Padma Shri Harekala Hajabba ಹರೇಕಳ ಹಾಜಬ್ಬ ವೈಯಕ್ತಿಕ ಬದುಕಿನ ನೆರವಿಗೆ 10 ಲಕ್ಷ ರೂ ನೆರವು!

By Suvarna NewsFirst Published Dec 20, 2021, 3:00 AM IST
Highlights
  • ಬಿ ಹ್ಯೂಮನ್‌ ಸಂಸ್ಥೆಯಿಂದ ಪದ್ಮ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ
  • ಹರೇಕಳ ಹಾಜಬ್ಬ ವೈಯಕ್ತಿಕ ಬದುಕಿನ ನೆರವಿಗೆ 10 ಲಕ್ಷ ರು. ಹಸ್ತಾಂತರ
  • ರಾಜ್ಯದ ಪದ್ಮ ಪುರಸ್ಕೃತರಿಗೆ ದಿಲ್ಲಿಯಲ್ಲಿ ಅಭಿನಂದನೆ

ಮಂಗಳೂರು(ಡಿ.20):  ಪದ್ಮವಿಭೂಷಣ (ಮರಣೋತ್ತರ) ಪುರಸ್ಕೃತ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ(sri vishwaprasanna theertha swamiji) ಹಾಗೂ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ(Harekala Hajabba) ಅವರನ್ನು ಮಂಗಳೂರಿನ ‘ಬಿ ಹ್ಯೂಮನ್‌’ ಸಂಸ್ಥೆಯ ವತಿಯಿಂದ ನಗರದ ಪುರಭವನದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ಪರವಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಸನ್ಮಾನ ಸ್ವೀಕರಿಸಿದರು.

ಪದ್ಮವಿಭೂಷಣ(padma vibhushan) ಪುರಸ್ಕೃತರಾದ ಡಾ.ಬಿ.ಎಂ. ಹೆಗ್ಡೆ(BM Hegde) ಅವರು ಅನಾರೋಗ್ಯ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. 

Padma Awards; ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

ಹಾಜಬ್ಬ ವೈಯಕ್ತಿಕ ಬದುಕಿಗೆ 10 ಲಕ್ಷ: 
ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅವರ ವೈಯಕ್ತಿಕ ಬದುಕಿಗೆ ನೆರವು ನೀಡುವ ಭಾಗವಾಗಿ ಬಿ ಹ್ಯೂಮನ್‌ ವತಿಯಿಂದ 10 ಲಕ್ಷ ರು. ಚೆಕ್‌ ಹಸ್ತಾಂತರಿಸಲಾಯಿತು. ಈ ಸಂದರ್ಭ ಹಾಜಬ್ಬ ಭಾವುಕರಾಗಿ ಕಣ್ಣೀರಾದರು.

ಯುನಿಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಹಬೀಬ್‌ ರಹ್ಮಾನ್‌ ಅವರು ಕೊಡುಗೆಯಾಗಿ ನೀಡಿದ ಜೀವನ ಪರ್ಯಂತ ಉಚಿತ ವೈದ್ಯಕೀಯ ವ್ಯವಸ್ಥೆಯ ದಾಖಲೆ ಪತ್ರವನ್ನು ಕೂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ನೀಡಲಾಯಿತು. ಈ ಕೊಡುಗೆಯನ್ನು ಪದ್ಮ ವಿಭೂಷಣ ಪುರಸ್ಕೃತ ಡಾ.ಬಿ.ಎಂ. ಹೆಗ್ಡೆ ಅವರಿಗೂ ನೀಡಲಾಗುವುದು ಎಂದು ಸಭೆಯಲ್ಲಿ ಘೋಷಿಸಲಾಯಿತು.

ಕನ್ನಡಪ್ರಭ ನನ್ನನ್ನು ಮೊದಲು ಗುರುತಿಸಿತು : ಪದ್ಮಶ್ರೀ ಪುರಸ್ಕೃತ ಹಾಜಬ್ಬ

ಬಳಿಕ ಮಾತನಾಡಿದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಸಮಾಜದಿಂದ ನಾವು ಸಾಕಷ್ಟುಪ್ರತಿಫಲ ಪಡೆಯುತ್ತೇವೆ. ಪಡೆದುದೆಲ್ಲವನ್ನೂ ಸಮಾಜಕ್ಕೆ ಮರಳಿಸಲು ನಮಗೆ ಸಾಧ್ಯವಿಲ್ಲ. ಆದರೆ ಅದರಲ್ಲಿ ಕಿಂಚಿತ್ತಾದರೂ ಮರಳಿಸಬೇಕು. ಆ ಮೂಲಕ ಸಮಾಜದ ಋುಣವನ್ನು ತೀರಿಸಬೇಕು ಎಂದರು. ನಮ್ಮ ಬದುಕು ಕಿತ್ತಳೆ ಹಣ್ಣಿನಂತೆ ಮುಖಾಮುಖಿಯಾಗಿರಬೇಕು. ಕಿತ್ತಳೆ ಹಣ್ಣು ಮಾರುತ್ತಲೇ ಶಾಲೆ ಕಟ್ಟಿದ ಹಾಜಬ್ಬರ ಬದುಕಿನ ಶೈಲಿ, ಗುರಿ, ಧ್ಯೇಯವನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ಪೇಜಾವರ ಹೇಳಿದರು.

ಬಿ ಹ್ಯೂಮನ್‌ ಮಂಗಳೂರು ಘಟಕಾಧ್ಯಕ್ಷ ಮುಹಮ್ಮದ್‌ ಅಮೀನ್‌ ಎಚ್‌.ಎಚ್‌. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಡಿಸಿಪಿ ಹರಿರಾಮ್‌ ಶಂಕರ್‌, ಶಾಸಕ ಯು.ಟಿ ಖಾದರ್‌, ಎ.ಕೆ.ಎಂ ಅಶ್ರಫ್‌, ಬಿ.ಎಂ. ಫಾರೂಕ್‌, ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ರಾಯ್‌ ಕ್ಯಾಸ್ಟಲಿನೊ, ಸೌದಿ ಅರೇಬಿಯಾದ ಅಲ್‌ ಮುಝೈನ್ನ ಝಕರಿಯಾ ಜೋಕಟ್ಟೆ, ಬ್ಯಾರೀಸ್‌ ಚೇಂಬರ್‌ ಆಫ್‌ ಕಾಮರ್ಸ್‌ ಆಂಡ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಎಸ್‌.ಎಂ. ರಶೀದ್‌ ಹಾಜಿ, ಹಿದಾಯ ಫೌಂಡೇಶನ್‌ ಅಧ್ಯಕ್ಷ ಮನ್ಸೂರ್‌ ಅಹ್ಮದ್‌ ಆಝಾದ್‌, ಬಿ ಹ್ಯೂಮನ್‌ ಸ್ಥಾಪಕಾಧ್ಯಕ್ಷ ಆಸೀಫ್‌ ಡೀಲ್ಸ್‌, ಮಾಜಿ ಮೇಯರ್‌ ಕೆ. ಅಶ್ರಫ್‌, ಉಡುಪಿಯ ಅಮೃತ್‌ ಶೆಣೈ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರು ಭಾಗವಹಿಸಿದ್ದರು.

harekala hajabba;ಪದ್ಮಶ್ರಿ ಪ್ರಶಸ್ತಿ ಪಡೆದು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮನದಾಳ ಬಿಚ್ಚಿಟ್ಟ ಅಕ್ಷರ ಸಂತ!

ರಾಜ್ಯದ ಪದ್ಮ ಪುರಸ್ಕೃತರಿಗೆ ದಿಲ್ಲಿಯಲ್ಲಿ ಅಭಿನಂದನೆ
ರಾಜಧಾನಿಯ ಕೆಂಪೇಗೌಡ ಫೌಂಡೇಶನ್‌ ವತಿಯಿಂದ ಪದ್ಮ ಪುರಸ್ಕಾರಕ್ಕೆ ಪಾತ್ರರಾದವರಿಗೆ ಭಾನುವಾರ ಅಭಿನಂದನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪದ್ಮ ಪುರಸ್ಕಾರಕ್ಕೆ ಭಾಜನರಾದ ನಿಮ್ಹಾನ್ಸ್‌ ಮಾಜಿ ನಿರ್ದೇಶಕ ಡಾ.ಬಿ.ಎನ್‌ ಗಂಗಾಧರ್‌, ಸುಧರ್ಮ ಪತ್ರಿಕೆಯ ಮಾಲಕಿ ಜಯಲಕ್ಷ್ಮಿ, ಪ್ಯಾರಾ ಅಥ್ಲಿಟ್‌ ಕೆ.ವೈ. ವೆಂಕಟೇಶ್‌ ಹಾಗೂ ಮಾಜಿ ಹಾಕಿ ಪಟು ಎಂ.ಪಿ. ಗಣೇಶ್‌ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು, ಈ ಕಾರ್ಯಕ್ರಮ ಪದ್ಮ ಪುರಸ್ಕೃತರನ್ನು ಸನ್ಮಾನಿಸಲು ಸೀಮಿತವಾಗಿಲ್ಲ. ಬದಲಿಗೆ ಅವರಿಂದ ಇಡೀ ಸಮಾಜಕ್ಕೆ ಪ್ರೇರಣೆ ಸಿಗಲಿದೆ. ಸಮಾಜಕ್ಕೆ ನೀಡಿದ ಕೊಡುಗೆಗಳು ಮತ್ತು ಕರ್ತವ್ಯದ ಕಾರಣಕ್ಕೆ ಅವರು ಪದ್ಮ ಪುರಸ್ಕೃತರಾಗಿದ್ದಾರೆ. ಗಣೇಶ್‌ ಅವರ ಆಟವನ್ನು ನಾವು ರೇಡಿಯೋದಲ್ಲಿ ಕೇಳುತ್ತಿದ್ದೆವು ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

click me!