
ಮೈಸೂರು(ಫೆ.6): ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲದಿಂದ ಚರ್ಚೆಯಾಗುತ್ತಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಿಎಂ ಪುತ್ರ, ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಇಂದು ತೆರೆ ಎಳೆದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 'ನಮ್ಮ ತಂದೆಯವರೇ ಪೂರ್ಣ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದು ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಿರುವ ಸೆಟ್ಲಡ್ ವಿಚಾರ. ಹೈಕಮಾಂಡ್ ಈ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದೆ' ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಸಿಎಂ ಬದಲಾವಣೆಗಾಗಿ ದೆಹಲಿ ಮಟ್ಟದಲ್ಲಿ ನಡೆದಿದ್ದ ಪ್ರಯತ್ನಗಳ ಬಗ್ಗೆಯೂ ಯತೀಂದ್ರ ಮುಕ್ತವಾಗಿ ಮಾತನಾಡಿದ್ದಾರೆ. 'ಯಾರೋ ಕೆಲವರು ನಾಯಕತ್ವ ಬದಲಾವಣೆ ಮಾಡಲು ಗಂಭೀರ ಪ್ರಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಅವರ ಯಾವುದೇ ಬೇಡಿಕೆಗೆ ಮನ್ನಣೆ ನೀಡಿಲ್ಲ. ಸದ್ಯಕ್ಕೆ ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ, ಕೇವಲ ಮಾಧ್ಯಮಗಳಲ್ಲಿ ಮಾತ್ರ ಈ ವಿಚಾರ ಸದ್ದು ಮಾಡುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಕುಟುಂಬಕ್ಕೆ ನ್ಯಾಯಾಲಯದಿಂದ ಕ್ಲೀನ್ ಚೀಟ್ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, ದೂರುದಾರರು ಮೇಲ್ಮನವಿ ಹೋಗುತ್ತೇವೆ ಎಂದು ಹೇಳಿದ್ದಾರೆ. ಆ ಪ್ರಕ್ರಿಯೆನೂ ಮುಗಿಯಲಿ. ಆ ನಂತರ ಸೈಟ್ ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆ. ಈಗ ಸದ್ಯಕ್ಕಂತು ಆ ವಿಚಾರವನ್ನ ನಾವು ಚರ್ಚೆ ಮಾಡಿಲ್ಲ. ಪ್ರಕರಣದಲ್ಲಿ ಇನ್ನೂ ಕಾನೂನು ಪ್ರಕ್ರಿಯೆಗಳು ಬಾಕಿ ಇದೆ. ಮೊದಲು ಅವೆಲ್ಲಾ ಮುಗಿಯಲಿ. ಸದ್ಯಕ್ಕೆ ನಮ್ಮ ತಾಯಿಗೆ ಈ ಪ್ರಕರಣದಿಂದ ಕ್ಲೀನ್ ಚೀಟ್ ಸಿಕ್ಕಿರುವುದು ಸಂತೋಷ ತಂದಿದೆ.
ಸಚಿವ ಜಾರ್ಜ್ ರಾಜೀನಾಮೆ ವಿಚಾರದಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಆ ಬಗ್ಗೆ ಜಾರ್ಜ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯಾವತ್ತೂ ಜಾರ್ಜ್ ಅವರ ಬಗ್ಗೆ ಅವರ ಇಲಾಖೆಯ ಬಗ್ಗೆ ಯಾವ ಚರ್ಚೆಯೂ ಮಾಡಿಲ್ಲ. ಸುಖಾಸುಮ್ಮನೆ ಬಿಜೆಪಿಯವರು ನನ್ನ ಹೆಸರನ್ನು ಎಳೆದು ತಂದಿದ್ದಾರೆ. ನನ್ನ ತಂದೆಯವರನ್ನು ಟಾರ್ಗೆಟ್ ಮಾಡಲು ಬಿಜೆಪಿಗೆ ಆಗಲ್ಲ. ಈ ಕಾರಣದಿಂದ ಎಲ್ಲಾ ವಿಚಾರದಲ್ಲೂ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ಜಾರ್ಜ್ ಅವರ ವಿಚಾರದಲ್ಲೂ ಆಗಿರುವುದು ಅದೇ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಇವಿಎಂ (EVM) ಮತಯಂತ್ರಗಳ ಹ್ಯಾಕಿಂಗ್ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಎಲ್ಲಾ ಚುನಾವಣೆಗಳಲ್ಲೂ ಇವಿಎಂ ರದ್ದಾಗಬೇಕು. ಅದರ ಬದಲು ಬ್ಯಾಲೇಟ್ ಪೇಪರ್ ಬಳಕೆ ಮತ್ತೆ ಬರಬೇಕು. ಹೀಗಾಗಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬ್ಯಾಲೇಟ್ ಪೇಪರ್ ಬಳಸಲು ನಿರ್ಧಾರಿಸಲಾಗಿದೆ. ಮುಂದೆ ಇದೇ ರೀತಿ ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲೂ ಬ್ಯಾಲೇಟ್ ಪೇಪರ್ ಬಳಕೆಯಾಗಬೇಕು. ಇವಿಎಂ ಮತಯಂತ್ರದಲ್ಲಿ ಸಾಕಷ್ಟು ದೋಷಗಳಿವೆ. ಇವಿಎಂನ್ನ ಹ್ಯಾಕ್ ಮಾಡಬಹುದು. ದೋಷ ಪೂರಿತ ವ್ಯವಸ್ಥೆ ಇದ್ದ ಮೇಲೆ ಅದನ್ನ ಯಾಕೆ ಇಟ್ಟುಕೊಳ್ಳಬೇಕು? ಮೊದಲಿನ ರೀತಿ ಈಗ ಬ್ಯಾಲೇಟ್ ಬಾಕ್ಸ್ ಗಳನ್ನ ಕಳ್ಳತನ ಮಾಡಲು ಆಗಲ್ಲ. ಏಕೆಂದರೆ ನಮ್ಮ ವ್ಯವಸ್ಥೆ ಬಹಳ ಬಿಗಿ ಇದೆ. ಆದರೆ ತಾಂತ್ರಿಕ ಕಳ್ಳತನ ಮಾಡಲು ಇವಿಎಂನಲ್ಲಿ ಸಾಧ್ಯವಿದೆ. ಈ ಎಲ್ಲಾ ಕಾರಣದಿಂದ ಇವಿಎಂ ರದ್ದಾಗಬೇಕು.ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ