
ಯಾದಗಿರಿ/ಕಲಬುರಗಿ (ಜ.19): ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯದ ಕಲ್ಯಾಣ ಕರ್ನಾಟಕ ಭಾಗಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ವಿಭಾಗವಾರು ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಅವರ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸದ ಬಗ್ಗೆ ಕುತೂಹಲ ಹೆಚ್ಚಿದ್ದು, ಎಐಸಿಸಿ ಅಧ್ಯಕ್ಷರ ಕ್ಷೇತ್ರದಲ್ಲೂ ಪ್ರಧಾನಿ ಮೋದಿ ಪ್ರವಾಸ ನಡೆಯಲಿದೆ. ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಗಳ ಪ್ರವಾಸದ ಮೂಲಕ ಚುನಾವಣಾ ಭೂಮಿಕೆ ಸಿದ್ಧಪಡಿಸಲಿರುವ ಮೋದಿ, ಭಾಷಣದ ವೇಳೆ ಪರೋಕ್ಷವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕಾರ್ಡ್ ಬಳಕೆ, ಕಲ್ಯಾಣ ಕರ್ನಾಟಕ ಹಿಂದುಳಿದಿರುವುದರ ಬಗ್ಗೆ ಹಾಗೂ ಕಲ್ಯಾಣ ಕರ್ನಾಟಕ ಹಿಂದುಳಿದಿರುವುದರ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ.
ಸರ್ಕಾರಿ ಕಾರ್ಯಕ್ರಮಗಳಾದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮೋದಿ ಹವಾ ಎಬ್ಬಿಸಲು ಬಿಜೆಪಿ ಮುಂದಾಗಿದ್ದು, 2019ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಬಿಜೆಪಿ ನಾಯಕರು ಸೋಲಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆಗೆ ಒತ್ತು ನೀಡಬೇಕಿರುವ ಅನಿವಾರ್ಯತೆಯಿದ್ದು, ಕಲ್ಯಾಣ ಕರ್ನಾಟಕ ಭೇಟಿ ಮೂಲಕ ಒಂದು ಸುತ್ತಿನ ಎಲ್ಲಾ ವಿಭಾಗವಾರು ಭೇಟಿಯನ್ನು ಮೋದಿ ಮುಗಿಸಲಿದ್ದಾರೆ. ಆ ಮೂಲಕ ಎಲ್ಲಾ ಪ್ರದೇಶಗಳಿಗೂ ಬಿಜೆಪಿ ಆದ್ಯತೆ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಲಿದ್ದಾರೆ.
ಕರ್ನಾಟಕದ ಜನತೆಯ ನಡುವೆ ಇರಲು ಉತ್ಸುಕನಾಗಿದ್ದೇನೆ: ಕನ್ನಡದಲ್ಲಿ ಟ್ವೀಟ್ ಮಾಡಿದ ಮೋದಿ!
ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಂಜಾರ ಮತ್ತು ಎಸ್ಸಿ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಎಐಸಿಸಿ ಅಧ್ಯಕ್ಷರ ಕ್ಷೇತ್ರದಲ್ಲಿ ಮತ ಬ್ಯಾಂಕ್ ಸದೃಢಗೊಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡಲಿದೆ. ಮಳಖೇಡದಲ್ಲಿ ಸುಮಾರು 51 ಸಾವಿರದಷ್ಟು ಬಂಜಾರ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ ಮಾಡಲಿದ್ದು, ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 4.5 ಲಕ್ಷದಷ್ಟು ಎಸ್.ಸಿ. ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಸುಮಾರು 2.5 ಲಕ್ಷದಷ್ಟು ಬಂಜಾರಾ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದ್ದು, ಕಳೆದ ಬಾರಿ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆರನ್ನು ಸೋಲಿಸಿದ್ದರು.
ಇಂದಿನ ಕಾರ್ಯಕ್ರಮದ ಮೂಲಕ ಖರ್ಗೆ ಕ್ಷೇತ್ರದಲ್ಲಿ ಚುನಾವಣಾ ಭೂಮಿಕೆ ಸಿದ್ಧಪಡಿಸಲು ಹೊರಟಿರುವ ಬಿಜೆಪಿ, ಖರ್ಗೆ ಕ್ಷೇತ್ರದಲ್ಲಿ ಹಲವು ವರ್ಷದಿಂದ ಬಂಜಾರಾ ಸಮುದಾಯಕ್ಕೆ ನ್ಯಾಯ ಸಿಕ್ಕಿರಲಿಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡಲಿದೆ. ರಾಜ್ಯದಲ್ಲಿ ಒಟ್ಟು ಸುಮಾರು 1 ಲಕ್ಷದಷ್ಟು ಬಂಜಾರಾ ಸಮುದಾಯಕ್ಕೆ ಹಕ್ಕುಪತ್ರ ವಿತರಣೆಯ ಗುರಿ ಇಟ್ಟುಕೊಂಡಿರುವ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಚದುರಿರುವ ಬಂಜಾರಾ ಮತಬ್ಯಾಂಕ್ಗೆ ಕೈ ಹಾಕಲು ಮೋದಿ ಪ್ರವಾಸ ಬಳಕೆ ಮಾಡಿಕೊಳ್ಳಲಿದ್ದಾರೆ.
ಸ್ವಿಜರ್ಲ್ಯಾಂಡ್ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ
ಏನೇನು ಕಾರ್ಯಕ್ರಮ?
-ಬೆ.11: ವಾಯುಪಡೆಯ ವಿಶೇಷ ವಿಮಾನದಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮನ
-11.50: ಯಾದಗಿರಿ ಜಿಲ್ಲೆ ಕೊಡೆಕಲ್ನಲ್ಲಿ 4,700 ಕೋಟಿ ರು.ಗಳ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ ವ್ಯವಸ್ಥೆ ಉದ್ಘಾಟನೆ
-12.00: ಜಲಜೀವನ್ ಮಿಷನ್ ಯೋಜನೆಯಡಿ ಯಾದಗಿರಿ ಜಿಲ್ಲೆಯ 713 ಗ್ರಾಮಗಳಿಗೆ ನೀರು ಕಲ್ಪಿಸುವ 2050 ಕೋಟಿ ರು.ಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ
-12.15: 2,000 ಕೋಟಿ ರು.ಗಳ ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ
-ಮಧ್ಯಾಹ್ನ 2: ಕಲಬುರಗಿ ಜಿಲ್ಲೆ ಮಳಖೇಡಕ್ಕೆ ಭೇಟಿ, 51,900 ತಾಂಡಾ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
-ಮಧ್ಯಾಹ್ನ 3: ಕಲಬುರಗಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ