ರಾಜ್ಯ ಸರ್ಕಾರದಿಂದ ಬಡವರಿಗೆ ಕಡಿಮೆ ದರದಲ್ಲಿ ಸೈಟ್‌

By Kannadaprabha NewsFirst Published Sep 27, 2021, 7:14 AM IST
Highlights
  • ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ 
  • ಅಡಚಣೆ ನಿವಾರಣೆಗೆ ಮಾತುಕತೆ ನಡೆಸುವ ಸಲುವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್‌ ಶಾ ಭೇಟಿ 

  ನವದೆಹಲಿ (ಸೆ.27): ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ (site) ದೊರಕಿಸಿಕೊಡುವ ಸಲುವಾಗಿ ಇರುವ ಅಡಚಣೆ ನಿವಾರಣೆಗೆ ಮಾತುಕತೆ ನಡೆಸುವ ಸಲುವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್‌ ಶಾ (Amit shah ) ಭೇಟಿ ಮಾಡಲು ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ತೀರ್ಮಾನಿಸಿದೆ.

ನವದೆಹಲಿಯಲ್ಲಿ ಭಾನುವಾರ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಅಧ್ಯಕ್ಷರಾದ ಬಿಜಯ್ ಕುರ್ಮಾ ಸಿಂಗ್‌ ನೇತೃತ್ವದಲ್ಲಿ ವಸತಿ ಮಹಾಮಂಡಳಿ ಕಚೇರಿಯಲ್ಲಿ ಸಾಮಾನ್ಯ ಸಭೆ ನಡೆಯಿತು. ಇದರಲ್ಲಿ ಕರ್ನಾಟಕದ ಸಹಕಾರ ಸಚಿವರೂ ಹಾಗೂ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ನಿರ್ದೇಶಕರೂ ಆಗಿರುವ ಎಸ್‌.ಟಿ.ಸೋಮಶೇಖರ್‌ (ST somashekar) ಸೇರಿದಂತೆ ಮಹಾರಾಷ್ಟ್ರ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂತೆ ಸಭೆಯಲ್ಲಿ 15ಕ್ಕೂ ಹೆಚ್ಚು ರಾಜ್ಯಗಳ ನಿರ್ದೇಶಕರು ಭಾಗವಹಿಸಿದ್ದರು.

ಲಕ್ಷಾಂತರ ರೆವಿನ್ಯೂ ಸೈಟ್‌ ಮಾಲೀಕರು ಅತಂತ್ರ..!

ರಾಷ್ಟ್ರೀಯ ವಸತಿ ನೀತಿ ಜಾರಿಗೊಳಿಸಲು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ ದೊರಕಿಸಿಕೊಡುವ ಬಗ್ಗೆ ಕೆಲವು ಅಡ್ಡಿ ಆತಂಕಗಳಿವೆ. ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕೆಲವು ಅಡಚಣೆಗಳಿದ್ದು, ಇವುಗಳನ್ನು ಪರಿಹರಿಸಲು ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಸಭೆ ತೀರ್ಮಾನಿಸಿತು. ಈ ಸಭೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಸಹಕಾರಿ ವಸತಿ ಮಹಾಮಂಡಳಿಗಳನ್ನು ಬಲಪಡಿಸಲು ಕೆಲವು ಮುಖ್ಯ ತಿದ್ದುಪಡಿ ತರಲು ಚರ್ಚಿಸಲಾಯಿತು.

ಬೆಂಗಳೂರಲ್ಲಿ ವಾರ್ಷಿಕ ಸಭೆ ನಡೆಸಲು ಎಸ್‌ಟಿಎಸ್‌ ಮನವಿ

ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಯ ಮುಂದಿನ ವಾರ್ಷಿಕ ಸಭೆಯನ್ನು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಸುವಂತೆ ಕರ್ನಾಟಕದ ಸಹಕಾರ ಸಚಿವರು ಹಾಗೂ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ನಿರ್ದೇಶಕರು ಆದ ಎಸ್‌.ಟಿ.ಸೋಮಶೇಖರ್‌ ಅವರು ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಗೆ ಮನವಿ ಮಾಡಿದ್ದಾರೆ. ಸಹಕಾರ ಸಚಿವರಾದ ಎಸ್‌.ಟಿ.ಸೋಮಶೇಖರ್‌ ಅವರು ಕಳೆದ 21 ವರ್ಷಗಳಿಂದ ಕರ್ನಾಟಕ ರಾಜ್ಯ ವಸತಿ ಮಹಾಮಂಡಳಿ ಅಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶನಿವಾರವಷ್ಟೇ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಅವರು ರಾಜ್ಯ ಸಹಕಾರ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಶಾ ಅವರನ್ನು ಆಹ್ವಾನಿಸಿದ್ದರು.

click me!