ನನ್ನ ಟ್ವೀಟರ್‌ ಖಾತೆ ಹ್ಯಾಕ್‌ ಆಗಿದೆ: ಸಚಿವ ಶ್ರೀರಾಮುಲು

By Kannadaprabha NewsFirst Published Jan 19, 2023, 8:21 AM IST
Highlights

ನನ್ನ ಟ್ವೀಟರ್‌ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. 

ಕನಕಗಿರಿ(ಕೊಪ್ಪಳ) (ಜ.19): ನನ್ನ ಟ್ವೀಟರ್‌ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕರ್ನಾಟಕ ರಾಜ್ಯ ಪ್ರಗತಿ ಪಕ್ಷಕ್ಕೆ ಮತ ಹಾಕುವಂತೆ ತಮ್ಮ ಟ್ವೀಟರ್‌ ಖಾತೆ ಮೂಲಕ ಮಾಡಲಾಗಿರುವ ಮನವಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ಟ್ವೀಟರ್‌ ಖಾತೆ ಹ್ಯಾಕ್‌ ಆಗಿದೆ ಎಂದು ಸ್ಪಷ್ಟಪಡಿಸಿದರು. 

ಜತೆಗೆ, ಜನಾರ್ದನ ರೆಡ್ಡಿ ಅವರನ್ನು ನಾನು ಭೇಟಿಯಾಗುವುದರಲ್ಲಿ ತಪ್ಪೇನಿಲ್ಲ. ಅವರು ಈ ಮೊದಲು ನಮ್ಮ ಪಕ್ಷದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಮಿಗಿಲಾಗಿ ನಾವು ರೆಡ್ಡಿ ಸ್ನೇಹಿತರು ಎಂದು ಸ್ಪಷ್ಟಪಡಿಸಿದರು. ತಮ್ಮ ಆಪ್ತರ ಮೇಲೆ ಐಟಿ ದಾಳಿ ಕುರಿತು ಮಾತನಾಡಿದ ಅವರು, ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕಾನೂನಿನನ್ವಯ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದರು.

ಕರ್ನಾಟಕದ ಜನತೆಯ ನಡುವೆ ಇರಲು ಉತ್ಸುಕನಾಗಿದ್ದೇನೆ: ಕನ್ನಡದಲ್ಲಿ ಟ್ವೀಟ್ ಮಾಡಿದ ಮೋದಿ!

ಹರಿಪ್ರಸಾದರಿಗೆ ಗ್ರಾಪಂ ಸದಸ್ಯರಾಗಲು ಶಕ್ತಿ ಇಲ್ಲ: ಗ್ರಾಪಂ ಸದಸ್ಯನಾಗಲು ಶಕ್ತಿ ಇಲ್ಲದವರಿಗೆ ಬಿಜೆಪಿ ಸಚಿವರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ನೀವು ಯಾವ ಸೀಮೆ ನಾಯಕ? ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ವಿರುದ್ಧ ಹರಿಹಾಯ್ದರು.

ಬುಧವಾರ ತಾಲೂಕಿನ ಸಿರಿವಾರ ಗ್ರಾಮದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ ವಸತಿನಿಲಯದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ಮಾಧ್ಯಮದವರ ಜತೆ ಮಾತನಾಡಿ, ಕಾಂಗ್ರೆಸ್‌ನ ಹರಿಪ್ರಸಾದ ಜ. 17ರಂದು ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಸಚಿವ ಆನಂದ ಸಿಂಗ್‌ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅಲ್ಲದೆ ಶಾಸಕರನ್ನು ವೇಶ್ಯೆಗೆ ಹೋಲಿಸಿ, ಸ್ಥಾನ ಮಾರಾಟ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ. ಹರಿಪ್ರಸಾದ ಅವರಿಗೇ ಗ್ರಾಪಂ ಸದಸ್ಯನಾಗುವ ಸಾಮರ್ಥ್ಯ ಇಲ್ಲ. ಹೀಗಿರುವಾಗ ಬಿಜೆಪಿಯವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದಕ್ಕಿಂತ ಮುಂಚೆ ನಿಮ್ಮನ್ನು ನೀವು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ 17 ಶಾಸಕರ ಪೈಕಿ ಆನಂದ ಸಿಂಗ್‌ ಒಬ್ಬರು. ಆನಂದ ಸಿಂಗ್‌ ಸಜ್ಜನ ರಾಜಕಾರಣಿಯಾಗಿದ್ದರಿಂದ ಹೊಸಪೇಟೆ ಜನ ಮೂರು ಬಾರಿ ಆಯ್ಕೆ ಮಾಡಿ, ಶಾಸಕರನ್ನಾಗಿಸಿದ್ದಾರೆ. ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿರುವ ಸಿಂಗ್‌ ಮೇಲಿನ ಆರೋಪ ಸಲ್ಲ. ಆದರೆ ಹರಿಪ್ರಸಾದ ಅವರಿಗೆ ಬೆಂಗಳೂರಿನ ಜನತೆ ಸೋಲಿಸಿ ಮನೆಗೆ ಕಳುಹಿಸಿದರೂ ಹಗುರ ಮಾತುಗಳನ್ನಾಡುವುದು ಬಿಟ್ಟಿಲ್ಲ. ಮುಂದಿನ ದಿನಮಾನಗಳಲ್ಲಿ ಜನ ಹರಿಪ್ರಸಾದ ಅವರಿಗೆ ಜನ ಮತ್ತೊಮ್ಮೆ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.

click me!