ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ನ್ಯಾಯಾಲಯದಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ. 21ನೇ ಸಿಸಿಹೆಚ್ ಕೋರ್ಟ್ ನಿಂದ ಆದೇಶ ತಂದಿದ್ದಾರೆ.
ಬೆಂಗಳೂರು (ಏ.11): ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ನ್ಯಾಯಾಲಯದಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ. 21ನೇ ಸಿಸಿಹೆಚ್ ಕೋರ್ಟ್ ನಿಂದ ಈ ಆದೇಶ ತಂದಿದ್ದಾರೆ. ನಟ ಸುದೀಪ್ ವಿರುದ್ಧ ಬೆದರಿಕೆ ಪತ್ರ ಆಧರಿಸಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿ ಸುದೀಪ್ ವಿರುದ್ಧ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಆದೇಶ ಹೊರಡಿಸಲಾಗಿದೆ. ಕಿಚ್ಚನ ಪರ ಈ ಕೇಸ್ನಲ್ಲಿ ವಕೀಲ ಚನ್ನಬಸಪ್ಪ ನ್ಯಾಯಾಲಯದಲ್ಲಿ ವಾದಿಸಿದ್ದರು.
ತನ್ನ ವಿರುದ್ಧದ ಸುದ್ದಿ ಪ್ರಸಾರ ಮಾಡದಂತೆ ಕಿಚ್ಚ ಸುದೀಪ್ ಕೋರ್ಟ್ ಮೊರೆ ಹೋಗಿದ್ದರು. ಅನಾಮದೇಯ ಪತ್ರ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಸಂಬಂಧ ಸುದ್ದಿ ಪ್ರಸಾರಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಯೋ ಹಾಲ್ ಕೋರ್ಟ್ ಗೆ ಸುದೀಪ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿದ್ದು, ಈ ಆದೇಶ ಹೊರ ಬಿದ್ದಿದೆ. ಸುದೀಪ್ ಕುಟುಂಬಕ್ಕೆ ಬಂದ ಪತ್ರದಲ್ಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಪ್ರಸ್ತಾಪವಿದೆ. ಪತ್ರದಲ್ಲಿನ ವಿಚಾರ ಪ್ರಸಾರಕ್ಕೆ ತಡೆ ಕೇಳಿ ಕಿಚ್ಚ ಸುದೀಪ್ ಕೋರ್ಟ್ ಮೊರೆ ಹೋಗಿದ್ದರು.
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪ್ರಕರಣ ಸಂಬಂಧ ಸಿಸಿಬಿ ತನ್ನ ತನಿಖೆ ಮುಂದುವರಿಸಿದ್ದು, ಕೇಸ್ನಲ್ಲಿ ಒಂದೊಂದೇ ಸುಳಿವುಗಳು ದೊರೆಯುತ್ತಿವೆ. ನಟ ಸುದೀಪ್ಗೆ ಬೆದರಿಕೆ ಪತ್ರ ನೀಡಲು ಸ್ವಿಫ್ಟ್ ಕಾರು ಬಳಕೆ ಮಾಡಲಾಗಿದೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಕಾರಿನ ನಂಬರ್ ಪ್ಲೇಟ್ ಅನ್ನು ದುಷ್ಕರ್ಮಿಗಳು ಬದಲಿಸಿದ್ದಾರೆ ಎಂದೂ ತಿಳಿದುಬಂದಿದೆ.
ಬೆಂಗಳೂರಿನ ದೊಮ್ಮಲೂರು ಪೋಸ್ಟ್ ಆಫೀಸ್ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್ಗೆ ಪತ್ರ ಹಾಕಲಾಗಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆದರೆ, ಸಿಸಿ ಕ್ಯಾಮೆರಾ ದೃಶ್ಯವನ್ನು ಆಧರಿಸಿ ತನಿಖೆ ನಡೆಸಲು ಹೋದ ಸಿಸಿಬಿ ಪೊಲೀಸರಿಗೆ ಶಾಕ್ ಕಾದಿದೆ. ಏಕೆಂದರೆ, ಸ್ವಿಫ್ಟ್ ಕಾರು ಬೆಂಗಳೂರಿನ ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿದೆ ಎಂಬುದು ಪತ್ತೆಯಾಗಿದೆ. ಆದರೆ, ಆ ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತನಿಗೂ ಪತ್ರಕ್ಕೂ ಸಂಬಂಧವಿಲ್ಲ ಅನ್ನೋದು ಪತ್ತೆಯಾಗಿದೆ.
ಕಿಚ್ಚ ಸುದೀಪ್ ಜಾಹೀರಾತು, ಸಿನಿಮಾ ಪ್ರದರ್ಶನಕ್ಕೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್!
ಈ ಹಿನ್ನೆಲೆ ಆರೋಪಿಗಳು ಸ್ವಿಫ್ಟ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಪೋಸ್ಟ್ ಮಾಡಲು ಬಳಸಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಸದ್ಯ, ಈ ಸುಳಿವು ದೊರೆತಿದ್ದು, ಆರೋಪಿಗಳು ಯಾರು ಎನ್ನುವುದು ಇನ್ನಷ್ಟೇ ಪತ್ತೆಯಾಗಬೇಕಿದೆ.
ಚುನಾವಣಾ ರಣಕಣದಲ್ಲಿ ಕಿಚ್ಚನ ಕಿಚ್ಚು ಯಾವಾಗ...
ನಟ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪ್ರಚಾರ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಸುದೀಪ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹರಡಿದ ಹಿನ್ನೆಲೆ ಈ ಬೆದರಿಕೆ ಪತ್ರ ಕಳಿಸಲಾಗಿದೆ ಎನ್ನಲಾಗಿದೆ.