
ಬೆಂಗಳೂರು (ಜೂ.30): ರಾಜ್ಯ ಒಕ್ಕಲಿಗರ ಸಂಘದಲ್ಲಿ ಕೆಲ ಪದಾಧಿಕಾರಿಗಳು ನಡೆಸಿರುವ ಎಲ್ಲ ಹಗರಣಗಳ ದಾಖಲೆಗಳು ನನ್ನ ಬಳಿ ಇವೆ. ಹೋರಾಟ ಮುಂದುವರೆಸೋಣ ಎಂದರೆ ಅದಕ್ಕೆ ನಾನು ಸಿದ್ಧವಾಗಿದ್ದೇನೆ ಎಂದು ನಿರ್ಮಾಪಕರೂ ಆಗಿರುವ ಸಂಘದ ನಿರ್ದೇಶಕ ಉಮಾಪತಿ ಶ್ರೀನಿವಾಸಗೌಡ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಂಘದಲ್ಲಿ ನಡೆದಿರುವ ಹಗರಣಗಳನ್ನು ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳೋಣ ಎಂದರೆ ಅದಕ್ಕೆ ತಲೆ ಬಾಗುತ್ತೇನೆ. ಎಲ್ಲ ಹಗರಣಗಳ ದಾಖಲೆಗಳು ನನ್ನ ಬಳಿ ಇವೆ. ಹೋರಾಟ ಮುಂದುವರಿಸೋಣ ಎಂದರೆ ಅದಕ್ಕೆ ನಾನು ಸಿದ್ಧವಾಗಿದ್ದೇನೆ. ಅವರು ನಡೆಸಿರುವ ಹಗರಣಗಳನ್ನು ಇಂಚಿಂಚೂ ಮಾಧ್ಯಮದ ಮುಂದೆ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಶ್ರೀನಿವಾಸ್ ಅವರು ಒಳ್ಳೆಯ ಮನುಷ್ಯ. ಆದರೆ ಅವರಿಗೆ ಕೆಲಸ ನಿರ್ವಹಿಸಲು ಸ್ವಾತಂತ್ರ್ಯ ಸಿಗುತ್ತಿಲ್ಲ. ಸಂಘದ ಪದಾಧಿಕಾರಿ ಶ್ರೀನಿವಾಸ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಶ್ರೀಧರ್ ಕಥೆ ಏನು ಎಂದು ಮೈಸೂರಿನವರಿಗೆ, ಸಂಘದವರಿಗೆ ಚೆನ್ನಾಗಿ ತಿಳಿದಿದೆ. ಮೂರ್ನಾಲ್ಕು ಪರ್ಸೆಂಟ್ ಇಲ್ಲದೆ ಯಾವುದಕ್ಕೂ ಸಹಿ ಹಾಕುವುದಿಲ್ಲ. ನಮ್ಮ ತಂಡದಲ್ಲಿ ಉಳಿದುಕೊಳ್ಳಲು ಸ್ವತಃ ನನ್ನ ಬಳಿಯೇ 12.5 ಲಕ್ಷ ರು. ತೆಗೆದುಕೊಂಡ ಮಹಾನುಭಾವ ಇವರು ಎಂದು ಆರೋಪಿಸಿದರು.
ಒಕ್ಕಲಿಗರ ಸಂಘದ ಅಭಿವೃದ್ಧಿಗೆ 3 ಕೋಟಿ ರು. ಬೆಲೆ ಬಾಳುವ ಆಸ್ತಿಯನ್ನು ನಾವು ದಾನ ಮಾಡಿದ್ದೇವೆ. ಇದಕ್ಕೆ ದಾಖಲೆ ಕೊಡಿ ಎಂದು ಶ್ರೀಧರ್ ಕೇಳಿದ್ದಾರೆ. ಸಂಘದ ಅಧ್ಯಕ್ಷರು, ಎಲ್ಲ ನಿರ್ದೇಶಕರಿಗೆ ನಾನು ನೀಡಿರುವ ಮೂರು ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದೇನೆ. ಒಕ್ಕಲಿಗರ ಸಂಘದ ಅಭಿವೃದ್ಧಿಗೆ 2017 ರಲ್ಲಿ ನಾವು ಈ ದಾನ ನೀಡಿದ್ದೇವೆ ಎಂದು ತಿರುಗೇಟು ನೀಡಿದರು.
ನನಗೆ ಮಾನಸಿಕ ತೊಂದರೆ ಇದೆ ಎಂದು ಶ್ರೀಧರ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಆಸ್ಪತ್ರೆಗೆ ನೀವೂ ಬನ್ನಿ ಎಂದು ಪಂಥಾಹ್ವಾನ ನೀಡಿದ ಶ್ರೀನಿವಾಸ್, ಡೆಂಟಲ್ ಕಾಲೇಜಿನ ಲಂಚದ ವಿಷಯಕ್ಕೆ ಸಂಬಂಧಿಸಿದ ಆರೋಪ ಸಾಬೀತುಪಡಿಸಿದರೆ ಅವರು ಹೇಳಿದಂತೆ ಕೇಳುತ್ತೇನೆ. ನನಗೆ ಸಂಘದ ಅಧ್ಯಕ್ಷ ಆಗಬೇಕು ಎಂಬ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ