
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಕಳ್ಳತನ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಪ್ರಯಾಣಿಕರ ಲಗೇಜ್ ಬ್ಯಾಗ್ನಲ್ಲಿದ್ದ ಅಮೂಲ್ಯ ಚಿನ್ನ ಮತ್ತು ವಜ್ರಾಭರಣಗಳು ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಮೂಲದ ಈ ಮಹಿಳೆ ಕಳೆದ ನವೆಂಬರ್ ತಿಂಗಳಲ್ಲಿ ದುಬೈ ಮೂಲಕ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದಲ್ಲಿ ತನ್ನ ಮಗನೊಂದಿಗೆ ವಾಸವಾಗಿದ್ದ ಅವರು, ಇತ್ತೀಚೆಗೆ ರಾಜ್ಯಕ್ಕೆ ವಾಪಸ್ ಆಗಿದ್ದು, ಇದೀಗ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದಾರೆ. ಮಹಿಳೆ ಚೆಕ್-ಇನ್ ಪ್ರಕ್ರಿಯೆಯ ವೇಳೆ ಲಗೇಜ್ ಬ್ಯಾಗ್ನೊಳಗೆ ಚಿನ್ನಾಭರಣ ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿಗೆ ತೋರಿಸಿ, ನಿಯಮಾನುಸಾರ ಬ್ಯಾಗ್ಗೆ ಟ್ಯಾಗ್ ಮಾಡಿಸಿದ್ದರು. ನಂತರ ಆ ಬ್ಯಾಗ್ ಅನ್ನು ವಿಮಾನದ ಲಗೇಜ್ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ ದುಬೈ ತಲುಪಿದ ಬಳಿಕ ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರೊಳಗೆ ಇರಿಸಿದ್ದ ಚಿನ್ನ ಮತ್ತು ವಜ್ರಾಭರಣಗಳು ಸಂಪೂರ್ಣವಾಗಿ ಮಾಯವಾಗಿರುವುದು ಗೊತ್ತಾಗಿದೆ.
ಕಳ್ಳತನಗೊಂಡ ವಸ್ತುಗಳಲ್ಲಿ ಸುಮಾರು 790 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ಸೇರಿವೆ. ಒಟ್ಟಾರೆ ಈ ಕಳ್ಳತನದ ಮೌಲ್ಯ ಕೋಟಿ ರೂಪಾಯಿಗೆ ಸಮೀಪದಲ್ಲಿದೆ ಎಂದು ಅಂದಾಜಿಸಲಾಗಿದೆ. ಚೆಕ್-ಇನ್ ನಂತರ ಲಗೇಜ್ ವಿಮಾನಕ್ಕೆ ಸೇರಿಸುವ ಪ್ರಕ್ರಿಯೆಯ ಮಧ್ಯೆ ಈ ಕಳ್ಳತನ ನಡೆದಿರುವ ಸಾಧ್ಯತೆ ಹೆಚ್ಚಿರುವುದರಿಂದ, ವಿಮಾನ ನಿಲ್ದಾಣದ ಸಿಬ್ಬಂದಿಯಿಂದಲೇ ಚಿನ್ನಾಭರಣ ಕಳ್ಳತನವಾಗಿರಬಹುದೆಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಮಹಿಳೆ ಬೆಂಗಳೂರಿನ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಲಗೇಜ್ ಹ್ಯಾಂಡ್ಲಿಂಗ್ ಸಿಬ್ಬಂದಿ, ಸಿಸಿಟಿವಿ ದೃಶ್ಯಾವಳಿ ಹಾಗೂ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ದೊಡ್ಡ ಪ್ರಮಾಣದ ಕಳ್ಳತನ ನಡೆದಿರುವುದು ಪ್ರಯಾಣಿಕರ ಭದ್ರತೆ ಮತ್ತು ಲಗೇಜ್ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದ ತನಿಖೆಯಿಂದ ಇನ್ನಷ್ಟು ಸತ್ಯಾಂಶಗಳು ಹೊರಬೀಳುವ ನಿರೀಕ್ಷೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ