ಸ್ವ-ಇಚ್ಛೆಯಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ್ರೆ ಅಭ್ಯಂತರವಿಲ್ಲ: ದತ್ತಾತ್ರೇಯ ಹೊಸಬಾಳೆ

By Suvarna NewsFirst Published Oct 30, 2021, 6:35 PM IST
Highlights

* ಮತಾಂತರದ ಬಗ್ಗೆ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಪ್ರತಿಕ್ರಿಯೆ
* ಜನಸಂಖ್ಯೆ ನಿಯಂತ್ರಣ ಕಾಯ್ದೆ ವಿಚಾರವಾಗಿ ಮಾತನಾಡಿದ  ಹೊಸಬಾಳೆ
* ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ವಿಚಾರವಾಗಿ ಅಸಮಾಧಾನ 

ಧಾರವಾಡ, (ಅ.30): ಮತೀಯ ಅಲ್ಪಸಂಖ್ಯಾತರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ಒತ್ತಾಯಪೂರ್ವಕವಾಗಿ ಮತಾಂತರ ಮಾಡಿಸುವುದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಪ್ರಬಲವಾಗಿ ವಿರೋಧಿಸುತ್ತದೆ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತ ಸಹ ಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದರು.

ಧಾರವಾಡದ (Dharwad) ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದಿರುವ ಮೂರು ದಿನಗಳ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಕಾರ್ಯಕಾರಿ ಮಂಡಳದ ಸಭೆಯ ಕಲಾಪಗಳನ್ನು ಶನಿವಾರ ಪತ್ರಕರ್ತರಿಗೆ ವಿವರಿಸಿದರು.

ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಶ್ವ ಹಿಂದೂ ಪರಿಷತ್!

ಸ್ವ-ಇಚ್ಛೆಯಿಂದ ಯಾರಾದರೂ ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಆಮೀಷಗಳನ್ನು ಒಡ್ಡಿ ಒತ್ತಾಯಪೂರ್ವಕವಾಗಿ ಮತಾಂತರಗೊಳಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡಿ ಇತರ ಧರ್ಮಿಯರ ಸಂಖ್ಯಾಬಲ ಹೆಚ್ಚಿಸುವ ಅನೈತಿಕ ಕ್ರಮವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಾಟಿಕನದಲ್ಲಿ ಪೋಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೊಸಬಾಳೆ ಅವರು, ಒಂದು ದೇಶದ ಪ್ರಧಾನಿ ಬೇರೆ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚೆ ನಡೆಸಿದರೆ ದೇಶದ ಗೌರವ ಮತ್ತಷ್ಟು ಹೆಚ್ಚುತ್ತದೆ. ಇದರಲ್ಲಿ ತಪ್ಪೇನಿಲ್ಲ ಎಂದರು.

ಜನಸಂಖ್ಯೆ ನಿಯಂತ್ರಣ ಕಾಯಿದೆ ವಿಚಾರ.
ಪ್ರತಿ ದೇಶಕ್ಕೂ ತನ್ನದೇಯಾದ ಜನಸಂಖ್ಯೆ  ಕಾಯಿದೆ ಇದೆ. ಜನಸಂಖ್ಯೆ ಕಾಯಿದೆ ಬಗ್ಗೆ ನಾವೂ ಈ ಹಿಂದೆಯೇ ಠರಾವ್ ಮಾಡಿದ್ದೇವೆ. ಸಂಘದ ಹಿಂದಿನ ಬೈಠಕ್‌ಗಳಲ್ಲಿಯೇ ಠರಾವ್ ಮಾಡಿದ್ದೇವೆ. ಐದಾರು ವರ್ಷಗಳ ಹಿಂದೆಯೇ ಠರಾವ್ ಮಾಡಿದ್ದೇವೆ.  ಅದನ್ನೇ ಇತ್ತೀಚೆಗೆ ಮೋಹನ ಭಾಗವತ್ ಪುನರ್‌ಮನನ ಮಾಡಿದ್ದಾರೆ ಎಂದು ಹೇಳಿದರು.

ದೀಪಾವಳಿ ಆಚರಣೆ ಬಗ್ಗೆ ಪ್ರತಿಕ್ರಿಯೆ
ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಸರ ಮಾಲಿನ್ಯ ಹೆಸರಿನಲ್ಲಿ ಪಟಾಕಿ ಬೇಡ ಅಂತಾರೆ. ಆದರೆ ಇದು ದೀಪಾವಳಿಗೆ ಮಾತ್ರವೇ ಯಾಕೆ? ಅನೇಕ ವಿದೇಶಗಳಲ್ಲಿಯೂ ಪಟಾಕಿಗಳಿವೆ. ಅಲ್ಲಿಯೂ ಸಂಭ್ರಮಗಳಿದ್ದಾಗ ಪಟಾಕಿ ಹೊಡೀತಾರೆ. ಆದರೆ ಭಾರತದಲ್ಲಿ ದೀಪಾವಳಿ ಬಂದಾಗ ಮಾತ್ರ ಯಾಕೆ ಬ್ಯಾನ್ ಅಂತಾರೆ. ಪಟಾಕಿ ಮಾಡಿ, ಮಾರಾಟಕ್ಕೆ ಹಂಚಿಕೆಯಾದ ಮೇಲೆ ಬ್ಯಾನ್ ಅಂತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನರ ಕೈಗೆ ಪಟಾಕಿ ಬಂದ ಬಳಿಕ ಬ್ಯಾನ್ ಅಂತಾರೆ. ಪರಿಸರ ಮಾಲಿನ್ಯ ವಿಷಯ ಮಹತ್ವವೇ ಇದೆ. ಆದರೆ ಪಟಾಕಿ ತಯಾರಕರ ಜೀವನದ ಬಗ್ಗೆಯೂ ಚಿಂತನೆ ಮಾಡಬೇಕಲ್ಲ. ಪಟಾಕಿ ಬ್ಯಾನ್ ಮಾಡಿದ್ರೆ ಆ ಕಾರ್ಮಿಕರಿಗೆ ಏನು ಮಾಡುತ್ತಾರೆ. ಅವರ ಪುನರ್‌ವಸತಿಗೆ ಏನು ದಾರಿಗಳಿವೆ. ಈ ಎಲ್ಲವೂಗಳ ಬಗ್ಗೆಯೂ ಚಿಂತನೆ ಮಾಡಬೇಕಲ್ಲ ಎಂದು ಹೊಸಬಾಳೆ ಹೇಳಿದರು.

ಇತ್ತೀಚೆಗೆ ರಾಜ್ಯದಲ್ಲೂ ಸಹ ಮತಾಂತರ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಾಯಿಯನ್ನೇ ಕ್ರಿಶ್ಷಿಯನ್ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಇದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಈ ಬಗ್ಗೆ ಅಧಿವೇಶನದಲ್ಲಿ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿ, ಇದರ ವಿರುದ್ಧವಾಗಿ ಸೂಕ್ತ ಕಾನೂನು ಜಾರಿಗೆ ತರುವಂತೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!