಳಿಗೆ ಪ್ರಜ್ಞೆ ಬಂದಿದೆ. ಅಷ್ಟರಲ್ಲಿ ನರ್ಸ್ ಜೈದೇವ್ಗೆ ಕಾಲ್ ಮಾಡಿದ್ದಾಳೆ. ಅವಳಿಗೆ ಪ್ರಜ್ಞೆ ಬರದಂತೆ ನೋಡಿಕೊಳ್ಳಬೇಕು. ಆಪರೇಷನ್ ಸಮಯದಲ್ಲಿ ಅವಳನ್ನು ಅಲ್ಲಿಯೇ ಮುಗಿಸಬೇಕು ಎಂದು ಜೈದೇವ್ ಹೇಳಿದ್ದಾನೆ. ಇದಕ್ಕಾಗಿ ಎಷ್ಟು ಬೇಕಾದರೂ ದುಡ್ಡು ಕೊಡುತ್ತೇನೆ ಎಂದಿದ್ದಾನೆ. ಇದಕ್ಕೂ, ಪ್ರೊಮೋದಲ್ಲಿ ಮಲ್ಲಿಯ ಫೋಟೋ ಇಲ್ಲದೇ ಇರುವುದಕ್ಕೂ ಸಂಬಂಧ ಇದ್ಯಾ ಎನ್ನುವುದು ನೆಟ್ಟಿಗರ ಪ್ರಶ್ನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.