ಪೊಲೀಸ್‌ ವ್ಯವಸ್ಥೆಗೆ ರಣ ನೀತಿ ಬೇಕು: ಗೃಹ ಸಚಿವ ಅಮಿತ್‌ ಶಾ

By Govindaraj SFirst Published Jan 1, 2023, 3:00 AM IST
Highlights

ಸದಾ ಬದಲಾಗುವ ಅಪರಾಧ ಚಟುವಟಿಕೆ ಶೈಲಿ ಹಾಗೂ ಭಯೋತ್ಪಾದನೆ, ಗಡಿ ವ್ಯಾಜ್ಯಗಳ ಕುರಿತು ಪೊಲೀಸ್‌ ವ್ಯವಸ್ಥೆಯು ನಿರಂತರ ಸಂಶೋಧನೆ ಕೈಗೊಳ್ಳುತ್ತ ರಣನೀತಿ ರೂಪಿಸಿಕೊಂಡು ಸಜ್ಜಾಗಿದ್ದಲ್ಲಿ ಮಾತ್ರ ಸವಾಲನ್ನು ಎದುರಿಸಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. 

ಬೆಂಗಳೂರು (ಜ.01): ಸದಾ ಬದಲಾಗುವ ಅಪರಾಧ ಚಟುವಟಿಕೆ ಶೈಲಿ ಹಾಗೂ ಭಯೋತ್ಪಾದನೆ, ಗಡಿ ವ್ಯಾಜ್ಯಗಳ ಕುರಿತು ಪೊಲೀಸ್‌ ವ್ಯವಸ್ಥೆಯು ನಿರಂತರ ಸಂಶೋಧನೆ ಕೈಗೊಳ್ಳುತ್ತ ರಣನೀತಿ ರೂಪಿಸಿಕೊಂಡು ಸಜ್ಜಾಗಿದ್ದಲ್ಲಿ ಮಾತ್ರ ಸವಾಲನ್ನು ಎದುರಿಸಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಅವರು ಶನಿವಾರ ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲೆ (ಬಿಪಿ ಆರ್‌ ಆ್ಯಂಡ್‌ ಡಿ) ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿನ ಭಾರತ ಟಿಬೆಟ್‌ ಗಡಿ ರಕ್ಷಣಾ ದಳ (ಐಟಿಬಿಪಿ) ಬೆಂಗಳೂರು ವಿಭಾಗದ ಕಟ್ಟಡವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಧೋರಣೆ, ಸ್ವರೂಪ, ಚಲನಶೀಲ ಯೋಚನೆಗೆ ತಕ್ಕಂತೆ ಬದಲಾಗದಿದ್ದರೆ ಪೊಲೀಸ್‌ ವ್ಯವಸ್ಥೆ ಅಪ್ರಸ್ತುತವಾಗುವ ಅಪಾಯ ಹೆಚ್ಚು. ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವುದು ಸೇರಿ ಕೇಂದ್ರೀಯ ಸಶಸ್ತ್ರ ದಳ ಹಾಗೂ ಎಲ್ಲ ಪೊಲೀಸ್‌ ದಳಗಳ ನಡುವೆ ಸಮನ್ವಯ ಸಾಧಿಸಿ ಭದ್ರತೆ ಹೆಚ್ಚಿಸುವಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ ತರಬೇತಿ ಶಾಲೆಯು ಮಹತ್ವದ ಪಾತ್ರ ವಹಿಸಲಿದೆ. ಹೊಸ ಕಲಿಕೆ, ಸವಾಲುಗಳ ವಿನಿಮಯದ ಮೂಲಕ ಎಲ್ಲ ಪೊಲೀಸ್‌ ದಳಗಳು ಪರಿಪೂರ್ಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ, ಐಟಿಬಿಪಿ ಮಹಾನಿರ್ದೇಶಕ ಅನೀಶ್‌ ದಯಾಳ್‌, ಹೆಚ್ಚುವರಿ ಮಹಾನಿರ್ದೇಶಕ ನೀರಜ್‌ ಸಿನ್ಹಾ ಮತ್ತಿತರರು ಪಾಲ್ಗೊಂಡಿದ್ದರು.

ದಿಲ್ಲಿಗೆ ಬನ್ನಿ: ರಮೇಶ್‌ ಜಾರಕಿಹೊಳಿಗೆ ಅಮಿತ್‌ ಶಾ ಸೂಚನೆ

ಕೇಂದ್ರ ಪತ್ತೇದಾರಿ ತರಬೇತಿ ಸಂಸ್ಥೆ ಶಿಲಾನ್ಯಾಸ: ದೇವನಹಳ್ಳಿಯ ಆವತಿ ಗ್ರಾಮದಲ್ಲಿ ಬ್ಯೂರೋ ಆಫ್‌ ಪೊಲೀಸ್‌ ರೀಸಚ್‌ರ್‍ ಆ್ಯಂಡ್‌ ಡೆವಲಪ್‌ಮೆಂಟ್‌ (ಬಿಪಿಆರ್‌ಆ್ಯಂಡ್‌ಡಿ) ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರಿಯ ಪತ್ತೇದಾರಿ ತರಬೇತಿ ಸಂಸ್ಥೆಯ ಕಟ್ಟಡ ಶಿಲಾನ್ಯಾಸವನ್ನು ಅಮಿತ್‌ ಶಾ ನೆರವೇರಿಸಿದರು. ರಾಜ್ಯ ಸರ್ಕಾರ ಇಲ್ಲಿ 35 ಎಕರೆ ಪ್ರದೇಶವನ್ನು ಸಂಸ್ಥೆಗೆ ನೀಡಿದೆ. ಪೊಲೀಸ್‌ ಅಧಿಕಾರಿಗಳ ತನಿಖಾ ಗುಣಮಟ್ಟಸುಧಾರಿಸುವುದು ಕೇಂದ್ರದ ಪ್ರಮುಖ ಉದ್ದೇಶ. ಬಿಪಿಆರ್‌ಆ್ಯಂಡ್‌ಡಿ ಸಂಸ್ಥೆ ಅರ್ಬನ್‌ ಪೊಲೀಸಿಂಗ್‌ (ಸ್ಮಾರ್ಚ್‌ ಸಿಟಿ ಪೊಲೀಸಿಂಗ್‌) ಹಾಗೂ ಬ್ಲಾಕ್‌ ಚೈನ್‌ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವಾಗಿ ತಲೆ ಎತ್ತಲಿದೆ. ಇಲ್ಲಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ, ಸಿಪಿಓಗಳು ಹಾಗೂ ಸಿಎಪಿಎಫ್‌ಗಳ ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ಕೋರ್ಸ್‌ ನಡೆಯಲಿದೆ.

ಐಟಿಬಿಪಿ ಕಟ್ಟಡಗಳ ಉದ್ಘಾಟನೆ: ಬೆಂಗಳೂರಿನಲ್ಲಿರುವ ಇಂಡೋ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಪ್ರಾದೇಶಿಕ ಪ್ರಧಾನ ಕಚೇರಿಯ 120 ಸೈನಿಕರ ಬ್ಯಾರಕ್‌, 42 ವಸತಿ ಕಟ್ಟಡಗಳು, ಜಂಟಿ ಆಡಳಿತಾತ್ಮಕ ಕಟ್ಟಡ ಹಾಗೂ ಅಧಿಕಾರಿಗಳ, ಅಧೀನ ಅಧಿಕಾರಿಗಳ ಮೆಸ್‌ ಕಟ್ಟಡವನ್ನು ಗೃಹ ಸಚಿವ ಅಮಿತ್‌ ಶಾ ವರ್ಚುವಲ್‌ ಆಗಿ ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಮಹಾನಗರದ ಭದ್ರತಾ ವ್ಯವಸ್ಥೆ ಸವಾಲೊಡ್ಡಲಿವೆ. ಅದಕ್ಕಾಗಿ ಈಗಿನಿಂದಲೇ ಸಂಶೋಧನೆ ಕೈಗೊಂಡು ರಣನೀತಿ ರೂಪಿಸಿಕೊಳ್ಳದಿದ್ದರೆ ಸಮಸ್ಯೆ ಎದುರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲೂ ರಾಷ್ಟ್ರೀಯ ವಿಧಿವಿಜ್ಞಾನ ಸಹಯೋಗದಲ್ಲಿ ನಡೆಯುವ ಅಧ್ಯಯನಗಳು ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪೊಲೀಸ್‌ ತನಿಖೆಗಳಿಗೆ ನೆರವಾಗಲಿವೆ ಎಂದು ತಿಳಿಸಿದರು.

ಕೋಲ್ಕತಾ, ಹೈದರಾಬಾದ್‌, ಗಾಜಿಯಾಬಾದ್‌, ರಾಜಸ್ಥಾನ ಮತ್ತಿತರ ಕಡೆಗಳಲ್ಲಿರುವ ಸಿಡಿಟಿಐ ಸಂಸ್ಥೆಯು ಉತ್ತಮ ಕೊಡುಗೆ ನೀಡುತ್ತಿವೆ. ಕೇಂದ್ರ ಸರ್ಕಾರ ಇದೆಲ್ಲ ರಾಜ್ಯಗಳ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲು ಅಗತ್ಯ ಸಹಕಾರ, ವ್ಯವಸ್ಥೆ ಮಾಡಿಕೊಡಲಿದೆ. ಬಿಪಿಆರ್‌ ಆ್ಯಂಡ್‌ ಡಿ ಸಂಸ್ಥೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಯೋಗ, ಪ್ರೋತ್ಸಾಹ ನೀಡಲಿದೆ ಎಂದ ಅಮಿತ್‌ ಶಾ, ಕರ್ನಾಟಕದ ಸಿಡಿಟಿಐ ಸಂಸ್ಥೆಯು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಹಾರಾಷ್ಟ್ರ, ಗೋವಾ, ದಿಯು- ದಮನ್‌ಗಳಿಗೂ ಅಗತ್ಯ ಸಹಕಾರ ನೀಡಲಿದೆ ಎಂದರು.

ಅಮಿತ್‌ ಶಾ ಆಗಮನದಿಂದ ವಿಪಕ್ಷಗಳಲ್ಲಿ ನಡುಕ: ಬಿ.ವೈ.ವಿಜಯೇಂದ್ರ

ಹೊಸ ಸವಾಲು: ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ರಾಜ್ಯಪಟ್ಟಿಯಲ್ಲಿ ಸೇರಿಸಿರುವುದು ಸೂಕ್ತ. ಆದರೆ, ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ, ಆತಂಕವಾದ ಪಸರಿಸುವ ಸಂಘಟನೆಗಳ ನಿಯಂತ್ರಣ, ಹವಾಲಾ, ಮಾದಕ ದ್ರವ್ಯ ಜಾಲ ಹಾಗೂ ಗಡಿ ವಿವಾದ ಹೊಸ ಸವಾಲುಗಳನ್ನು ಒಡ್ಡಿವೆ. ಎಲ್ಲ ರಾಜ್ಯಗಳ ಭದ್ರತಾ ದಳದ ನಡುವೆ ಸಮನ್ವಯತೆ, ಸಹಕಾರ ಇಲ್ಲದಿದ್ದರೆ ಇವುಗಳನ್ನು ಎದುರಿಸುವುದು ಕಷ್ಟ. ಹೀಗಾಗಿ ಸತತವಾಗಿ ಈ ಸಹಕಾರ ಪ್ರಕ್ರಿಯೆ ಇರಲೇಬೇಕು. ಬಿಪಿ ಆರ್‌ ಆ್ಯಂಡ್‌ ಡಿ ಮುಖ್ಯಸ್ಥರು ಇಂತಹ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸುರಕ್ಷತಾ ಸಂಶೋಧನೆ, ಅಧ್ಯಯನಕ್ಕೆ ಒತ್ತು ನೀಡಬೇಕು. ಜತೆಗೆ ಸಂಸ್ಥೆಯ ಅಧಿಕಾರ ವ್ಯಾಪ್ತಿ, ವೇಗ ಎರಡೂ ಹೆಚ್ಚುವ ಅಗತ್ಯವಿದೆ ಎಂದರು.

click me!