Belagavi Violence ಎಂಇಎಸ್‌ ನಿಷೇಧಿಸದಿದ್ದರೆ ಕರ್ನಾಟಕ ಬಂದ್‌, ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಕನ್ನಡ ಸಂಘಟನೆ!

Published : Dec 21, 2021, 03:48 AM IST
Belagavi Violence ಎಂಇಎಸ್‌ ನಿಷೇಧಿಸದಿದ್ದರೆ ಕರ್ನಾಟಕ ಬಂದ್‌, ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಕನ್ನಡ ಸಂಘಟನೆ!

ಸಾರಾಂಶ

ಅಧಿವೇಶನ ಮುಗಿಯುವುದರೊಳಗೆ ನಿರ್ಧಾರ ಪ್ರಕಟಿಸಿ ಮುಂದಿನ ನಡೆ ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಲ್ಲಿ ಸಭೆ ಇಂದು ಮೈಸೂರಿನಲ್ಲಿ ಸಂಸದರ ಹರಾಜು

ಬೆಂಗಳೂರು(ಡಿ.21):  ಬೆಳಗಾವಿ ವಿಧಾನಮಂಡಲ ಅಧಿವೇಶನ(Belagavi Winter Session) ಮುಗಿಯುವುದರೊಳಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ನಿಷೇಧಿಸುವ ತೀರ್ಮಾನವನ್ನು ಸರ್ಕಾರ ಪ್ರಕಟಿಸದಿದ್ದರೆ ಕರ್ನಾಟಕ ಬಂದ್‌(Karnataka Bandh) ಕರೆ ನೀಡುವುದಾಗಿ ಕನ್ನಡ ಪರ ಸಂಘಟನೆಗಳು(Pro Kannada Organisation) ಎಚ್ಚರಿಕೆ ನೀಡಿವೆ.

ಬೆಳಗಾವಿಯಲ್ಲಿ ಕನ್ನಡಿಗರ ವಿರುದ್ಧ ಪುಂಡಾಟ ನಡೆಸಿದ ಎಂಇಎಸ್‌ ಮತ್ತು ಕನ್ನಡ ಬಾವುಟ(Kannada Flag) ಸುಟ್ಟಶಿವಸೇನೆ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ ಬೆಂಗಳೂರಿನಲ್ಲಿ(Bengaluru) ಕರಾಳ ದಿನ ಆಚರಣೆ ವೇಳೆ ಕನ್ನಡಪರ ಸಂಘಟನೆಗಳು ಈ ಎಚ್ಚರಿಕೆ ನೀಡಿವೆ.

Belagavi Riot: ಕನ್ನಡ ಹೋರಾಟಗಾರರ ಮೇಲೆ ಸರ್ಕಾರದ ಪ್ರತಾಪ ಬೇಡ: ಎಚ್‌ಡಿಕೆ

ಕನ್ನಡ ಸಂಘಟನೆಗಳಾದ ವಾಟಾಳ್‌ ಪಕ್ಷ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇ ಗೌಡ ಬಣ) ಸೇರಿದಂತೆ ಹಲವು ಸಂಘಟನೆಗಳು ಕರಾಳ ದಿನದಲ್ಲಿ ಭಾಗವಹಿಸಿದ್ದವು. ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನಾನಿರತರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕನ್ನಡ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು, ಬೆಳಗಾವಿಯಲ್ಲಿ ಎಂಇಎಸ್‌ ನಡೆಸಿದ ಪುಂಡಾಟವನ್ನು ಇಡೀ ರಾಜ್ಯವೇ ಖಂಡಿಸುತ್ತಿದೆ. ಸರ್ಕಾರವು ಈ ಅಧಿವೇಶನ ಮುಗಿಯುವುದರೊಳಗೆ ರಾಜ್ಯದಲ್ಲಿ ಎಂಇಎಸ್‌ ನಿಷೇಧಕ್ಕೆ ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ರಾಜ್ಯ ಬಂದ್‌ಗೆ ಕರೆಗೆ ನೀಡುವುದಾಗಿ ಎಚ್ಚರಿಕೆ ನೀಡಿದರು.

Belagavi Violence: ಸರ್ಕಾರಕ್ಕೆ 2 ದಿನ ಟೈಮ್ ಕೊಟ್ಟ ವಾಟಾಳ್ ನಾಗರಾಜ್

ಸರ್ಕಾರ ಕನ್ನಡ ಸಂಘಟನೆಗಳ ಆಗ್ರಹಕ್ಕೆ ಮಣಿಯದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಬುಧವಾರ ನಗರದಲ್ಲಿ ಸಭೆಯೊಂದನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಕನ್ನಡ, ದಲಿತ, ಪ್ರಗತಿಪರ, ರೈತ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಇಂದು ಸಂಸದರ ಹರಾಜು:
ಉದ್ಧವ್‌ ಠಾಕ್ರೆ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಪ್ರಧಾನಿಗಳು ತಕ್ಷಣ ಅವರ ಸರ್ಕಾರವನ್ನು ವಜಾಗೊಳಿಸಬೇಕು. ಈ ಕುರಿತು ರಾಜ್ಯದ ಸಂಸದರು ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕಿತ್ತು. ಆದರೆ, ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಕನ್ನಡ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಇಂತಹ ಸಂಸದನ್ನು ಮಂಗಳವಾರ ಮೈಸೂರಿನಲ್ಲಿ ಹರಾಜು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಮಂತ್ರಣವಿಲ್ಲದೇ ಸಿನಿಮಾ ನಟರು ಆಗಮಿಸಬೇಕು:
ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಎಂಇಎಸ್‌ ನಿಷೇಧಕ್ಕೆ ಗಟ್ಟಿನಿರ್ಧಾರ ಮಾಡಬೇಕು. ಒಂದು ವೇಳೆ ನಿಷೇಧಕ್ಕೆ ಮುಂದಾಗದಿದ್ದರೆ ರಾಜ್ಯಾದ್ಯಂತ ಬಂದ್‌ ನಡೆಸಲಾಗುತ್ತದೆ. ಎಲ್ಲಾ ಸಂಘಟನೆಗಳು ಸಾಮರಸ್ಯದಿಂದ ಒಗ್ಗೂಡಿ ಭಾಗವಹಿಸಬೇಕು. ಇನ್ನು ಸಿನಿಮಾ ನಟ-ನಟಿಯರು ಸೇರಿದಂತೆ ಚಿತ್ರರಂಗದವರಿಗೆ ಯಾವುದೇ ವಿಶೇಷ ಆಮಂತ್ರಣ ನೀಡುವುದಿಲ್ಲ. ಎಲ್ಲರೂ ಖುದ್ದಾಗಿ ಬಂದು ರಾಜ್ಯ ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದರು.

ಕಪ್ಪುಬಟ್ಟೆಧರಿಸಿ ಬಂದಿದ್ದ ವಾಟಾಳ್‌:
ಕರಾಳ ದಿನಾಚರಣೆ ಹಿನ್ನೆಲೆ ಪ್ರತಿಭಟನೆಯಲ್ಲಿ ಕನ್ನಡ ವಾಟಾಳ್‌ ಪಕ್ಷದ ಸದಸ್ಯರು ಸೇರಿದಂತೆ ವಾಟಾಳ್‌ ನಾಗರಾಜ್‌ ಸಂಪೂರ್ಣ ಕಪ್ಪು ಬಟ್ಟೆಧರಿಸಿಕೊಂಡಿದ್ದರು. ಇತ್ತ ಕೆಲ ಸಂಘಟನೆಗಳ ಹೋರಾಟಗಾರರು ಖಡ್ಗ (ತಲ್ವಾರ್‌) ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.

ಹಲಸಿಯಲ್ಲೂ ಪುಂಡಾಟ: ನಾಡಧ್ವಜಕ್ಕೆ ಬೆಂಕಿ, ಬಸವಣ್ಣ ಚಿತ್ರಕ್ಕೆ ಸೆಗಣಿ
ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ ವಿಕೃತಿ, ಗೂಂಡಾಗಿರಿ ಮೆರೆದಿದ್ದ ನಾಡದ್ರೋಹಿ ಎಂಇಎಸ್‌ ಪ್ರಚೋದಿತ ಗುಂಪೊಂದು ಮತ್ತೆ ಕನ್ನಡಧ್ವಜಕ್ಕೆ, ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಕದಂಬರ ಎರಡನೇ ರಾಜಧಾನಿ ಆಗಿದ್ದ ತಾಲೂಕಿನ ಹಲಸಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಪಂ ಕಚೇರಿಯ ಮುಂಭಾಗದಲ್ಲಿ ಮೊದಲಿನಿಂದಲೂ ಇದ್ದ ನಾಡಧ್ವಜವನ್ನು ಎಂಇಎಸ್‌ ಪ್ರಚೋದಿತ ನಾಡದ್ರೋಹಿಗಳ ಗುಂಪೊಂದು ಭಾನುವಾರ ರಾತ್ರಿ ಧ್ವಜಸ್ತಂಭದಿಂದ ಇಳಿಸಿ ಸುಟ್ಟುಹಾಕಿದ್ದಲ್ಲದೆ, ಗ್ರಾಮದ ಬಸವೇಶ್ವರ ವೃತ್ತದಲ್ಲಿದ್ದ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಮತ್ತು ನಾಮಫಲಕಕ್ಕೆ ಮಸಿ ಬಳಿದು ವಿಕೃತಿ ಮೆರೆದಿದೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌