Assembly session: ಅಸೆಂಬ್ಲಿಯಲ್ಲಿಂದು ಸಾವರ್ಕರ್‌ ಚಿತ್ರ ಅನಾವರಣ?

By Kannadaprabha NewsFirst Published Dec 19, 2022, 6:38 AM IST
Highlights
  • ಅಸೆಂಬ್ಲಿಯಲ್ಲಿಂದು ಸಾವರ್ಕರ್‌ ಚಿತ್ರ ಅನಾವರಣ?
  • ಸ್ಪೀಕರ್‌ ಸಚಿವಾಲಯ ಸಿದ್ಧತೆ
  • ಸರ್ಕಾರ- ಕಾಂಗ್ರೆಸ್‌ ತೀವ್ರ ಜಟಾಪಟಿ ಸಂಭವ

ಬೆಳಗಾವಿ ಸುವರ್ಣಸೌಧ (ಡಿ.19): ವಿವಾದಾತ್ಮಕ ಬೆಳವಣಿಗೆಯೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಸೇರಿದಂತೆ ವಿವಿಧ ಏಳು ನಾಯಕರ ಭಾವಚಿತ್ರಗಳನ್ನು ಸುವರ್ಣಸೌಧದ ವಿಧಾನಸಭೆಯಲ್ಲಿ ಅನಾವರಣಗೊಳಿಸಲು ಸ್ಪೀಕರ್‌ ಸಚಿವಾಲಯ ಸಿದ್ಧತೆ ಕೈಗೊಂಡಿದ್ದು, ಸದನದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ತೀವ್ರ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.

ವೀರ ಸಾವರ್ಕರ್‌ ಭಾವಚಿತ್ರ ಅಳವಡಿಸುವುದಕ್ಕೆ ಮುಂದಾಗಿರುವುದು ಪ್ರತಿಪಕ್ಷವನ್ನು ಕೆರಳಿಸುವಂತೆ ಮಾಡಿದೆ. ಸೋಮವಾರ ಕಲಾಪ ಆರಂಭಕ್ಕೂ ಮುನ್ನ ಎಲ್ಲಾ ಭಾವಚಿತ್ರಗಳನ್ನು ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಭಾವಚಿತ್ರಗಳನ್ನೂ ಸಹ ಅನಾವರಣಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

Winter Session: ಇಂದಿನಿಂದ ಉತ್ತರಾಧಿವೇಶನ: ಸರ್ಕಾರ V/s ಕಾಂಗ್ರೆಸ್‌ ಕದನ!

ವಿಧಾನಸಭೆಯ ಸಭಾಂಗಣದಲ್ಲಿ ಸಾರ್ವಕರ್‌ ಸೇರಿದಂತೆ ವಿವಿಧ ಗಣ್ಯರ ಭಾವಚಿತ್ರಗಳನ್ನು ಬಟ್ಟೆಯಿಂದ ಮುಚ್ಚಿಡಲಾಗಿದೆ. ಆದರೆ, ಕೆಲ ಮಾಧ್ಯಮಗಳಿಗೆ ಸಾವರ್ಕರ್‌ ಅವರ ಫೋಟೋ ಲಭ್ಯವಾಗುವಂತೆ ಮಾಡಲಾಗಿದೆ. ಈ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರು ಆಕ್ಷೇಪ ಎತ್ತಿದ್ದಾರೆ. ಇದು ಕಲಾಪದಲ್ಲಿ ಮತ್ತಷ್ಟುಉಗ್ರವಾಗಿ ಪ್ರಸ್ತಾಪಗೊಂಡು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ವಿವಾದಾತ್ಮಕ ವ್ಯಕ್ತಿಯಾಗಿರುವ ಸಾವರ್ಕರ್‌ ಭಾವಚಿತ್ರ ಹಾಕುವ ಅಗತ್ಯವಿಲ್ಲ ಎಂಬುದು ಪ್ರತಿಪಕ್ಷಗಳ ವಾದವಾಗಿದ್ದರೆ, ಸಾರ್ವಕರ್‌ ಭಾವಚಿತ್ರ ಹಾಕಿರುವುದರಲ್ಲಿ ತಪ್ಪೇನು ಎಂದು ಬಿಜೆಪಿ ಪ್ರಶ್ನಿಸುವ ಸಾಧ್ಯತೆಯಿದೆ. ಅಲ್ಲದೆ, ಮಹಾತ್ಮಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋಗಳನ್ನು ಅನಾವರಣಗೊಳಿಸುವ ಮೂಲಕ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಸಾಧ್ಯತೆಯಿದೆ.

ತಪ್ಪೇನು? ಸಚಿವ ಸಿಸಿಪಾ ಪ್ರಶ್ನೆ:

ಈ ನಡುವೆ ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ಅನಾವರಣ ಕುರಿತು ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ಫೋಟೋ ಅನಾವರಣ ವಿಚಾರವು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು. ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಭಾವಚಿತ್ರ ಹಾಕಬೇಕು ಎನ್ನುವುದನ್ನು ಸಭಾಧ್ಯಕ್ಷರು, ಸಭಾಪತಿಗಳು ಆಯಾ ಸದನದಲ್ಲಿ ನಿರ್ಧಾರ ಮಾಡುತ್ತಾರೆ. ಕಾಂಗ್ರೆಸ್‌ ನಾಯಕರು ಟಿಪ್ಪು ಸುಲ್ತಾನ್‌ ಇಟ್ಟುಕೊಂಡು ಹೋಗುತ್ತಾರೆ. ಸಾರ್ವಕರ್‌ ಫೋಟೋ ಇದ್ದರೆ ಏನು ತಪ್ಪು? ಸಾವರ್ಕರ್‌ ಎಷ್ಟುವರ್ಷ ಕಾಲಾಪಾನಿ ಶಿಕ್ಷೆ ಅನುಭವಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಸಾವರ್ಕರ್‌ ಬಿಜೆಪಿ ಸ್ವತ್ತಲ್ಲ, ಅವರೊಬ್ಬ ದೇಶಾಭಿಮಾನಿ. ಟಿಪ್ಪುಗೆ ಸಾವರ್ಕರ್‌ ಹೋಲಿಕೆ ಮಾಡುವುದು ಸರಿಯಲ್ಲ. ಸಾವರ್ಕರ್‌ ದೇಶಾಭಿಮಾನಿ ಎಂದು ಎದೆ ತಟ್ಟಿಹೇಳುತ್ತೇನೆ ಎಂದರು.

Belagavi Border Isuue : ಮತ್ತೆ ಮಹಾರಾಷ್ಟ್ರ ಕಿರಿಕ್: ಎಂಇಎಸ್‌ ಮಹಾಮೇಳಾವ್‌'ಗೆ ಬರುವುದಾಗಿ ಧೈರ್ಯಶೀಲ ಮಾನೆ ಪತ್ರ

ರಾಯಣ್ಣ, ಚೆನ್ನಮ್ಮ ಪುತ್ಥಳಿಗೆ ಶಂಕು:

ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಮಹಾತ್ಮಗಾಂಧಿ, ಅಂಬೇಡ್ಕರ್‌ ಪ್ರತಿಮೆಗಳನ್ನು ಸುವರ್ಣಸೌಧದಲ್ಲಿ ನಿರ್ಮಾಣ ಮಾಡಲು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಇದೇ ಅಧಿವೇಶನದಲ್ಲಿ ಮೂರ್ತಿ ಸ್ಥಾಪನೆಗೆ ಶಂಕು ಸ್ಥಾಪನೆ ಮಾಡುತ್ತೇನೆ. ಹೀಗಾಗಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು, ಎರಡು ಸದನದ ಮುಖ್ಯಸ್ಥರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುತ್ತೇನೆ. ಮುಖ್ಯಮಂತ್ರಿಗಳು ಅಂತಿಮ ಮಾಡಿದ ಬಳಿಕ ಭೂಮಿ ಪೂಜೆ ಮಾಡಲಾಗುತ್ತದೆ ಎಂದು ಹೇಳಿದರು.

click me!