ವಲಸಿಗರಿಗೆ ಬೆಂಗ್ಳೂರು, ಮಂಗ್ಳೂರಲ್ಲಿ ಕ್ವಾರಂಟೈನ್

Published : May 06, 2020, 09:26 AM ISTUpdated : May 06, 2020, 09:30 AM IST
ವಲಸಿಗರಿಗೆ ಬೆಂಗ್ಳೂರು, ಮಂಗ್ಳೂರಲ್ಲಿ ಕ್ವಾರಂಟೈನ್

ಸಾರಾಂಶ

ವಿದೇಶಿ ವಲಸಿಗರಿಗೆ ಬೆಂಗಳೂರು, ಮಂಗಳೂರಲ್ಲಿ ಕ್ವಾರಂಟೈನ್‌ | ವಿವಿಧ ದೇಶಗಳಿಂದ 10,823 ಮಂದಿ ರಾಜ್ಯಕ್ಕೆ ಬರುವ ಸಾಧ್ಯತೆ | ಮೊದಲ ಹಂತದಲ್ಲಿ 6,100 ಮಂದಿ ಆಗಮನ: ಆರೋಗ್ಯ ಇಲಾಖೆ

ಬೆಂಗಳೂರು (ಮೇ. 06):  ವಿವಿಧ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ 10,823 ಮಂದಿಯನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಮಂಗಳೂರು ನಗರಗಳಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸೋಂಕು ನೆಗೆಟಿವ್‌ ಬಂದರೆ ಮಾತ್ರ ಬೇರೆ ಜಿಲ್ಲೆಗಳಲ್ಲಿರುವ ಅವರ ನಿವಾಸಗಳಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ, ಮೊದಲ ಹಂತದಲ್ಲಿ 6,100 ಮಂದಿ ಆಗಮಿಸುತ್ತಿದ್ದು, ಅವರನ್ನು ಬೆಂಗಳೂರು ಹಾಗೂ ಮಂಗಳೂರಿನಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು.

ಅಮೆರಿಕದಲ್ಲಿ ಪ್ರತಿದಿನ 3000 ಸಾವು, 2 ಲಕ್ಷ ಕೇಸು?: ಆಂತರಿಕ ರಹಸ್ಯ ದಾಖಲೆ ಬಹಿರಂಗ!

ವಿಮಾನ ನಿಲ್ದಾಣದಿಂದ ಇಳಿದು ಕ್ವಾರಂಟೈನ್‌ಗೆ ಹೋಗುವ ವೇಳೆಗೆ ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಹೋಂ ಕ್ವಾರಂಟೈನ್‌ಗೆ ಹೋಗುವವರು ಕೊರೋನಾ ವಾಚ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹಗಲಿನ ವೇಳೆ ಪ್ರತಿ ಒಂದು ಗಂಟೆಗೊಮ್ಮೆ ಫೋಟೋ ಅಪ್‌ಲೋಡ್‌ ಮಾಡಬೇಕು ಎಂದು ಸೂಚಿಸಲಾಗುವುದು ಎಂದು ಹೇಳಿದರು.

ಮಾರ್ಗಸೂಚಿಯಲ್ಲಿ ಏನಿದೆ: ವಿದೇಶದಿಂದ ಬರುವವರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗುವುದು. ಎಲ್ಲರನ್ನೂ ವಿಮಾನ ನಿಲ್ದಾಣ ಅಥವಾ ಬಂದರಿನಲ್ಲೇ ಪರಿಶೀಲನೆ ನಡೆಸಲಿದ್ದು, ದೇಶಕ್ಕೆ ಆಗಮಿಸುವಾಗ ಸೋಂಕು ಲಕ್ಷಣಗಳು ವ್ಯಕ್ತವಾಗುವವರನ್ನು (‘ಎ-ವರ್ಗ’) ಕೂಡಲೇ ಕೊರೋನಾ ನಿಗದಿತ ಆಸ್ಪತ್ರೆಗೆ ಕಳುಹಿಸಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು.

ಸೋಂಕು ಲಕ್ಷಣಗಳಿಲ್ಲದಿದ್ದರೂ ಹಿರಿಯ ನಾಗರಿಕರು, ವಯೋಸಹಜ ಅಥವಾ ಗಂಭೀರ ಕಾಯಿಲೆ ಹಿನ್ನಲೆ ಹೊಂದಿರುವವರನ್ನು (ಬಿ-ವರ್ಗವಾಗಿ) ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸೋಂಕು ಲಕ್ಷಣಗಳಿಲ್ಲದವರನ್ನು (ಸಿ-ವರ್ಗ) ಸ್ವಾಬ್‌ ಸಂಗ್ರಹಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ಮನೆಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.

ಗದಗ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹರಡುವ ಭೀತಿ: ಆತಂಕದಲ್ಲಿ ಜನತೆ..!

ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಅವರಿಗೆ ಸ್ಥಳೀಯ ದೂರವಾಣಿ ಸಂಖ್ಯೆ ಸಿಮ್‌ ಕಾರ್ಡ್‌ ವ್ಯವಸ್ಥೆ ಮಾಡಬೇಕು. ಜತೆಗೆ ಮಾಸ್ಕ್‌, ಸ್ಯಾನಿಟೈಸರ್‌ ಖರೀದಿಗೆ ಅಂಗಡಿಗಳ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೂ ವಿಮಾನ ನಿಲ್ದಾಣಗಳಲ್ಲೇ ಕ್ವಾರಂಟೈನ್‌ ಮುದ್ರೆ ಒತ್ತಲಾಗುವುದು.

ಉಳಿದಂತೆ ಎ ವರ್ಗದವರಿಗೆ 14 ದಿನಗಳ ಕಾಲ ವೈದ್ಯಕೀಯ ವ್ಯವಸ್ಥೆಯಿರುವ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಉಳಿದ 14 ದಿನಗಳ ಕಾಲ ಮನೆಗೆ ಕಳುಹಿಸಿ ನಿಗಾ ವಹಿಸಲಾಗುವುದು.

ಬಿ ವರ್ಗದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ 7 ದಿನ ಹೋಂ ಕ್ವಾರಂಟೈನ್‌, ಉಳಿದ 14 ದಿನ ನಿಗಾ ಅವಧಿ, ಸಿ ವರ್ಗದವರಿಗೆ 14 ದಿನ ಹೋಂ ಕ್ವಾರಂಟೈನ್‌ ಹಾಗೂ 14 ದಿನ ನಿಗಾ ಅವಧಿ ಎಂದು ಸೂಚಿಸಲಾಗಿದೆ.

ಮೂರು ಹಂತದಲ್ಲಿ ಪರೀಕ್ಷೆ: ಎಲ್ಲರಿಗೂ ಮೊದಲ ದಿನ ಪರೀಕ್ಷೆಗೆ ಒಳಪಡಿಸಲಾಗುವುದು. ಎ ಹಾಗೂ ಬಿ ವರ್ಗದವರಿಗೆ ಮೊದಲ ದಿನ, 5ರಿಂದ 7 ದಿನಗಳ ನಡುವೆ ಹಾಗೂ 12ನೇ ದಿನ ಸೇರಿ ಮೂರು ಬಾರಿ ಪರೀಕ್ಷೆಗಳನ್ನು ನಡೆಸಲಾಗುವುದು. ಸಿ-ವರ್ಗದವರಿಗೆ ಮೊದಲ ದಿನ ಹಾಗೂ 5-7 ದಿನ ಸೇರಿ ಎರಡು ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್