ಅಕ್ಕಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಆರೋಪ; ಕೇಂದ್ರ ಸಚಿವ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಕೈ ಪಡೆ ಯತ್ನ

By Kannadaprabha NewsFirst Published Jul 7, 2023, 6:22 AM IST
Highlights

ಅಕ್ಕಿ ವಿತರಣೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಚಿಟಗುಪ್ಪಿ ಆಸ್ಪತ್ರೆ ಬಳಿಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆಯಿತು.

ಹುಬ್ಬಳ್ಳಿ (ಜು.7) : ಅಕ್ಕಿ ವಿತರಣೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಚಿಟಗುಪ್ಪಿ ಆಸ್ಪತ್ರೆ ಬಳಿಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆಯಿತು.

ಈ ವೇಳೆ ಯುವ ಕಾಂಗ್ರೆಸ್‌ ಉಸ್ತುವಾರಿ ಬಂಟಿ ಶಿನಕೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರ(Congress government) ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಅದರಂತೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರ ಪಡೆದಿದೆ. ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ವಿತರಣೆಯ ‘ಅನ್ನಭಾಗ್ಯ’ ಜಾರಿಗೊಳಿಸಿಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಅಕ್ಕಿ ನೀಡಲು ನಿರಾಕರಿಸಿದೆ. ನಾವು ಪುಕ್ಕಟೆಯಾಗಿ ಅಕ್ಕಿ ನೀಡುವಂತೆ ಮನವಿ ಮಾಡಿಲ್ಲ. ಅದಕ್ಕೆ ತಗಲುವ ಹಣ ನೀಡಿ ಅಕ್ಕಿ ಕೊಡುವಂತೆ ಮನವಿ ಮಾಡಿದರೂ ನಿರಾಕರಿಸಿರುವುದು ತೀವ್ರ ಖಂಡನಾರ್ಹ ಎಂದರು.

Latest Videos

ಬಿಜೆಪಿ ಪಕ್ಷ ಒಂದು ಪರಿವಾರ ಇದ್ದಂತೆ, ರೇಣುಕಾಚಾರ್ಯ ಜತೆ ನಾನು ಮಾತನಾಡುವೆ: ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್‌ ಕೇಳುವ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದ್ದೇ ಆದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ಸು ಕಂಡು ಬಿಜೆಪಿಗೆ ಹಿನ್ನೆಡೆಯಾಗುವ ಭಯದಿಂದಾಗಿ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಷ್ಟುಬೇಗ ಕೇಂದ್ರ ಸರ್ಕಾರವು ಅಕ್ಕಿ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಈ ವೇಳೆ ಯುವ ಕಾಂಗ್ರೆಸ್‌ ಅಧ್ಯಕ್ಷ ಇಮ್ರಾನ್‌ ಎಲಿಗಾರ, ಶಂಭುನಾಥ ದೇಸಾಯಿ, ಅಬ್ದುಲ್‌ ದೇಸಾಯಿ, ಸಂತೋಷ ರೆಡ್ಡಿ, ಪರಸಣ್ಣ ಹಿರೇಮಠ, ಬಾಬು ಗವಳಿ, ವೈಷ್ಣವಿ ಹುಬ್ಬಳ್ಳಿ, ಕಾಶಿಂ ಕುಡಲಗಿ, ಅರ್ಬಾಜ್‌ ಮನಿಯಾರ, ಅಬ್ದುಲ್‌ ಬಿಜಾಪುರ, ಸೂರಜ್‌ ಗವಳಿ, ಸರ್ಫರಾಜ್‌, ಫೈರೋಜ್‌, ನಾಯಕ, ಚೇತನ ಪಾಟೀಲ, ಇರ್ಷಾದ್‌ ಬೈಕರದಾರ, ವಿನಯ ನಾವಳ್ಳಿ, ಕಿರಣ ಕೊಡಿ ಸೇರಿದಂತೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮನವಿ ನೀಡದೇ ವಾಪಸ್‌:

ಅನ್ನಭಾಗ್ಯಕ್ಕೆ(Annabhagya) ಬೇಕಾದ ಅಕ್ಕಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಆಗ್ರಹಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ತಳ್ಳಾಟ ನೂಕಾಟವೂ ನಡೆಯಿತು.

ಪ್ರಧಾನಿ, ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ಯಾಲಯದ ಸಿಬ್ಬಂದಿಯ ಮೂಲಕ ಸಚಿವರಿಗೆ ಮನವಿ ಸಲ್ಲಿಸಲು ಮುಂದಾದರು. ಆದರೆ, ಕಚೇರಿಯಿಂದ ಯಾರೊಬ್ಬರು ಮನವಿ ಸ್ವೀಕರಿಸಲು ಆಗಮಿಸಲಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಮನವಿ ಸಲ್ಲಿಸದೇ ವಾಪಸ್ಸಾದರು.

 

ರಾಜ್ಯದಲ್ಲಿ 7ಲಕ್ಷ ಟನ್‌ ಅಕ್ಕಿ ಇದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ : ಖಂಡ್ರೆ ಕಿಡಿ

click me!