Karnataka Ethanol Policy : ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗೆ ಸರ್ಕಾರದ ಸಿಹಿಸುದ್ದಿ

By Suvarna NewsFirst Published Dec 17, 2021, 10:45 AM IST
Highlights
  • ತಿಂಗಳೊಳಗೆ ಎಥೆನಾಲ್‌ ನೀತಿ ಜಾರಿಗೆ ನಿರ್ಧಾರ
  • ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗೆ ಸಿಹಿಸುದ್ದಿ
  • ಸರ್ಕಾರ, ಕಾರ್ಖಾನೆ, ರೈತರಿಬ್ಬರಿಗೆ ಅನುಕೂಲ: ಸಕ್ಕರೆ ಸಚಿವ ಮುನೇನಕೊಪ್ಪ

 ಸುವರ್ಣಸೌಧ( ಡಿ.17):  ಕಬ್ಬು (Cane) ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳ (Sugar Cane)  ಮಾಲಿಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಎಥೆನಾಲ್‌ ಉತ್ಪಾದನೆ ಪ್ರೋತ್ಸಾಹಿಸಲು ಪ್ರತ್ಯೇಕ ನೀತಿ ಜಾರಿಗೊಳಿಸಲು ನಿರ್ಧರಿಸಿದೆ. ಇನ್ನೊಂದು ತಿಂಗಳಲ್ಲಿ ನೀತಿ ಜಾರಿಗೊಳಿಸಲು ಗುರುವಾರ ಸುವರ್ಣ ಸೌಧದಲ್ಲಿ ಪ್ರಥಮ  ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಬ್ಬು, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ (Shankar Patil Munenakoppa) ಮಾತನಾಡಿ, ಎಥೆನಾಲ್‌ ಉತ್ಪಾದನೆ ಇಂದು ಅಗತ್ಯ ಹಾಗೂ ಅನಿವಾರ್ಯ. ಪೆಟ್ರೋಲ್‌ (Petrol) ಹಾಗೂ ಡೀಸೆಲ್‌ (Diesel) ಬಳಕೆ ಕಡಿಮೆ ಮಾಡಬೇಕಿದೆ. ಪೆಟ್ರೋಲ್‌ (Petrol), ಡೀಸೆಲ್‌ ಸೇರಿದಂತೆ ಇತರೆ ತೈಲೋತ್ಪನ್ನಗಳಿಗೆ ಪರ್ಯಾಯವಾಗಿ ಎಥೆನಾಲ್‌ ಬಳಸಬಹುದಾಗಿದೆ. ಇದರಿಂದ ಇಂಧನ ಸಮಸ್ಯೆ ಉತ್ತರ ದೊರೆಯಲಿದ್ದು. ಹೆಚ್ಚಿನ ಉದ್ಯೋಗ (Employment) ಸೃಷ್ಟಿಯಾಗಲಿದೆ.

ಸರ್ಕಾರಕ್ಕೂ ಆದಾಯ (Income) ಬರುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ (Govt Of India) ಯೋಜನೆ ರೂಪಿಸಿ ಎಥೆನಾಲ್‌ (Ethanol) ಉತ್ಪಾದಿಸುವ ಕಾರ್ಖಾನೆಗಳಿಗೆ ಕೆಲವೊಂದಿಷ್ಟು ವಿನಾಯ್ತಿ ನೀಡಿದೆ. ಅದರಂತೆ ರಾಜ್ಯದಲ್ಲೂ  ಎಥೆನಾಲ್‌ ನೀತಿ ಜಾರಿಗೊಳಿಸಲಾಗುವುದು. ಈ ಮೂಲಕ ಎಥೆನಾಲ್‌ ತಯಾರಿಕೆಗೆ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಒಂದು ತಿಂಗಳೊಳಗೆ ನೀತಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಕಬ್ಬು, ಮೆಕ್ಕೆ ಜೋಳ, ಭತ್ತ ಬೆಳೆಗಾರರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಎಥೆನಾಲ್‌ ಉತ್ಪಾದನೆ ಉತ್ತಮವಾಗಲಿದೆ. ರೈತರು (Farmers) ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ (Price) ಲಭಿಸಬೇಕು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ  (CM Bommai) ಸೂಚನೆ ಮೇರೆಗೆ ಎಥೆನಾಲ್ ನೀತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಒಂದು ತಿಂಗಳೊಳಗೆ ನೀತಿ ಜಾರಿಗೊಳಿಸಲಾಗುವುದು ಎಂದು ನುಡಿದರು.  ಎಥೆನಾಲ್ ನೀತಿ ಜಾರಿಗೊಳಿಸುವಿಕೆಯಿಂದ ಕಬ್ಬು ಬೆಳೆದ ರೈತರಿಗೆ (Farmers) ಸಮಯಕ್ಕೆ ಸರಿಯಾಗಿ ಹಣ (Money) ಲಭಿಸಲಿದೆ. ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯಕ ವಾಗಲಿದೆ ಎಂದರು.

ಅಧ್ಯಯನಕ್ಕೆ ತಂಡ:  ಈಗಾಗಲೇ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಎಥೆನಾಲ್ ಉತ್ಪಾದನೆ ಮಾಡುತ್ತಿರುವ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು. ಸಮಿತಿ ನೀಡಿದ ವರದಿ ಪರಿಶೀಲಿಸಿ, ತ್ವರಿತವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ (laxman Savadi), ಸಚಿವರಾದ ಉಮೇಶ್‌ ಕತ್ತಿ, ಶಿವರಾಮ… ಹೆಬ್ಬಾರ್‌, ಶಾಸಕ ಪಿ.ರಾಜೀವ್‌, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರೈತ ಮುಖಂಡರು, ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರು, ಇಲಾಖೆಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

ಕಬ್ಬಿನ ಎಫ್‌ ಆರ್‌ಪಿ ಹೆಚ್ಚಳ :  

ಕಬ್ಬಿನ ಎಫ್‌ಆರ್‌ಪಿ (Fair and Remunerative Price) ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ (Farmers) ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.  ಎಫ್‌ಆರ್‌ಪಿ (FRP) ಹೆಚ್ಚಳ, ಫಸಲ್‌ ಭಿಮಾ ಯೋಜನೆ ವ್ಯಾಪ್ತಿಗೆ ಕಬ್ಬನ್ನು ಸೇರ್ಪಡೆ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಭಾಗಗಳಿಂದ ಬಂದಿದ್ದ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.

ತಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕೆಂಬ ಆಗ್ರಹಕ್ಕೆ ಮಣಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂಜೆ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸಿ ರೈತರ ಬೇಡಿಕೆ, ಅವರ ಸಮಸ್ಯೆಗಳನ್ನು ಆಲಿಸಿ, ಶೀಘ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತ ನಾಯಕರ ಜೊತೆ ಸಭೆ ನಡೆಸಿ ಪರಿಹರಿಸುವ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಭರವಸೆಯ ಮೇಲೆ ವಿಶ್ವಾಸವಿಟ್ಟು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಸ್‌ ಪಡೆದುಕೊಂಡಿದ್ದೇವೆ. ಆದರೆ ತಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸದಿದ್ದರೆ ಪುನಃ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

click me!