ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರ ಪಾತ್ರವಿದ್ದರೆ ನಿರ್ದಾಕ್ಷಿಣ್ಯ ಕ್ರಮ; ಗೃಹ ಸಚಿವ ಪರಮೇಶ್ವರ

By Sathish Kumar KHFirst Published May 29, 2024, 2:53 PM IST
Highlights

ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇಲಾಖಾ ಸಚಿವರು ಹಣ ವರ್ಗಾವಣೆಗೆ ಮೌಖಿಕವಾಗಿ ಆದೇಶ ಕೊಟ್ಟಿದ್ದಾರೆಂಬ ಆರೋಪ ಸಾಬೀತಾದರೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುತ್ತದೆ.

ಬೆಂಗಳೂರು (ಮೇ 29): ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ‌ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಸಂಬಂಧಪಟ್ಟ ಇಲಾಖಾ ಸಚಿವರು ಹಣ ವರ್ಗಾವಣೆಗೆ ಮೌಖಿಕವಾಗಿ ಆದೇಶ ಕೊಟ್ಟಿದ್ದಾರೆಂಬ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ‌ ಪ್ರಕರಣದ ಕುರಿತು ಮಾತನಾಡಿ, ಸಿಐಡಿಯವರು ಪ್ರಕರಣವನ್ನು ತೆಗದುಕೊಂಡು ತನಿಖೆ ನಡೆಸುತ್ತಿದೆ. ಬೇರೆಬೇರೆ ಐಟಿ ಕಂಪನಿಗಳಿಗೆ ವರ್ಗಾವಣೆಯಾಗಿರುವ ಆರೋಪ ತನಿಖೆಯಿಂದ ಹೊರಬರುತ್ತದೆ. ಒಂದೊಂದು ಘಟನೆಯಾದಗೂ ವಿಪಕ್ಷದವರು ರಾಜೀನಾಮೆ‌ ಕೇಳುತ್ತಾರೆ. ಹಣ ವರ್ಗಾವಣೆಗೆ ಮೌಖಿಕವಾಗಿ ಆದೇಶ ಕೊಟ್ಟಿದ್ದಾರೆ ಎಂಬ ಆರೋಪ ತನಿಖೆಯಲ್ಲಿ ಸಾಬೀತಾದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಶ್ವರಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಅವರ ಹೆಸರನ್ನು ನೇರವಾಗಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಸಚಿವರ ಹೆಸರನ್ನು ಎಲ್ಲಿಯೂ ನೇರವಾಗಿ ಹೇಳಿಲ್ಲ. ತನಿಖೆ ಆಗುವವರೆಗೂ ಕಾಯಬೇಕು ಎಂದು ಹೇಳಿದರು.

Latest Videos

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ; ಬ್ಯಾಂಕ್ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲು

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ ಎಂಬುದು ಬರುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅಂತವರನ್ನು ಬಂಧಿಸಲಾಗುತ್ತದೆ. ಕಾಂಗ್ರೆಸ್, ಜನತಾದಳ, ಬಿಜೆಪಿ ಎಂಬುದಕ್ಕಿಂತ ಹೆಚ್ಚಾಗಿ, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿರುವುದು ಕಂಡು ಬರುತ್ತದೆಯೋ ಅಂತವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಈಗಾಗಲೇ‌ ಪ್ರಕರಣದಲ್ಲಿ 11-12 ಜನರನ್ನು ಬಂಧಿಸಲಾಗಿದೆ. ಪ್ರಜ್ವಲ್ ರೇವಣ್ಣ ವಾಪಸ್ ಆಗುತ್ತಿರುವ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಜ್ವಲ್ ವಿರುದ್ಧ ವಾರಂಟ್ ಜಾರಿಯಾಗಿರುವುದರಿಂದ ಬಂಧಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಸ್ಐಟಿಯವರು ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಎಮ್‌ಎಲ್‌ಸಿ ಅಭ್ಯರ್ಥಿಗಳ ಆಯ್ಕೆ ವಿಚಾರದ ಕುರಿತು ಮಾತನಾಡಿ, ನನ್ನ ಹೇಳಿಕೆಯನ್ನು ಯಾರು ತಪ್ಪಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯ ಇಲ್ಲ. ಪ್ರಮುಖರೊಂದಿಗೆ ಸಮಾಲೋಚನೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದುದು ಪ್ರಕ್ರಿಯೆ. ಯಾರು ಸಹ ಇದನ್ನು ತಪ್ಪು ಅಂತ ಹೇಳಲಾಗುವುದಿಲ್ಲ. ನಾನು ಸಹ ಕೆಪಿಸಿಸಿ‌ ಅಧ್ಯಕ್ಷನಾಗಿ‌ ಕೆಲಸ ಮಾಡಿದ ಅನುಭವದಿಂದ ಆ‌ ಮಾತನ್ನು ಹೇಳಿದ್ದೇನೆ. ನಾವು ಹೇಳಿದವರಿಗೆ ಅವಕಾಶ ನೀಡಬೇಕು ಅಂತ ಹೇಳಲು ಬರುವುದಿಲ್ಲ. ಯಾರು ಪಕ್ಷಕ್ಕಾಗಿ ದುಡಿದಿದ್ದಾರೋ, ಯಾವ ಸಮುದಾಯ ಪಕ್ಷದ ಜೊತೆ ನಿಂತಿದೆಯೋ ಅಂತವರಿಗೆ ಅವಕಾಶ‌ ಕಲ್ಪಿಸಬೇಕು. ಪಕ್ಷಕ್ಕಾಗಿ‌ ಕೆಲಸ‌ ಮಾಡಿದ ಅನೇಕರಿಗೆ ಅನುಭವ ಇರುತ್ತದೆ. ಅಂತವರೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆಯಬೇಕು ಎಂಬುದನ್ನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು‌.

ಹಿಂದೂಗಳ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮುಸ್ಲಿಮರ ಗುಂಪು; ಸರ್ಕಾರದಿಂದ ಪಿಎಸ್‌ಐ ಸಸ್ಪೆಂಡ್

ನನ್ನ ಅಭಿಪ್ರಾಯವನ್ನು ನಾನು ಹೇಳಿಬಿಟ್ಟಿದ್ದೇನೆ. 7 ಸ್ಥಾನಗಳು ನಮ್ಮ ಪಕ್ಷಕ್ಕೆ ಬರುತ್ತವೆ. 300 ಅರ್ಜಿ ಬಂದಿವೆ ಎಂಬುದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆಯ್ಕೆ ಮಾಡುವುದು ಕಷ್ಟದ ಕೆಲಸ. ಹೈಪವರ್ ಕಮಿಟಿ ರಚಿಸಿ, ಸಮಿತಿ ಜೊತೆ ಚರ್ಚಿಸಿದರೆ ಸಲಹೆಗಳು ಬರುತ್ತವೆ. ಹೈಪವರ್ ಕಮಿಟಿ ರಚಿಸುವ ಸಮಯ ಮೀರಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಯವರನ್ನು ಭೇಟಿ‌ ಮಾಡಿಲ್ಲ. ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳಿವೆ. ಯಾವುದಾದರು ತೀರ್ಮಾನ ತೆಗೆದುಕೊಳ್ಳುವಾಗ ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕಾಗುತ್ತದೆ. ಅವರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು‌

ಬೆಳ್ಳೂರು ಕ್ರಾಸ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ತಮಗೆ ವಹಿಸಿದ ನಿಗದಿತವಾದ ಜವಾಬ್ದಾರಿಯನ್ನು ಅಧಿಕಾರಿಗಳು ಮಾಡದೇ ಇದ್ದಾಗ, ಅದರಿಂದ ಬೇರೆ ರೀತಿಯ ತೊಂದರೆಗಳು ಉಂಟಾದಾಗ ಅವರನ್ನು ಅಮಾನತುಗೊಳಿಸಲಾಗುತ್ತದೆ. ಇಲಾಖಾ ವಿಚಾರಣೆ ನಡೆಯುತ್ತದೆ. ದೊಡ್ಡ ಪ್ರಕರಣಗಳಲ್ಲಿ ಸಿಐಡಿಯವರು ತನಿಖೆ ಮಾಡುತ್ತಾರೆ. ತನಿಖೆಯ ವರದಿಯಲ್ಲಿ ತಪ್ಪು ಕಂಡು ಬಂದಿಲ್ಲ ಎಂದಾದರೆ ಅಮಾನತು ಆದೇಶ ಪಡೆಯಲಾಗುತ್ತದೆ. ಇದು ಇಲಾಖೆಯಲ್ಲಿ ನಡೆಯುವ ಪ್ರಕ್ರಿಯೆ ಎಂದರು.

click me!