
ಇದೇ ಏಪ್ರಿಲ್ 4ರಂದು ಸ್ಯಾಂಡಲ್ವುಡ್ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿಯಾಗಿದ್ದು, ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್, ಅಡುಗೆ ಕುರಿತು ವಿಡಿಯೋ ಶೇರ್ ಮಾಡುತ್ತಿದ್ದರು. ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಯೇ ಇದ್ದರು. ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು. ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದು, ಹಲವು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದ್ದಾರೆ.
ಇದಕ್ಕೆ ಕಾರಣ, ಎರಡು ತಿಂಗಳ ಮಗುವನ್ನು ಬಿಟ್ಟು ಅದಿತಿಯವರು ಕಲರ್ಸ್ ಕನ್ನಡ ಚಾನೆಲ್ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್ನಲ್ಲಿ ಕಾಣಿಸಿಕೊಂಡಿದ್ದು. ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇಂದಿನಿಂದ (ಜೂನ್ 8) ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ಷೋಗೆ ಸೃಜನ್ ಲೋಕೇಶ್ ಮತ್ತು ತಾರಾ ಅನುರಾಧ ಅವರು ತೀರ್ಪುಗಾರರಾಗಿ ಬರುವುದರ ಜೊತೆಗೆ, ಅದಿತಿಯವರೂ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಇದರ ಪ್ರೊಮೋ ಬಿಡುಗಡೆ ಮಾಡಿದಾಗಲೇ ಅಭಿಮಾನಿಗಳು ಇಷ್ಟು ಚಿಕ್ಕ ವಯಸ್ಸಿನ ಪಾಪುವನ್ನು ಬಿಟ್ಟು ಬಂದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು.
ಎರಡು ತಿಂಗಳ ಮಗು ಬಿಟ್ಟು ಬರ್ತೀರಾ? ನಟಿ ಅದಿತಿ ಪ್ರಭುದೇವ್ಗೆ ಅಭಿಮಾನಿಗಳ ಕ್ಲಾಸ್!
ಇದೀಗ ಅದಿತಿಯವರು ಅಭಿಮಾನಿಗಳಿಗೆ ಉತ್ತರದ ಮೂಲಕ ಸಮಾಧಾನ ಹೇಳಿದ್ದಾರೆ. ಮದುವೆಯಾದ ಮೇಲೆ ಜೀವನದ ಬದಲಾವಣೆ ಆಗಿದ್ದು ನಿಜ. ಆದ್ರೆ ಅಮ್ಮನಾದ ಮೇಲಂತೂ ಅದೊಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಖುಷಿ. ಎಲ್ಲರೂ ಹೇಳುತ್ತಿದ್ದಾಗ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಇದೀಗ ತುಂಬಾ ಖುಷಿಯಾಗುತ್ತಿದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ತನ್ನ ಮಗುವಿಗೆ ಈಗ ಎರಡು ತಿಂಗಳು. ಅಮ್ಮ ಮತ್ತು ಗಂಡನ ಸಹಾಯ ಇಲ್ಲದಿದ್ದರೆ ತಾವು ಹೀಗೆ ಇಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಅಮ್ಮ ಮಗುವನ್ನು ನೋಡಿಕೊಳ್ಳುತ್ತಿರುವ ಕಾರಣ ನಾನು ಷೋಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ.
ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದಾರೆ. ಇದರ ಹೊರತಾಗಿಯೂ ಅಭಿಮಾನಿಗಳಿಗೆ ಯಾಕೋ ಸಮಾಧಾನ ಆಗುತ್ತಿಲ್ಲ. ಅಮ್ಮನ ಕೆಲಸ ಎಂದರೆ ಎರಡು ಗಂಟೆಗೊಮ್ಮೆ ಎದೆಹಾಲು ಕುಡಿಸುವುದು ಮಾತ್ರವಲ್ಲ. ಅಮ್ಮನಾಗಿ ಜವಾಬ್ದಾರಿ ಹೆಚ್ಚಿದೆ. ಮಗುವಿನ ಜೊತೆ ಅಮ್ಮ ಆದವಳು ಇರಬೇಕೇ ವಿನಾ, ಅಜ್ಜಿಯಾದವಳು ಅಲ್ಲ ಎಂದೆಲ್ಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ, ಬಾಣಂತಿಯಾದವರು ಹೀಗೆ ಮಗುವನ್ನು ಬಿಟ್ಟು ಬಂದಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು. ರಿಯಾಲಿಟಿ ಷೋಗಳ ಶೂಟಿಂಗ್ ಎಂದರೆ ಅದು ಸುದೀರ್ಘವಾದದ್ದು. ದಿನಪೂರ್ತಿ ಶೂಟಿಂಗ್ ನಡೆಯುತ್ತದೆ. ಮಗುವನ್ನು ನೋಡಿಕೊಳ್ಳಲು ಅಜ್ಜಿ ಇದ್ದರೂ ಅಮ್ಮನಿಗೆ ಅವಳದ್ದೇ ಆದ ಕೆಲವು ಜವಾಬ್ದಾರಿಗಳು ಇರುತ್ತವೆ. ಅದನ್ನು ಮರೆತು ನೀವು ಇದರಲ್ಲಿ ಇಷ್ಟು ಬೇಗ ಪಾಲ್ಗೊಳ್ಳುವುದು ಯಾಕೋ ಸರಿ ಕಾಣುತ್ತಿಲ್ಲ ಎಂದು ಕಮೆಂಟಿಗರು ಹೇಳಿದ್ದರು. ಈಗಲೂ ಅದೇ ಮಾತನ್ನು ಹೇಳುತ್ತಿದ್ದಾರೆ.
ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.