ಇಸ್ರೋ ಸಿಬ್ಬಂದಿ ವೇತನ ಹೆಚ್ಚಳ ಆದೇಶ ವಾಪಸ್ ಪಡೆದ ಕೇಂದ್ರ!

By Web DeskFirst Published Sep 10, 2019, 2:23 PM IST
Highlights

ವಿಕ್ರಮ್ ಲ್ಯಾಂಡರ್ ಹುಡುಕಾಟದಲ್ಲಿ ನಿರತರಾಗಿರುವ ಇಸ್ರೋ ವಿಜ್ಞಾನಿಗಳು| ಚಂದ್ರಯಾನ-2 ಯಶಸ್ಸಿಗೆ ಶ್ರಮಿಸುತ್ತಿರುವ ಇಸ್ರೋ ಸಿಬ್ಬಂದಿ| ಇಸ್ರೋ ಸಿಬ್ಬಂದಿ ಹೆಚ್ಚುವರಿ ವೇತನ ಹೆಚ್ಚಳ ಆದೇಶ ಹಿಂಪಡೆದ ಕೇಂದ್ರ ಸರ್ಕಾರ| ಹಿರಿಯ ವಿಜ್ಞಾನಿಗಳ, ಇಂಜಿನಿಯರ್'ಗಳ ಇನ್‌ಕ್ರಿಮೆಂಟ್ ವಾಪಸ್ ಪಡೆದ ಕೇಂದ್ರ| ಕಾರ್ಯಕ್ಷಮತೆಗೆ ಸಂಬಂಧಿತ ಪ್ರೋತ್ಸಾಹಕ ಯೋಜನೆ(PRS) ಜಾರಿ ಪರಿಣಾಮ| ಆದೇಶ ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಕೆ.ಶಿವನ್'ಗೆ ಇಂಜಿನಿಯರ್ ಸಂಘದ ಒತ್ತಾಯ|

ನವದೆಹಲಿ(ಸೆ.10): ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕಾಗಿ ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಚಂದ್ರಯಾನ-2 ಯೋಜನೆಯ ಯಶಸ್ಸಿಗಾಗಿ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

ಆದರೆ ಕೇಂದ್ರ ಸರ್ಕಾರ ಇಸ್ರೋದ ವಿಜ್ಞಾನಿಗಳು ಹಾಗೂ ಇಂಜಿನಿಯರ್'ಗಳ ಹೆಚ್ಚುವರಿ ವೇತನ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಇಸ್ರೋದ ಹಿರಿಯ ಸಿಬ್ಬಂದಿಯ ಇನ್‌ಕ್ರಿಮೆಂಟ್ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಜೂನ್ 12ರಂದು ಬಾಹ್ಯಾಕಾಶ ಇಲಾಖೆಯ ಅಧೀನ ಕಾರ್ಯದರ್ಶಿ ಎಂ ರಾಮದಾಸ್ ಹೊರಡಿಸಿರುವ ಆದೇಶದನ್ವಯ, ಎಸ್‌ಡಿ, ಎಸ್‌ಇ, ಎಸ್‌ಎಫ್ ಮತ್ತು ಎಸ್‌ಜಿ ದರ್ಜೆಯ ವಿಜ್ಞಾನಿಗಳು/ಇಂಜಿನಿಯರ್'ಗಳಿಗೆ ನೀಡಲಾಗಿದ್ದ ಎರಡು ಹೆಚ್ಚುವರಿ ವೇತನವನ್ನು ಜುಲೈ 1, 2019ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗಿದೆ.

6ನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸು ಮತ್ತು ಕಾರ್ಯಕ್ಷಮತೆಗೆ ಸಂಬಂಧಿತ ಪ್ರೋತ್ಸಾಹಕ ಯೋಜನೆ(PRS ) ಜಾರಿಗೆ ಬಂದ ಪರಿಣಾಮವಾಗಿ, ಹೆಚ್ಚುವರಿ ವೇತನವನ್ನುಕಡಿತಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಬಾಹ್ಯಾಕಾಶ ಇಂಜಿನಿಯರ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಸಂತೋಷ್ ಕುಮಾರ್, ಇದು ಸಂಸ್ಥೆಯ ಆಂತರಿಕ ವಿಷಯವಾಗಿದ್ದು ಸದ್ಯ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದಿದ್ದಾರೆ.

ಆದರೆ ಪ್ರಸಕ್ತ ಆದೇಶ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಇಂಜಿನಿಯರ್'ಗಳ ಸಂಘ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರಿಗೆ ಮನವಿ ಮಾಡಿದೆ.

click me!