ಇನ್ಮುಂದೆ ಬಡವರಿಗೆ 72 ತಾಸಿನೊಳಗೆ ಪಿಂಚಣಿ ಮಂಜೂರು: ಸಚಿವ ಅಶೋಕ್‌

By Kannadaprabha NewsFirst Published Sep 22, 2022, 8:18 AM IST
Highlights

‘ಅರ್ಹರು ಪಿಂಚಣಿ ಸೌಲಭ್ಯದಿಂದ ವಂಚಿತರಾಗದಂತೆ ತಡೆಯಲು ಕುಟುಂಬ ದತ್ತಾಂಶದಿಂದ ನಾಗರಿಕರ ಆದಾಯ ಮತ್ತು ವಯೋಮಿತಿಯ ಮಾಹಿತಿ ಪಡೆದು ಈಗಾಗಲೇ ‘ಮನೆ ಬಾಗಿಲಿಗೆ ಮಾಸಾಶನ’ ಅಭಿಯಾನ ಜಾರಿಗೊಳಿಸಲಾಗಿದೆ. 

ವಿಧಾನ ಪರಿಷತ್‌(ಸೆ.22):  ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕರು ಪಿಂಚಣಿ ಕೋರಿಕೆ ಸಲ್ಲಿಸಿದ 72 ಗಂಟೆಯೊಳಗೆ ಪಿಂಚಣಿ ಮಂಜೂರಾತಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ದೂರವಾಣಿ ಮೂಲಕ ಪಿಂಚಣಿ ಕೋರಿದರೂ ಸಹ ಕೇವಲ ಆಧಾರ್‌ ಕಾರ್ಡ್‌ ಹಾಗೂ ಮನೆಯ ಫೋಟೋ ದಾಖಲೆ ಪಡೆದು ಪಿಂಚಣಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಕಾಂಗ್ರೆಸ್‌ನ ಎಂ ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅರ್ಹರು ಪಿಂಚಣಿ ಸೌಲಭ್ಯದಿಂದ ವಂಚಿತರಾಗದಂತೆ ತಡೆಯಲು ಕುಟುಂಬ ದತ್ತಾಂಶದಿಂದ ನಾಗರಿಕರ ಆದಾಯ ಮತ್ತು ವಯೋಮಿತಿಯ ಮಾಹಿತಿ ಪಡೆದು ಈಗಾಗಲೇ ‘ಮನೆ ಬಾಗಿಲಿಗೆ ಮಾಸಾಶನ’ ಅಭಿಯಾನ ಜಾರಿಗೊಳಿಸಲಾಗಿದೆ. ಈ ಅಭಿಯಾನದಲ್ಲಿ ಇಲಾಖೆಯ ಸಂಬಂಧಪಟ್ಟಅಧಿಕಾರಿ ಸ್ವಯಂ ಪ್ರೇರಿತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ನವೋದಯ ಆ್ಯಪ್‌ ಮೂಲಕ ಪರಿಶೀಲನೆ ನಡೆಸಿ ಈವರೆಗೆ 71,632 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ’ ಎಂದು ವಿವರಿಸಿದರು.

Savings Tips: ಈ ಯೋಜನೆಗೆ ಸೇರ್ಪಡೆಯಾದ್ರೆ ರೈತರಿಗೆ ಸಿಗುತ್ತೆ ತಿಂಗಳಿಗೆ 3000ರೂ. ಪಿಂಚಣಿ

ಇದಲ್ಲದೇ, ‘ಕಂದಾಯ ಇಲಾಖೆ ‘ಹಲೋ ಕಂದಾಯ ಸಚಿವರೇ’ ಎಂಬ ಟೋಲ್‌ ಫ್ರಿ ಸಹಾಯವಾಣಿ ಆರಂಭಿಸಿದೆ. ಈ ದೂರವಾಣಿಗೆ ಕರೆ ಮಾಡಿದರೆ ಸಹಾಯವಾಣಿ ಸಿಬ್ಬಂದಿ ವ್ಯಕ್ತಿಯ ವಿವರ ಪಡೆದು ಅದನ್ನು ಸಂಬಂಧಪಟ್ಟಗ್ರಾಮ ಲೆಕ್ಕಿಗನ ಮೊಬೈಲ್‌ ನಂಬರ್‌ಗೆ ವಿವರ ಹೋಗುತ್ತದೆ. ಆತ ಮನೆಗೆ 72 ಗಂಟೆಯೊಳಗೆ ಪಿಂಚಣಿ ಮಂಜೂರಾತಿ ಆದೇಶ ನೀಡುತ್ತಾನೆ. ಫಲಾನುಭವಿಯ ಖಾತೆಗೆ ನೇರವಾಗಿ ಪಿಂಚಣಿ ಹಣ ತಲುಪುವ ವ್ಯವಸ್ಥೆ ಜಾರಿಗೆ ಮಾಡಲಾಗಿದೆ. ಈ ಕಾರ್ಯಕ್ರಮ ಅಡಿ ಈವರೆಗೆ 38,854 ಕರೆ ಸ್ವೀಕರಿಸಿದ್ದು, 30,333 ಅರ್ಹರಿಗೆ ಪಿಂಚಣಿ ಮಂಜೂರಾತಿ ಆದೇಶ ನೀಡಲಾಗಿದೆ’ ಎಂದು ಸಚಿವ ಅಶೋಕ್‌ ತಿಳಿಸಿದರು.

450 ಕೋಟಿ ರು. ಉಳಿತಾಯ:

ಈ ಹಿಂದೆ ಪಿಂಚಣಿ ಪಡೆಯುತ್ತಿದ್ದವರು ಸತ್ತಿದ್ದರೂ ಸಹ ಅವರ ಹೆಸರಿನಲ್ಲಿ ಪಿಂಚಣಿ ಹಣ ಹೋಗುತ್ತಿತ್ತು. ಆದರೆ ವ್ಯವಸ್ಥೆ ಬದಲಾವಣೆ ಮಾಡಿದ ಪರಿಣಾಮ 450 ಕೋಟಿ ರು. ಉಳಿತಾಯವಾಗಿದೆ. ಹೀಗೆ ಉಳಿದಿರುವ ಮೊತ್ತವನ್ನು ಇನ್ನೂ ಹೆಚ್ಚಿನ ಅರ್ಹರಿಗೆ ನೀಡುವಂತಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

click me!