ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಕಾರ್ಯಕ್ರಮ ನಡೆಯಿತು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಡಿ.29): ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಸಚಿವ ಎನ್ಎಸ್ ಬೋಸರಾಜು ಹಾಗೂ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಎರಡು ದಿನಗಳ ಕಾಲ ನಡೆಯುವ ವೈಜ್ಞಾನಿಕ ಸಮ್ಮೇಳನದಲ್ಲಿ ಮೌಢ್ಯತೆ ತೊಲಗಲಿ, ವೈಜ್ಞಾನಿಕತೆ ರೂಢಿ ಆಗಲಿ ಎಂಬ ವಿಚಾರದ ಬಗ್ಗೆ ಸಮಾಲೋಚನೆ ನಡೆಯಲಿದೆ. ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವ ಎನ್.ಎಸ್.ಬೋಸರಾಜು, ಸಮಾಜದಲ್ಲಿ ವಿಜ್ಞಾನವಲಯ ಸಾಕಷ್ಟು ಮುಂದುವರೆಯುತ್ತಿದ್ದು, ಆದರೆ ಕೆಲವು ಮೂಡನಂಬಿಕೆ ನಿರಂತರವಾಗಿ ನಡೆಯುತ್ತಿವೆ. ಇದರಿಂದ ಜನರಿಗೆ ಅನೇಕ ತೊಂದರೆಗಳಾಗುತ್ತಿದ್ದು, ಮೌಢ್ಯತೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಜನರು ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ಆಧುನಿಕ ತಾಂತ್ರಿಕ ಯುಗಮಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಖಗೋಳಶಾಸ್ತ್ರದ ಬಗ್ಗೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ. ರಾಯಚೂರಿನ ವಿಜ್ಞಾನ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಒಟ್ಟು 2.50 ಕೋಟಿ ರೂ.ಗಳ ಅನುಮೋದನೆ ದೊರೆತಿದ್ದು, ಕೇಂದ್ರ ಸರ್ಕಾರ ಶೇ. 60ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನದೊಂದಿಗೆ ಮೇಲ್ದರ್ಜೆಗೇರಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ದಲಿತ ನಾಯಕರ ಜೊತೆ ಸತೀಶ್ ಜಾರಕಿಹೊಳಿ ದೆಹಲಿಗೆ ದೌಡು; ಕನಕಪುರ ಬಂಡೆಗೆ ಲಗಾಮು ಹಾಕ್ತಾರಾ ಸಾಹುಕಾರ?
ಇನ್ನೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣಕುಮಾರ ಮಾತನಾಡಿ, ಭಾರತ ದೇಶವು ಅತ್ಯಂತ ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಹಾದಿಯಲ್ಲಿ ಮುಂದುವರೆಯುತ್ತಿದ್ದು, ಚಂದ್ರಯಾನವನ್ನು ಯಶಸ್ವಿಗೊಳಿಸುವ ಮೂಲಕ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತದ್ದಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಮೂಡನಂಬಿಕೆಗಳನ್ನು ತೊಲಗಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಮೌಢ್ಯ ಮುಕ್ತ ಸಮಾಜಕ್ಕಾಗಿ ನಮ್ಮ ಹೋರಾಟ
ಲಿಂಗಸೂಗೂರು ಪಟ್ಟಣದಲ್ಲಿ ನಡೆದ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೌಢ್ಯತೆಯಿಂದ ಹೊರಬಂದು ದೇಶವನ್ನು ಕಟ್ಟುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಮಾಜದ ಪರಿವರ್ತನೆಗೆ ಮುಂದಾಗಬೇಕು. ವೈಜ್ಞಾನಿಕ ಸಮ್ಮೇಳನಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡಬೇಕು. ಸರ್ಕಾರ ಹತ್ತಾರು ಸಮ್ಮೇಳನ ಮಾಡುತ್ತೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತೆ, ಮುಂದಿನ ದಿನಗಳಲ್ಲಿ ಸರ್ಕಾರ ವೈಜ್ಞಾನಿಕ ಸಮ್ಮೇಳನಕ್ಕೆ ನಂಬರ್ ಒನ್ ಸ್ಥಾನ ನೀಡಬೇಕು. ನಾನು ವೈಜ್ಞಾನಿಕ ವಿಚಾರಕ್ಕಾಗಿ ನಾನು 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ವಿಜ್ಞಾನ ಗ್ರಾಮದ ಅಭಿವೃದ್ಧಿಗಾಗಿ ನಾನು ನಮ್ಮ ಇಲಾಖೆಯಿಂದ 5 ಕೋಟಿ ರೂಪಾಯಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಿಎಂ ಅನುಮತಿ ಕೊಟ್ಟರೇ ವಿಜ್ಞಾನ ಗ್ರಾಮಕ್ಕೆ ಪ್ರತಿ ವರ್ಷವೂ 5 ಕೋಟಿ ರೂಪಾಯಿ ನೀಡುತ್ತೇನೆ. ಹಿಂದಿನ ನಂಬಿಕೆಗಳೇ ಈಗ ಮೂಢ ನಂಬಿಕೆಗಳಾಗಿ ಪರಿವರ್ತನೆ ಆಗಿವೆ. ಮೂಢನಂಬಿಕೆಗಳಿಂದ ನಾವು ಇಂದು ಹೊರ ಬರಬೇಕಾಗಿದೆ. ನಮ್ಮ ನಡೆ ವಿಜ್ಞಾನದ ಕಡೆ ಇರಬೇಕು ಎಂದು ತಿಳಿಸಿದರು.
ಸೋನಿಯಾ, ರಾಹುಲ್, ಸುರ್ಜೇವಾಲಾ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯನ ದಾರಿ ತಪ್ಪಿಸಿದ್ದಾರೆ!
ಇನ್ನು ವೇದಿಕೆ ಮೇಲೆ ಲಿಂಗಸುಗೂರು ಶಾಸಕ ಡಿ.ಮಾನಪ್ಪ ವಜ್ಜಲ್, ಮಾನವಿ ಶಾಸಕ ಹಂಪಯ್ಯ ನಾಯಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪನಾ ಅಧ್ಯಕ್ಷ ಡಾ.ಹುಲಿಕಲ್ ನಟರಾಜ, ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ಡಿ.ಎಸ್ ಹೂಲಗೇರಿ, ಅಮರೇಗೌಡ ಬಯ್ಯಾಪುರ ಉಪಸ್ಥಿತರಿದ್ದರು.