ಮಸೀದಿ ಮೈಕ್‌ ತೆಗೆಸದಿದ್ದರೆ ಮೇ.9ಕ್ಕೆ 1000 ಮಸೀದಿಗಳಲ್ಲಿ ಭಜನೆ ಮೈಕ್‌: ಮುತಾಲಿಕ್‌

By Girish GoudarFirst Published Apr 30, 2022, 9:58 AM IST
Highlights

*  ಮಸೀದಿ ಮೇಲಿನ ಮೈಕ್‌ ತೆರವುಗೊಳಿಸಲು ನಿಮಗೆ ತಾಕತ್ತಿಲ್ಲ
*  ನಮ್ಮ ದೇವಸ್ಥಾನಕ್ಕೆ ಹೇಗೆ ಬರುತ್ತೀರಾ ಬನ್ನಿ ನೋಡೋಣ
*  ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಸವಾಲು ಹಾಕಿದ ಪ್ರಮೋದ್‌ ಮುತಾಲಿಕ್‌
 

ಬೇಲೂರು(ಏ.30):  ಹುಬ್ಬಳ್ಳಿ ಗಲಭೆಕೋರರಿಗೆ(Hubballi Riots) ಸಹಾಯ ಮಾಡುತ್ತೇನೆ ಎಂದಿರುವ ಕಾಂಗ್ರೆಸ್‌ ಮುಖಂಡ ಜಮೀರ್‌ ಅಹಮ್ಮದ್‌ ನಡೆ ಅಸಂವಿಧಾನಿಕವಾದದ್ದು ಹಾಗೂ ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌(Pramod Mutalik) ಕಿಡಿಕಾರಿದ್ದಾರೆ.

ಬೇಲೂರಿನಲ್ಲಿ(Beluru) ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್‌ ಅಹಮ್ಮದ್‌(Zameer Ahmed Khan) ಅಂಥವರ ಹೇಳಿಕೆ ಮೂಲಕ ಇಸ್ಲಾಮಿನ(Islam) ಮಾನಸಿಕತೆ ಏನು ಎನ್ನುವುದು ಇವತ್ತು ಹೊರಗೆ ಬೀಳುತ್ತಿದೆ. ಕಿಡಿಗೇಡಿಗಳಿಗೆ, ರೌಡಿಗಳಿಗೆ, ದರೋಡೆಕೋರರಿಗೆ, ದೇಶದ್ರೋಹಿಗಳಿಗೆ, ಹಿಂದೂ ದೇವಸ್ಥಾನಗಳಿಗೆ(Hindu Temples) ಹಾನಿ ಮಾಡಿದವರಿಗೆ, ಆರಕ್ಷಕರನ್ನು ಕೊಲ್ಲುವ ಪ್ರಯತ್ನ ಮಾಡುವವರಿಗೆ ಹಣ, ಆಹಾರ ಕಿಟ್‌ ಕೊಡುವಂತಹದ್ದು ಸಂವಿಧಾನ ವಿರೋ​ಧಿಯಾಗಿದ್ದು, ಬಾಬರ್‌, ಔರಂಗ್‌ಜೇಬ್‌ ಮಾನಸಿಕತೆ ಜಮೀರ್‌ನಲ್ಲಿ ಜೀವಂತವಾಗಿದೆ. ಜಮೀರ್‌ ಅವರ ಶಾಸಕ ಸ್ಥಾನವನ್ನು ರದ್ದು ಮಾಡುವಂತೆ ರಾಜ್ಯಪಾಲರು ಮತ್ತು ಸಭಾಪತಿ ಪತ್ರ ಬರೆಯುತ್ತೇವೆ ಎಂದರು.

Boycott Muslim Jewellery Shop ಕೇರಳಕ್ಕೆ ಹೋಗಿ ಹೋರಾಡುತ್ತೇನೆಂದ ಮುತಾಲಿಕ್

ರೋಷನ್‌ ಬೇಗ್‌ ಹೇಳಿಕೆ ಸ್ವಾಗತಿಸುವೆ

ಮುಸ್ಲಿಂ ಸಮಾಜದ ಅಮಾಯಕರಿಗೆ ಸಹಾಯ ಮಾಡಿ. ಆದರೆ ಇಂಥವರಿಗೆ ಸಹಾಯ ಮಾಡುವುದನ್ನು ಬಲವಾಗಿ ವಿರೋ​ಧಿಸುತ್ತೇವೆ. ಹುಬ್ಬಳ್ಳಿ ಗಲಭೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೋಷನ್‌ ಬೇಗ್‌(Roshan Baig) ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ತಪ್ಪನ್ನು ಒಪ್ಪಿಕೊಂಡರೆ ಸುಧಾರಣೆ ಆಗುತ್ತದೆ. ತಪ್ಪನ್ನು ಒಪ್ಪಿಕೊಳ್ಳದೆ, ಅವರು ಮಾಡಿಲ್ಲ ಅಂತ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್‌ ಹೇಳುತ್ತಿದೆ. ಕಾಂಗ್ರೆಸ್ಸಿಗರೆ(Congress) ಮತಕ್ಕಾಗಿ ಮುಸ್ಲಿಮರನ್ನು ಓಲೈಕೆ ಮಾಡಬೇಡಿ. ಹಿಂದೂ ಸಮಾಜ, ದೇವಾಲಯದ ಮೇಲೆ ಆಗಿರುವ ದಾಳಿಯನ್ನು ನೀವು ಖಂಡಿಸಬೇಕು. ಗಲಭೆಕೋರರನ್ನು ಶಿಕ್ಷೆಗೆ ಗುರಿ ಮಾಡಿ ಅಂತ ಹೇಳಬೇಕು. ಮತಕ್ಕಾಗಿ ನೀವು ಈ ರೀತಿಯ ಹೇಳಿಕೆ ನೀಡುತ್ತಿರುವುದು ರಾಷ್ಟ್ರಕ್ಕೆ, ಸಮಾಜಕ್ಕೆ ಅಘಾತವನ್ನುಂಟು ಮಾಡುತ್ತಿದ್ದು, ಹಿಂದೂ ಸಮಾಜ ನಿಮ್ಮನ್ನು ತಿರಸ್ಕಾರ ಮಾಡುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1 ಸಾವಿರ ದೇವಸ್ಥಾನಗಳಲ್ಲಿ ಸುಪ್ರಭಾತ:

ಹಜಾನ್‌ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಮೇ 1ಕ್ಕೆ ಡೀಸಿಗಳಿಗೆ ಕೊಟ್ಟಂತಹ ಗಡುವು ಮುಕ್ತಾಯವಾಗುತ್ತದೆ. ಸರ್ಕಾರ ಮೈಕ್‌ಗಳನ್ನು ತೆರವುಗೊಳಿಸದೆ ಇದ್ದರೆ ಮೇ 9ರಂದು ಇಡೀ ರಾಜ್ಯಾದ್ಯಂತ ಬೆಳಿಗ್ಗೆ 5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್‌ ಚಾಲಿಸ್‌, ಓಂಕಾರವನ್ನ, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ತಾಕತ್ತಿದ್ದರೆ ತಡೆಯಲಿ ನೋಡೋಣ. ಮಸೀದಿ ಮೇಲಿನ ಮೈಕ್‌ ತೆರವುಗೊಳಿಸಲು ನಿಮಗೆ ತಾಕತ್ತಿಲ್ಲ, ನಮ್ಮ ದೇವಸ್ಥಾನಕ್ಕೆ ಹೇಗೆ ಬರುತ್ತೀರಾ ಬನ್ನಿ ನೋಡೋಣ. ಮೇ 9ರಂದು ಬೆ.5 ಗಂಟೆಗೆ ನಮ್ಮ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದು, ಮೊದಲು ಮಸೀದಿ ಮೇಲಿರುವ ಮೈಕ್‌ ತೆಗೆಸಿ, ಆಮೇಲೆ ನಮ್ಮ ಕಡೆ ಬನ್ನಿ ಎಂದು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಸವಾಲು ಹಾಕಿದರು.
 

click me!