Punyakoti Dattu Yojana: ಗೋರಕ್ಷಣೆಗೆ ಸರ್ಕಾರಿ ನೌಕರರ ವಂತಿಗೆ

By Govindaraj SFirst Published Nov 17, 2022, 9:24 AM IST
Highlights

ಗೋ ಸಂತತಿ ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಪುಣ್ಯಕೋಟಿ’ ದತ್ತು ಯೋಜನೆಗೆ ವಿವಿಧ ವೃಂದದ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರಿಂದ ಒಂದು ಬಾರಿಗೆ ಮಾತ್ರ ನಿರ್ದಿಷ್ಟ ಮೊತ್ತವನ್ನು ವೇತನದಿಂದ ಕಡಿತಗೊಳಿಸುವಂತೆ ಆದೇಶಿಸಿದೆ.

ಬೆಂಗಳೂರು (ನ.17): ಗೋ ಸಂತತಿ ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಪುಣ್ಯಕೋಟಿ’ ದತ್ತು ಯೋಜನೆಗೆ ವಿವಿಧ ವೃಂದದ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರಿಂದ ಒಂದು ಬಾರಿಗೆ ಮಾತ್ರ ನಿರ್ದಿಷ್ಟ ಮೊತ್ತವನ್ನು ವೇತನದಿಂದ ಕಡಿತಗೊಳಿಸುವಂತೆ ಆದೇಶಿಸಿದೆ. ಈ ಯೋಜನೆಗೆ ವಂತಿಗೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿಗೆ ಸಕಾರಾತ್ಮಕವಾಗಿ ‘ರಾಜ್ಯ ಸರ್ಕಾರಿ ನೌಕರರ ಸಂಘ’ ಸ್ಪಂದಿಸಿದ ಹಿನ್ನೆಲೆಯಲ್ಲಿ ಸರ್ಕಾರ ಬುಧವಾರ ಈ ಆದೇಶ ನೀಡಿದೆ.

ಆದೇಶದ ಪ್ರಕಾರ ‘ಎ’ ವೃಂದದ ಅಧಿಕಾರಿಗಳಿಗೆ 11,000 ರು, ‘ಬಿ’ವೃಂದದ ಅಧಿಕಾರಿಗಳಿಗೆ 4,000 ರು, ‘ಸಿ’ ವೃಂದದ ನೌಕರರಿಗೆ 400 ರುಗಳನ್ನು ನವೆಂಬರ್‌ ತಿಂಗಳ ವೇತನದಿಂದ ಕಡಿತ ಮಾಡುವಂತೆ ಆರ್ಥಿಕ ಇಲಾಖೆ ಆದೇಶಿಸಿದೆ. ಆದರೆ ವಂತಿಗೆ ಕಡಿತದಿಂದ ‘ಡಿ’ ವೃಂದದ ನೌಕರರಿಗೆ ವಿನಾಯಿತಿ ನೀಡಲಾಗಿದೆ. ನೌಕರರ ವೇತನದಿಂದ ವಂತಿಗೆ ಕಡಿತ ಮಾಡುವುದರಿಂದ ಒಟ್ಟಾರೆ ಸುಮಾರು 80-100 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆ ಇದೆ.

Karnataka Politics: ನಂಬಿದವರು ಕೈಬಿಟ್ಟಾರು: ಸಿದ್ದುಗೆ ಮುನಿಯಪ್ಪ ಎಚ್ಚರಿಕೆ

ಕಡ್ಡಾಯವಲ್ಲ: ಆದಾಗ್ಯೂ ವೇತನದಿಂದ ನಿಗದಿತ ವಂತಿಗೆಯನ್ನು ಕೊಡುವುದು ಕಡ್ಡಾಯವಲ್ಲ. ಕೊಡಲು ಇಚ್ಛಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಲಿಖಿತ ಮೂಲಕ ನ. 25ರೊಳಗೆ ಸಲ್ಲಿಸಬೇಕು. ಈ ರೀತಿ ಪತ್ರ ನೀಡಿದ ನೌಕರರ ವೇತನದಿಂದ ವಂತಿಗೆ ಕಡಿತ ಮಾಡದಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪಶು ಸಂಗೋಪನಾ ಇಲಾಖೆಗೆ ಜಮೆ: ನೌಕರರಿಂದ ಸಂಗ್ರಹವಾದ ಎಲ್ಲ ಮೊತ್ತಗಳು ಅಂತಿಮವಾಗಿ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ಮಾಡುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಕ್ಷಮ ಪ್ರಾಧಿಕಾರಿ ಖಾತೆಗೆ ಜಮೆ ಆಗಲಿದೆ.

ಬೊಮ್ಮಾಯಿ ಮನವಿಗೆ ಸ್ಪಂದನೆ: ಈ ವರ್ಷದ ಆಯವ್ಯಯ ಭಾಷಣದಲ್ಲಿ ಘೋಷಿಸಿದ ‘ಪುಣ್ಯಕೋಟಿ’ ದತ್ತು ಯೋಜನೆಗೆ ಸರ್ಕಾರಿ ನೌಕರರು ವಂತಿಗೆ ನೀಡುವ ಮೂಲಕ ಸಹಕರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಕಳೆದ ಅಕ್ಟೋಬರ್‌ 14ರಂದು ಪತ್ರ ಬರೆದು ವಂತಿಗೆ ಕಡಿತ ಮಾಡುವಂತೆ ಪತ್ರ ಬರೆದಿತ್ತು.

ಯಾರಿಗೆ ಎಷ್ಟು ವಂತಿಗೆ?
* ಎ ವೃಂದಕ್ಕೆ 11000 ರು.
* ಬಿ ವೃಂದಕ್ಕೆ 4000 ರು.
* ಸಿ ವೃಂದಕ್ಕೆ 400 ರು.
* ಡಿ ವೃಂದಕ್ಕೆ ರಿಯಾಯಿತಿ

Mysuru Bus Shelter: ಗುಂಬಜ್‌ ಬಸ್‌ ಶೆಲ್ಟರ್‌ ತೆರವಿಗೆ ನೋಟಿಸ್‌, ಪೊಲೀಸ್‌ ಭದ್ರತೆ

ವಂತಿಗೆ ಕಡಿತದಿಂದ ಸುಮಾರು 80-100 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆ ಇದೆ. ವಂತಿಗೆ ಕಡಿತ ಮಾಡುವ ಮುನ್ನ ಎಲ್ಲ ವೃಂದದ ಅಧಿಕಾರಿಗಳು ಹಾಗೂ ನೌಕರರ ಸಂಘದವರ ಜೊತೆ ಮಾತುಕತೆ ನಡೆಸಿ ವಂತಿಗೆ ಕಡಿತಕ್ಕೆ ಒಪ್ಪಿಗೆ ಪಡೆಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ 7ನೇ ವೇತನ ಆಯೋಗ ರಚಿಸಿ ಮುಂಬರುವ ಆಯವ್ಯಯದಲ್ಲಿ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರದ ಒಳ್ಳೆಯ ಯೋಜನೆಗೆ ಕೈ ಜೋಡಿಸಲು ವಂತಿಗೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದೇವೆ.
- ಸಿ.ಎಸ್‌. ಷಡಕ್ಷರಿ. ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

click me!