ಇಷ್ಟವಿದ್ರೆ ಕೆಲ್ಸ ಮಾಡಿ, ಇಲ್ಲಾಂದ್ರೆ ಬೇರೆ ದಾರಿ ನೋಡ್ಕೊಳ್ಳಿ: ಅತಿಥಿ ಉಪನ್ಯಾಸಕರಿಗೆ ಸಚಿವ ನಾಗೇಶ್‌ ತರಾಟೆ!

By Kannadaprabha NewsFirst Published Jan 1, 2022, 5:27 AM IST
Highlights

*ಅತಿಥಿ ಉಪನ್ಯಾಸಕರಿಗೆ ಶಿಕ್ಷಣ ಸಚಿವ ನಾಗೇಶ್‌ ತರಾಟೆ
*ನೀವು ಕೆಲಸ ಮಾಡಿ ಎಂದು ನಿಮ್ಮ ಮನೆಗೆ ಬಂದು ಕೇಳಿದ್ವಾ?
*ತಿಥಿ ಉಪನ್ಯಾಸಕರ ವಲಯದಲ್ಲಿ ತೀವ್ರ ಅಸಮಾಧಾನ

ಕೋಲಾರ (ಜ. 1): ‘ನೀವು ಕೆಲಸ ಮಾಡಿ ಎಂದು ನಿಮ್ಮ ಮನೆಗೆ ಬಂದು ನಾವು ಕೇಳಿಕೊಂಡಿದ್ವಾ, ಇಷ್ಟಇದ್ದರೆ ಕೆಲಸ ಮಾಡಿ, ಇಲ್ಲ ಅಂದರೆ ಪರೀಕ್ಷೆ ಬರೆದು ಬೇರೆ ದಾರಿ ನೋಡಿಕೊಳ್ಳಿ’. ಇದು ವೇತನ ಹೆಚ್ಚಿಸಿ, ಸೇವಾಭದ್ರತೆ ನೀಡಿ ಎಂದು ಅತಿಥಿ ಉಪನ್ಯಾಸಕರು (Guest Lecture) ಮನವಿ ಮಾಡಿದಾಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (B C Nagesh) ಪ್ರತಿಕ್ರಿಯಿಸಿದ ಪರಿ. ಕೋಲಾರದ (Kolar) ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮುಳಬಾಗಿಲುನಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ (Bengaluru) ತೆರಳುತ್ತಿದ್ದಾಗ ಕೋಲಾರದಲ್ಲಿ ಕಳೆದ 17 ದಿನಗಳಿಂದ ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ವಿಷಯ ತಿಳಿದು ಕೋಲಾರ-ಮುಳಬಾಗಿಲು ಹೆದ್ದಾರಿಯ ಬಂಗಾರಪೇಟೆಯ ಫ್ಲೈ ಓವರ್‌ ಬಳಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದರು. ‘ನಮಗೆ ವೇತನ ಹೆಚ್ಚಳ ಮಾಡಿ, ಜೀವನಕ್ಕೆ ಭದ್ರತೆ ನೀಡಿ, ನಾವು ಶೋಷಣೆಗೆ ಒಳಗಾಗಿದ್ದೇವೆ’ ಎಂದು ಸಚಿವರಿಗೆ ಮನವಿ ಪತ್ರ ನೀಡಿದರು. ಆಗ ಗರಂ ಆದ ಸಚಿವರು, ಉಪನ್ಯಾಸಕರಿಗೆ ಎಚ್ಚರಿಕೆ ನೀಡಿ ‘ಶೋಷಣೆ ಎನ್ನುವ ಪದಕ್ಕೆ ಅರ್ಥ ಗೊತ್ತೇನ್ರಿ?’ ಎಂದು ತರಾಟೆಗೆ ತೆಗೆದುಕೊಂಡರು.

ನಿಮ್ಮ ಮನೆಗೆ ಬಂದು ನಾವು ಕೇಳಿಕೊಂಡಿದ್ವಾ?

ಮುಂದುವರಿದು, ‘ನೀವು ಕೆಲಸ ಮಾಡಿ ಎಂದು ನಿಮ್ಮ ಮನೆಗೆ ಬಂದು ನಾವು ಕೇಳಿಕೊಂಡಿದ್ವಾ? ನೀವು ಹೇಳುವುದನ್ನೆಲ್ಲಾ ಮಾಡುವುದಕ್ಕೆ ಕಾನೂನಿನಲ್ಲಿ ಹಲವಾರು ತೊಡಕುಗಳಿವೆ’ ಎಂದು ಖಡಕ್ಕಾಗಿ ಹೇಳಿ ಕಾರು ಹತ್ತಿದರು. ಸಚಿವರ ಕಾರು ಹೊರಡುತ್ತಿದ್ದಂತೆ ಅತಿಥಿ ಉಪನ್ಯಾಸಕರು ಸಚಿವರಿಗೆ ಹಾಗು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗಿದರು.

ಶಿಕ್ಷಣ ಸಚಿವರ ಈ ನಡೆಗೆ ಅತಿಥಿ ಉಪನ್ಯಾಸಕರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ‘ ಇಂತಹ ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಗೆ ಬೇಕೇ? ಇಂತಹವರಿಂದ ಶಿಕ್ಷಕರ ಸಮಸ್ಯೆಗಳು ಇತ್ಯರ್ಥವಾಗುತ್ತವೆಯೇ ಎಂದು’ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈಸ್ಕೂಲ್‌, ಕಾಲೇಜಲ್ಲೇ ಲಸಿಕೆ ಕೇಂದ್ರ!

ಶಾಲೆ ಮತ್ತು ಕಾಲೇಜುಗಳಲ್ಲಿಯೇ ಕೊರೋನಾ ಲಸಿಕೆ ಕೇಂದ್ರವನ್ನು (Vaccination Centre) ತೆರೆಯುವ ಮೂಲಕ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಜ.3ರಿಂದ ಮಕ್ಕಳ ಕೊರೋನಾ ಲಸಿಕೆ (Vaccine for Children) ಅಭಿಯಾನ ಆರಂಭವಾಗುತ್ತಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಜಿಲ್ಲಾಡಳಿತಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ಪೋಷಕರಿಗೆ ಜಾಗೃತಿ, ಶಾಲಾ, ಕಾಲೇಜುಗಳಲ್ಲಿ ಲಸಿಕೆ ಕೇಂದ್ರ ಸ್ಥಾಪನೆ, ಮಕ್ಕಳ ಹೆಸರು ನೋಂದಣಿ, ಲಸಿಕೆ ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ.

ಜಿಲ್ಲಾಡಳಿತವು ಮೊದಲು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ, ನರ್ಸಿಂಗ್‌ ಪ್ಯಾರಾ ಮೆಡಿಕಲ್‌ ಬೋರ್ಡ್‌ನಿಂದ 15-18 ವರ್ಷ (2007ಕ್ಕಿಂತ ಮೊದಲು ಜನಿಸಿದವರು) ವಿದ್ಯಾರ್ಥಿಗಳ ಪಟ್ಟಿಪಡೆಯಬೇಕು. ನಂತರ ಆಯಾ ಅಥವಾ ಸಮೀಪದ ಶಾಲೆ ಮತ್ತು ಕಾಲೇಜುಗಳಲ್ಲಿ ಲಸಿಕೆ ಕೇಂದ್ರವನ್ನು ತೆರೆಯಬೇಕು. ಮುಂಚಿತವಾಗಿಯೇ ಲಸಿಕೆ ಮತ್ತು ಅದರ ಅವಶ್ಯಕತೆ ಕುರಿತು ಮಾಹಿತಿ ನೀಡಿ ಅವರ ಸಂದೇಹ ಪರಿಹಾರ ಮಾಡಿ ಸೂಕ್ತ ದಿನಾಂಕ ನಿಗದಿಪಡಿಸಿ ಆನಂತರ ಲಸಿಕೆ ನೀಡಬೇಕಿದೆ. ಅಡ್ಡ ಪರಿಣಾಮಗಳು ಉಂಟಾದರೆ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:

1) Vaccine for Children: 15-18 ವರ್ಷದವರಿಗೆ ಕೋವಿಡ್‌ ವ್ಯಾಕ್ಸಿನ್: ಹೈಸ್ಕೂಲ್‌, ಕಾಲೇಜಲ್ಲೇ ಲಸಿಕೆ ಕೇಂದ್ರ!

2) Guest Lecturer Suicide : ಖಿನ್ನತೆಯಿಂದ ಅತಿಥಿ ಉಪನ್ಯಾಸಕನ ಆತ್ಮಹತ್ಯೆ

3) Guest Lecturers Strike: ಅತಿಥಿ ಉಪನ್ಯಾಸಕರ ಮುಷ್ಕರ: ಪಾಠವಿಲ್ಲದೆ ವಿದ್ಯಾರ್ಥಿಗಳ ಕಷ್ಟ

click me!