ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

Published : Jan 19, 2023, 07:54 AM IST
ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಸಾರಾಂಶ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಿಕ್ಕಮಗಳೂರು (ಜ.19): ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳು ಪ್ರವಾಸೋದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅವಕಾಶಗಳು ಇವೆ. ಅದ್ದರಿಂದ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಸ್ವಿಜರ್‌ ಲ್ಯಾಂಡ್‌ ಮಾದರಿಯಲ್ಲಿ ಈ ಎರಡು ಜಿಲ್ಲೆಗಳನ್ನು ಪ್ರವಾಸೋದ್ಯಮದಲ್ಲಿ ಬೆಳೆಸಬೇಕೆಂಬ ಇಚ್ಛೆ ನನ್ನದಾಗಿದೆ. 

ಇದಕ್ಕೆ ಬೇಕಾಗುವಷ್ಟು ಹಣವನ್ನು ಕೊಡುತ್ತೇನೆ. ತಡ ಮಾಡದೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ‘ಹೆಲಿ ಟೂರಿಸಂ’ ಗಾಗಿ ಒಟ್ಟು 30 ಕೋಟಿ ರುಪಾಯಿ ಕೊಟ್ಟಿದ್ದೇನೆ. ಇಲ್ಲಿ ಏರ್‌ ಸ್ಟ್ರೀಪ್‌ ನಿರ್ಮಾಣಕ್ಕೆ 40 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಅದಕ್ಕೆ ಬೇಕಾದ ಹಣವನ್ನು ಮಂಜೂರು ಮಾಡುತ್ತೇನೆ. ಮುಂದಿನ ಚಿಕ್ಕಮಗಳೂರು ಹಬ್ಬದೊಳಗೆ ಈ ಕೆಲಸ ಪೂರ್ಣಗೊಳಿಸಬೇಕು ಎಂದರು. ಸಿಎಂ ಆರೋಗ್ಯ ವಾಹಿನಿಯಡಿ ಚಿಕ್ಕಮಗಳೂರು ಜಿಲ್ಲೆಗೆ 11 ಕೋಟಿ ರುಪಾಯಿ ನೀಡಲಾಗಿದೆ. ಈ ಯೋಜನೆಯನ್ನು ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು. ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಈ ಸೇವೆ ಲಭ್ಯವಾಗಲಿದೆ ಎಂದರು.

ಪುಣ್ಯಕೋಟಿ ದತ್ತು ಯೋಜನೆಗೆ 40 ಕೋಟಿ ನೀಡಿದ ರಾಜ್ಯ ಸರ್ಕಾರಿ ನೌಕರರು

ದೇಶದ ಪ್ರತಿಯೊಂದು ಮನೆಗೆ ನೀರು ಕೊಡುತ್ತೇನೆಂದು ಯಾವುದೇ ಪ್ರಧಾನಿ ಚಿಂತನೆ ಮಾಡಿರಲಿಲ್ಲ, ಧೈರ್ಯ ಮಾಡಿರಲಿಲ್ಲ. ಅದು ಅಸಾಧ್ಯದ ಮಾತು ಆಗಿತ್ತು. 70 ವರ್ಷದಲ್ಲಿ ಆಗದೆ ಇರುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ದೇಶದಲ್ಲಿ 10 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದಾರೆ. ಕಳೆದ 2 ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 50 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ. ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕುಗಳಲ್ಲಿ ಮನೆ ಮನೆಗೆ ಕುಡಿಯುವ ನೀರಿಗಾಗಿ 1400 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

ಚಿಕ್ಕಮಗಳೂರೆಂದರೆ ಅಂದ ಚೆಂದ ಸೊಬಗು, ಈ ಹಬ್ಬ ನೋಡಲು ಎರಡು ಕಣ್ಣು ಸಾಲೋದಿಲ್ಲ. ಕ್ರೀಯಾಶೀಲತೆ, ಸದಾ ಚಟುವಟಿಕೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಸಿ.ಟಿ. ರವಿ ತೊಡಗಿ ಕೊಂಡಿದ್ದಾರೆ. ಎಲ್ಲರ ಮನಸ್ಸು ಜೋಡಿಸುವ ಕೆಲಸ ಮಾಡಿದ್ದಾರೆ ಎಂದರು. ಇಲ್ಲಿಗೆ ಬರಲು ಸಂತೋಷವಾಗುತ್ತದೆ. ಇಲ್ಲಿಯ ಹವಾ, ಶುದ್ಧವಾದ ವಾತಾವರಣ ಇದೆ. ಇಲ್ಲಿಗೆ ಬಂದರೆ ನಮ್ಮ ಆರೋಗ್ಯ ಖಂಡಿತ ಉತ್ತಮವಾಗುತ್ತದೆ. ದೇಹದಲ್ಲಿ ಹೊಸ ಶಕ್ತಿ ಬರುತ್ತದೆ ಎಂದರು. ಇಡೀ ದೇಶದಲ್ಲಿ ದೇವರು ಅತ್ಯಂತ ಪ್ರೀತಿ ಮಾಡುವ ರಾಜ್ಯ ಕರ್ನಾಟಕ. ಅಷ್ಟುನಿಸರ್ಗ ನಮ್ಮ ರಾಜ್ಯಕ್ಕೆ ಕಾಣಿಕೆ ಕೊಟ್ಟಿದೆ. 

ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕವಿಗಳು ಹುಟ್ಟಿದ್ದಾರೆ, ಈ ನಾಡನ್ನು ಹಾಡಿ ಹೊಗಳಿದ್ದಾರೆ, ಕುವೆಂಪುರವರ ಹುಟ್ಟೂರು, ನಿಸರ್ಗ ಇರುವ ಕಡೆ ದೇವರು ನೆಲೆಸಿರುತ್ತಾರೆ. ನೀವೆಲ್ಲರೂ ಪುಣ್ಯವಂತರು. ಹೆಸರು ಚಿಕ್ಕದಾಗಿದ್ದರೂ ಇದರ ಖ್ಯಾತಿ ದೊಡ್ಡದಾಗಿದೆ. ಪಂಚ ನದಿಗಳು ಹುಟ್ಟಿರುವ ಏಕೈಕ ಜಿಲ್ಲೆ ಇದಾಗಿದೆ. ಇಡೀ ಕನ್ನಡ ನಾಡಿಗೆ ಈ ಜಿಲ್ಲೆ ಕೊಡುಗೆ ನೀಡದೆ. ನೀವೆಲ್ಲಾ ಪಶ್ಚಿಮಘಟ್ಟಉಳಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ಹೊಯ್ಸಳ ಸಾಮ್ರಾಜ್ಯ ಸ್ಥಾಪನೆಯಾಗಿರುವ ನಾಡು. ಕಲೆ, ಸಂಸ್ಕೃತಿ ಜಗತ್‌ ಪ್ರಸಿದ್ಧಿಯಾಗಿದೆ. ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ನಾಗಲಾಂಬಿಕೆ, ಶೃಂಗೇರಿಯ ಶಾರದಾಂಬೆಯ ನೆಲೆಬೀಡು 21ನೇ ಶತಮಾನ ಜ್ಞಾನದ ಶತಮಾನ, ಇಲ್ಲಿಂದ ಜ್ಞಾನದ ಹೊಳೆ ಇಡೀ ವಿಶ್ವಕ್ಕೆ ಹರಡಿದೆ. 

ಅದರ ನೆರಳಿಲ್ಲಿರುವ ನೀವುಗಳು ಪುಣ್ಯವಂತರು. ಹೊಟ್ಟಿಮತ್ತು ನೆತ್ತಿ ತಣ್ಣಿಗೆ ಇರಬೇಕು. ಅದಕ್ಕಾಗಿ ಅನ್ನಪೂರ್ಣೇಶ್ವರಿ, ಜ್ಞಾನ ಕೊಡುವ ಶಾರದಾಂಬೆ ಇವೆರಡು ದೇಗುಲಗಳು ಈ ನಾಡಿನಲ್ಲಿವೆ ಎಂದರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಮಾತನಾಡಿ, ಮಲೆನಾಡು ಬಯಲುಸೀಮೆ ಒಳಗೊಂಡ ಸುಂದರವಾದ ಸಿರಿಯನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು ಎಂದರು. ಈ ಬಾರಿ ಸಿ.ಟಿ. ರವಿ ಅವರಿಗೆ ಆಶೀರ್ವಾದ ಮಾಡಬೇಕು, ಪ್ರಾಮಾಣಿಕವಾಗಿ ಅವರು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸಿ.ಟಿ. ರವಿ, ನಾನು ವೋಟಿಗೆ ಮೋಸ ಮಾಡುವ ಕೆಲಸ ಮಾಡಿಲ್ಲ. 2020ರಲ್ಲಿ ಚಿಕ್ಕಮಗಳೂರು ಹಬ್ಬ ಮಾಡಲಾಗಿತ್ತು. ಆಗ ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ, ಸದ್ಯದಲ್ಲಿ ನನ್ನ ರಿಪೋರ್ಚ್‌ ಕಾರ್ಡ್‌ ನಿಮ್ಮ ಮುಂದೆ ಇಡುತ್ತೇನೆ. ನನ್ನ ಮೇಲಿರುವ ಮನೆ ಮಗನ ಸಂಬಂಧ ಹಾಗೆಯೇ ಇರಲಿ ಎಂದು ನಮಿಸಿದರು. ಇದೇ ಸಂದರ್ಭದಲ್ಲಿ ಕರ್ತಿಕೆರೆಯ ಸ್ವ ಸಹಾಯ ಮಹಿಳಾ ಒಕ್ಕೂಟಕ್ಕೆ ಸಿಎಂ ಚೆಕ್‌ ವಿತರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಾನಿ ಡಾ. ರೋನಾಲ್ಡ್‌ ಕೋಲೊಸೋ, ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀ ದೇವಮ್ಮ, ಉದ್ಯಮಿ ಕಿಶೋರ್‌ಕುಮಾರ್‌ ಹೆಗ್ಡೆ, ವಿಜ್ಞಾನಿ ಅವೇಸ್‌ ಆಹ್ಮದ್‌ ಅವರನ್ನು ಗೌರವಿಸಲಾಯಿತು.

ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್‌ ಪಕ್ಷದ 3ನೇ ಭರವಸೆ

ಕಾರ್ಯಕ್ರಮದಲ್ಲಿ ರಾಜ್ಯ ಇಂಧನ ಸಚಿವ ವಿ. ಸುನಿಲ್‌ಕುಮಾರ್‌, ವಿಧಾಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌, ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಡಿ.ಎಸ್‌. ಸುರೇಶ್‌, ಎಸ್‌.ಎಲ್‌. ಭೋಜೇಗೌಡ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಸಿಡಿಎ ಸಿ. ಆನಂದ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಆಳ್ವಾಸ್‌ ಸಂಸ್ಥೆಯ ಮೋಹನ್‌ ಆಳ್ವಾ, ಡಿಸಿ ಕೆ.ಎನ್‌. ರಮೇಶ್‌, ಜಿಪಂ ಸಿಇಒ ಜಿ. ಪ್ರಭು, ಎಸ್ಪಿ ಉಮಾ ಪ್ರಶಾಂತ್‌, ಎಡಿಸಿ ಬಿ.ಆರ್‌. ರೂಪಾ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ